ಬೆಂಗಳೂರು:ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆಗೆ ಕೃಷಿ ಇಲಾಖೆ ನೂತನ ಆಪ್ ಬಿಡುಗಡೆ ಮಾಡಿದ್ದು, ಈ ಬಾರಿ ಬೆಳೆ ಸಮೀಕ್ಷೆಯ ಹೊಣೆ ರೈತರಿಗೆ ನೀಡಲಾಗಿದೆ. ಆದರೆ ಸೂಕ್ತ ಮಾಹಿತಿ, ಮಾರ್ಗದರ್ಶನ ಹಾಗೂ ಕೆಲ ತಾಂತ್ರಿಕ ಸಮಸ್ಯೆ ಈ ಕಾರ್ಯಕ್ರಮಕ್ಕೆ ಅಡಚಣೆಯಾಗಿದೆ. ಪ್ರತಿ ವರ್ಷದ ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ರೈತರ ಬೆಳೆ ಸಮೀಕ್ಷೆ ಮಾಡುತ್ತಿದ್ದರು. ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ಸಮೀಕ್ಷೆಯ ಜವಾಬ್ದಾರಿ ನೀಡಲಾಗಿದ್ದು, ಆ.15 ರಂದು ನೂತನ ಆಪ್ ಬಿಡುಗಡೆ ಮಾಡಲಾಗಿದೆ. ಖುದ್ದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರೇ ತಮ್ಮ ಜಮೀನಿನಲ್ಲಿ ನಿಂತು ಆಪ್​ನಲ್ಲಿ ಬೆಳೆಗಳ ಬಗ್ಗೆ ಅಪ್​ಲೋಡ್ ಮಾಡಿದ್ದರು. ಎಲ್ಲರೂ ಶೀಘ್ರ ಬೆಳೆ ಸಮೀಕ್ಷೆ ಆಪ್​ಗೆ ಬೆಳೆ ಮಾಹಿತಿ ಅಪ್ಲೋಡ್ ಮಾಡುವಂತೆ ಮನವಿ ಮಾಡಿದ್ದರು.
ಶೇ.10 ಮಾಹಿತಿ ಅಪ್ಲೋಡ್:ರಾಜ್ಯದಲ್ಲಿ ಕೃಷಿ ಇಲಾಖೆಯು 210 ಲಕ್ಷ ಜಮೀನುಗಳ ಬೆಳೆ ಸಮೀಕ್ಷೆಗೆ ಗುರಿ ಇಟ್ಟುಕೊಂಡಿದೆ. ಆ.15 ರಿಂದ ಆ.24ರವರೆಗೆ 10 ದಿನದಲ್ಲಿ 21 ಲಕ್ಷ ಜಮೀನುಗಳ ಮಾಹಿತಿ ಮಾತ್ರ ರೈತರು ಅಪ್ಲೋಡ್ ಮಾಡಿದ್ದಾರೆ. ಇದು ಸರ್ಕಾರ ಇಟ್ಟುಕೊಂಡ ಗುರಿಯಲ್ಲಿ ಶೇ.10 ಪ್ರಮಾಣ ಮಾತ್ರ. ಉಳಿದ ಶೇ.90 ಭಾಗ ಜಮೀನುಗಳ ಬೆಳೆ ಮಾಹಿತಿ ಅಪ್ಲೋಡ್ ಬಾಕಿಯಿದೆ.
ಸಮಸ್ಯೆ ಹೇಗೆ?:ಬೆಳೆ ಸಮೀಕ್ಷೆ ಆಪ್​ಅನ್ನು ಗೂಗಲ್ ಪ್ಲೇ ಸ್ಟೋರ್​ನಲ್ಲಿ ಡೌನ್​ಲೋಡ್ ಮಾಡಿಕೊಂಡ ನಂತರ ರೈತರ ಹೆಸರು, ಮೊಬೈಲ್ ಸಂಖ್ಯೆ, ಒಟಿಪಿ ಸಂಖ್ಯೆ ನಮೂದಿಸಬೇಕು. ಆನಂತರ ಮೊಬೈಲ್​ನಲ್ಲಿ ಡೌನ್​ಲೋಡ್ ಮಾಸ್ಟರ್ ವಿವರ, ಡೌನ್​ಲೋಡ್ ಪಹಣಿ ಮತ್ತು ಮಾಲೀಕರ ವಿವರವನ್ನು ಕೇಳಲಾಗುತ್ತದೆ. ಅವುಗಳಲ್ಲಿ ಮಾಹಿತಿ ನೀಡಲು ಮೊಬೈಲ್​ನಲ್ಲಿ ಕಡ್ಡಾಯವಾಗಿ ಇಂಟರ್​ನೆಟ್ ಸೌಲಭ್ಯ ಇರಬೇಕಾಗುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ ಇಂಟರ್​ನೆಟ್ ಸೌಲಭ್ಯ, ನೆಟ್​ವರ್ಕ್ ಸಮಸ್ಯೆ ಇರುವುದರಿಂದ ಬೆಳೆ ಸಮೀಕ್ಷೆಗೆ ಅಡೆತಡೆ ಉಂಟಾಗುತ್ತಿದೆ. ಅಲ್ಲದೆ ಬಹುತೇಕ ರೈತರಲ್ಲಿ ಅಂಡ್ರಾಯ್್ಡ ಮೊಬೈಲ್​ಗಳಿಲ್ಲ. ಇದ್ದರೂ ಇಂಟರ್​ನೆಟ್ ಇರಲ್ಲ. ಆಪ್ ಡೌನ್​ಲೋಡ್ ಮಾಡುವಾಗಲೂ ಇಂಗ್ಲಿಷ್​ನಲ್ಲಿ ನೂರೆಂಟು ಆಪ್ಶನ್ ಎದುರಾಗಿ ಕೈ ಚೆಲ್ಲಿದವರೂ ಇದ್ದಾರೆ. ಇನ್ನೂ ಕೆಲವರಿಗೆ ಸೂಕ್ತ ಮಾಹಿತಿ ಇಲ್ಲದೆ ಪರದಾಡುವಂತಾಗಿದೆ.ಇದನ್ನೂ ಓದಿ:VIDEO | 16 ವರ್ಷಗಳ ಬಳಿಕ ಬಾರ್ಸಿಲೋನಾ ಕ್ಲಬ್‌ಗೆ ಮೆಸ್ಸಿ ಗುಡ್‌ಬೈ, ಅಭಿಮಾನಿಗಳಿಂದ ಪ್ರತಿಭಟನೆ
ಮೊಬೈಲ್ ಇದೆ. ಆದರೆ ಸಮೀಕ್ಷೆ ಮಾಡೋಕೆ ಇಂಟರ್​ನೆಟ್ ಸಮಸ್ಯೆ ಇದೆ. ಸರಿಯಾಗಿ ನೆಟ್​ವರ್ಕ್ ಸಿಗುತ್ತಿಲ್ಲ. ಅದರಿಂದ ತಾಸುಗಟ್ಟಲೆ ಕಾಯುವಂತಾಗಿದೆ. 10 ಎಕರೆಯಲ್ಲಿ ತೊಗರಿ, ಹತ್ತಿ, ಈರುಳ್ಳಿ ಬೆಳೆದಿದ್ದೇನೆ. ಸಮೀಕ್ಷೆ ಮಾಡಲು ಬೇರೆಯವರ ಸಹಾಯ ಪಡೆದುಕೊಳ್ಳಬೇಕಾಗಿದೆ.
| ಕಲ್ಲಪ್ಪ ಕುಮಟಗಿ ವಿಜಯಪುರ
ಬೆಳೆ ಸಮೀಕ್ಷೆ ಆಪ್ ಮೂಲಕ ರೈತರೇ ನೇರವಾಗಿ ಮಾಹಿತಿ ಅಪ್ಲೋಡ್ ಮಾಡುವುದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಕೊನೆಯ ದಿನಾಂಕದ ಅವಧಿ ವಿಸ್ತರಣೆ ಬಗ್ಗೆ ಅಧಿಕೃತ ಮಾಹಿತಿ ಕೃಷಿ ಇಲಾಖೆಗೆ ಲಭ್ಯವಾಗಿಲ್ಲ.
| ಬಿ.ವೈ. ಶ್ರೀನಿವಾಸ್ಕೃಷಿ ಇಲಾಖೆ ನಿರ್ದೇಶಕ
ಬೆಳೆ ಸಮೀಕ್ಷೆ ಆಪ್​ನಲ್ಲಿ ಭೂಮಿಯ ಪ್ರಕಾರ ಆಯ್ಕೆಗೆ ಅವಕಾಶವೇ ಇಲ್ಲದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಪಹಣಿ ಪತ್ರಿಕೆಯಲ್ಲಿ ಕಾಲಂ ನಂಬರ್ 12/8 ರಲ್ಲಿ ಭೂಮಿಯ ವಿಧವನ್ನು ಗುರುತಿಸಲಾಗುತ್ತದೆ. ಅದರಲ್ಲಿ ಭಾಗಾಯ್ತ (ತೋಟ), ಖುಷ್ಕಿ (ನೀರಾವರಿ ಇರುವ ಗದ್ದೆ ), ತರಿ(ಒಣ ಭೂಮಿ), ಬೆಟ್ಟ (ತೋಟಕ್ಕೆ ಬಿಟ್ಟ ಜಮೀನು), ಅರಣ್ಯ ಹೀಗೆ ಗುರುತಿಸುವ ಪದ್ಧತಿ ಇದೆ. ಕಳೆದ ಮೂರು ವರ್ಷದ ಹಿಂದೆ ಬೆಳೆ ಸಮೀಕ್ಷೆಯ ವ್ಯವಸ್ಥೆ ಜಾರಿಯಾದಾಗಿನಿಂದ ರೈತರಿಂದ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನೂ ಪಡೆಯದೇ ಸರ್ಕಾರ ಎಲ್ಲ ಜಮೀನನ್ನು ಖುಷ್ಕಿ ಎಂದೇ ಆರ್​ಟಿಸಿಯಲ್ಲಿ ಗುರುತಿಸಿಬಿಟ್ಟಿದೆ. ಈ ವರ್ಷ ಬಿಡುಗಡೆ ಮಾಡಿರುವ ಆಪ್​ನಲ್ಲೂ ಜಮೀನಿನ ಪ್ರಕಾರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವೇ ಇಲ್ಲ. ಇನ್ನು ಒಂದೇ ಜಮೀನಿನಲ್ಲಿ ಬಹು ಬೆಳೆ ಬೆಳೆಯುವವರಿಗೂ ಆಯ್ಕೆ ಅವಕಾಶ ನೀಡಿಲ್ಲ. ಜಮೀನಿನ ಪ್ರಕಾರವನ್ನು ಖುಷ್ಕಿ ಎಂದು ಆರ್​ಟಿಸಿಯಲ್ಲಿ ನಮೂದಿಸುವುದರಿಂದ ಬೆಳೆ ಸಾಲ ಪಡೆಯಲು ಸಮಸ್ಯೆ ಉಂಟಾಗುತ್ತಿದೆ. ಹಲವು ಸೊಸೈಟಿಗಳಲ್ಲಿ ಸಾಲ ನೀಡಲು ನಾಲ್ಕು ವರ್ಷದ ಹಿಂದಿನ ಪಹಣಿ ಪತ್ರಿಕೆ ಹಾಜರುಪಡಿಸುವಂತೆ ಸೂಚಿಸಲಾಗುತ್ತಿದೆ.
ರೈತರಲ್ಲಿ ಕೆಲವರಿಗೆ ಸ್ಮಾರ್ಟ್ ಫೋನ್ ಇಲ್ಲದಿದ್ದರೆ, ಸಂಬಂಧಿಕರು, ನೆರೆಹೊರೆಯವರಿಂದ ಬೆಳೆಯ ಬಗ್ಗೆ ಮಾಹಿತಿ ಅಪ್ಲೋಡ್ ಮಾಡಲು ಅವಕಾಶ ನೀಡಲಾಗಿದೆ. ಆಪ್​ನಲ್ಲಿ ಸ್ವಂತ ಅಥವಾ ಪರವಾಗಿ ಎಂಬ ಆಯ್ಕೆಗಳನ್ನು ನೀಡಲಾಗಿದೆ. ಆಗ, ಬೇರೆ ವ್ಯಕ್ತಿಗಳೂ ರೈತರ ಸಮ್ಮುಖದಲ್ಲಿ ಜಮೀನಿನ ಮಾಲೀಕನ ಮೊಬೈಲ್ ನಂಬರ್​ಗೆ ಬರುವ ಓಟಿಪಿ ಬಳಸಿಕೊಂಡು ಮಾಹಿತಿ ಅಪ್ಲೋಡ್ ಮಾಡಬಹುದು.ಇದನ್ನೂ ಓದಿ:ದೊಡ್ಡ ಸ್ಟಾರ್​ಗಳು ಕಂಬಿ ಎಣಿಸ್ತಾರೆ … ಕಂಗನಾ ಭವಿಷ್ಯ
ಅಮಾಯಕ ರೈತರನ್ನೇ ಬಂಡವಾಳ ಮಾಡಿಕೊಂಡ ಕೆಲವರು ಗ್ರಾಮೀಣ ಪ್ರದೇಶದಲ್ಲಿ ದುಡ್ಡಿಗೆ ಬೇಡಿಕೆ ಇಟ್ಟು ವಸೂಲಿ ಮಾಡುತ್ತಿರುವ ಪ್ರಸಂಗಗಳೂ ನಡೆಯುತ್ತಿವೆ. ಸ್ಮಾರ್ಟ್ ಫೋನ್ ಇರುವ ಕೆಲವರು ರೈತರ ಹೊಲಕ್ಕೆ ಹೋಗಿ ಬೆಳೆ ಸಮೀಕ್ಷೆ ಮಾಡಿ ಅಪ್​ಲೋಡ್ ಮಾಡಿಕೊಟ್ಟರೆ ಹಿಸ್ಸಾ ಅಥವಾ ಬೆಳೆಯೊಂದಕ್ಕೆ 50- 100 ರೂ. ಪಡೆಯುತ್ತಿದ್ದಾರೆ. ಬ್ಯಾಹಟ್ಟಿ, ಶಿರಗುಪ್ಪಿ ಹೋಬಳಿ ವ್ಯಾಪ್ತಿಯಲ್ಲಿ ಈ ದಂಧೆ ಹೆಚ್ಚಾಗಿದೆ ಎಂದು ರೈತರು ದೂರಿದ್ದಾರೆ. ಈ ಹಿಂದೆ ಕೃಷಿ ಇಲಾಖೆ ಪಿಆರ್​ಗಳ ಮೂಲಕ ಬೆಳೆ ಸಮೀಕ್ಷೆ ನಡೆಸುತ್ತಿತ್ತು. ಅವರಿಗೆ ಸರ್ಕಾರದಿಂದಲೇ ಒಂದು ಸರ್ವೆ ನಂಬರ್​ನ ಸಮೀಕ್ಷೆಯನ್ನು ಅಪ್​ಲೋಡ್ ಮಾಡಿದರೆ 10 ರೂ. ಗೌರವ ಧನ ನೀಡಲಾಗುತ್ತಿತ್ತು. ಈ ಬಾರಿ ಪಿಆರ್​ಗಳಿಗೆ ಗೌರವಧನವನ್ನು ಸರ್ಕಾರ ನಿಗದಿಗೊಳಿಸಿಲ್ಲ. ಹೀಗಾಗಿ ಅನೇಕ ರೈತರು ಪಿಆರ್​ಗಳ ಮೊರೆ ಹೋಗುತ್ತಿದ್ದಾರೆ. ಇವರು ರೈತರಿಂದಲೇ ಒಂದು ಸಮೀಕ್ಷೆಗೆ ಇಂತಿಷ್ಟೆಂದು ಹಣ ಕೇಳುತ್ತಿದ್ದಾರೆ. ರೈತರ ಬದಲು ಸರ್ಕಾರವೇ ಪಿಆರ್​ಗಳಿಗೆ ಹಿಂದಿನಂತೆ ಹಣ ನೀಡಿದರೆ ಅವರ ಸಹಾಯದೊಂದಿಗೆ ಸಮೀಕ್ಷೆ ಮಾಡಲು ಅನುಕೂಲವಾಗುತ್ತಿತ್ತು ಎಂಬುದು ರೈತರ ಬೇಡಿಕೆಯಾಗಿದೆ.ಇದನ್ನೂ ಓದಿ:VIDEO | ಕ್ವಾರಂಟೈನ್‌ನಲ್ಲಿ ಗಾಯಕರಾದ ಕ್ರಿಕೆಟಿಗ ಸುರೇಶ್ ರೈನಾ
ರೈತರು ಬೆಳೆ ಬಗ್ಗೆ ಮಾಹಿತಿ ಅಪ್ಲೋಡ್ ಮಾಡಲು ಆ.24ಕ್ಕೆ ಕೊನೆಯ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಇದನ್ನು ವಿಸ್ತರಣೆ ಮಾಡಿರುವ ಕುರಿತು ಸರ್ಕಾರ ಅಥವಾ ಕೃಷಿ ಇಲಾಖೆ ಯಾವುದೇ ಆದೇಶ ಹೊರಡಿಸಿಲ್ಲ. ಅವಧಿ ವಿಸ್ತರಣೆ ಕುರಿತು ಕ್ಯಾಬಿನೆಟ್​ನಲ್ಲಿ ರ್ಚಚಿಸಿ ಸೆ.23ರವರೆಗೆ ಕಾಲಾವಕಾಶ ಕೊಡಲು ತೀರ್ವನಿಸಲಾಗಿದೆ. ಈ ಬಗ್ಗೆ ಕೃಷಿ ಇಲಾಖೆಗೂ ಅಧಿಕೃತ ಮಾಹಿತಿ ರವಾನೆಯಾಗಿಲ್ಲ.
ಗಲಭೆಯ ನಡುವೆ ನವೀನ್ ಅನ್ನು ಮುಗಿಸೋಕೆ ಸ್ಕೆಚ್​ ರೂಪಿಸಿದ್ರು ಡಿಜೆ ಹಳ್ಳಿ ಗಲಭೆಕೋರರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 2 =
Remember me
