ಬೆಂಗಳೂರು:ಸಮಾಜ ಸೇವೆಯಲ್ಲಿಯೇ ದೇವರನ್ನು ಕಾಣುತ್ತಿರುವ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಗಂಗೇಭಾವಿಯ ಶಶಿಧರ ಸಿ. ಯಲಿಗಾರ ಅವರಿಗೆ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿ ವಾಹಿನಿಯ ಪ್ರತಿಷ್ಠಿತ ‘ವಿಜಯರತ್ನ- 2022’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ವಿಜಯರತ್ನ- 2022 ಪ್ರಶಸ್ತಿ ಪ್ರದಾನ ಮಾಡಲಾಯಿತು.
ಚಿತ್ರನಟಿ ಶರ್ಮಿಳಾ ಮಾಂಡ್ರೆ, ನಟ ರಮೇಶ್ ಅರವಿಂದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಆನಂದ ಸಂಕೇಶ್ವರ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
ಸಮಾಜ ಪ್ರೀತಿಸಿದ ಕುಟುಂಬ:ಎಂಟು ದಶಕಗಳ ಕಾಲ ಸಮಾಜದೊಂದಿಗೆ ಅವಿನಾಭಾವ ಸಂಬಂಧ ಹೊಂದಿ ಸೇವಾ ಕಾರ್ಯಕ್ಕೆ ಹೆಸರುವಾಸಿಯಾಗಿದ್ದ ದಿ. ಚನ್ನಬಸಪ್ಪ ಬ. ಯಲಿಗಾರ ಅವರು ಈಗಲೂ ಜನರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅದೇ ರೀತಿ ತಂದೆಯ ಹಾದಿಯಲ್ಲಿ ನಡೆಯುತ್ತಿರುವ ಅವರ ಪುತ್ರ ಶಶಿಧರ ಯಲಿಗಾರ ಅವರು ಸೇವೆಯಲ್ಲಿಯೇ ದೇವರನ್ನು ಕಾಣುತ್ತಿದ್ದಾರೆ. 2020ರ ಜನವರಿಯಲ್ಲಿ ತಂದೆ ಹೆಸರಲ್ಲಿ ಸಿ.ಬಿ. ಯಲಿಗಾರ ಸೇವಾ ಸಂಸ್ಥೆ ಹುಟ್ಟು ಹಾಕಿ ಸಮಾಜ ಸೇವೆಗೆ ಹೊಸ ಭಾಷ್ಯ ಬರೆದಿದ್ದಾರೆ. ಸಮಾಜ ಪ್ರೀತಿಸಿದ ತಂದೆಗೆ ನಿಜವಾದ ಗೌರವ ಸಲ್ಲಿಸುತ್ತಿದ್ದಾರೆ.
ಗಂಗೇಭಾವಿಯಲ್ಲಿ ಸುಮಾರು 40 ಎಕರೆಯಲ್ಲಿ ವಿಭಿನ್ನವಾದ ರೆಸಾರ್ಟ್ ನಿರ್ಮಾಣ ಮಾಡುತ್ತಿರುವ ಇವರು ಹತ್ತಾರು ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಗುಡ್ಡಗಾಡು ಜಾಗಕ್ಕೆ ಮೂರ್ತ ರೂಪ ನೀಡಿ ಜನರ ಆಕರ್ಷಣೆ ಕೇಂದ್ರವಾಗಿಸಿದ್ದಾರೆ. ಗಂಗೇಭಾವಿಯಲ್ಲಿ 15 ಅಡಿ ಆಳ ಅಗೆದಾಗ ನೀರಿನ ಸೆಲೆ ಕಾಣಿಸಿಕೊಂಡಿತ್ತು. ಆಗ ಇಲ್ಲೊಂದು ಕೆರೆ ಮಾಡಿದರೆ ಹೇಗೆ? ಎಂಬ ಆಲೋಚನೆ ಶಶಿಧರ ಅವರಿಗೆ ಬಂದಿದ್ದೇ ತಡ ಸುಂದರ ಕೆರೆಯೊಂದು ನಿರ್ಮಾಣವಾಗಿದೆ. ಆ ಮೂಲಕ ಜಲಮೂಲ ರಕ್ಷಣೆಯ ಕಾರ್ಯ ಮಾಡುತ್ತಿದ್ದಾರೆ. ಇದೀಗ ಅದರ ಸುತ್ತ ಸುಂದರ ಪರಿಸರದಲ್ಲಿ ರೆಸಾರ್ಟ್ ಕೂಡ ನಿರ್ಮಾಣವಾಗಿದೆ.
ರಂಭಾಪುರಿ ಜಗದ್ಗುರುಗಳು, ಅರಳೆಲೆ ಹಿರೇಮಠದ ಸ್ವಾಮೀಜಿ, ಸುತ್ತೂರು ಮಠದ ಸ್ವಾಮೀಜಿಗಳು ನನ್ನ ಸೇವಾ ಚಟುವಟಿಕೆ ಮೆಚ್ಚಿ ಆಶೀರ್ವದಿಸಿದ್ದಾರೆ, ಇದೀಗ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿ ವಾಹಿನಿ ನೀಡಿದ ವಿಜಯರತ್ನ ಪ್ರಶಸ್ತಿಯಿಂದ ಇನ್ನಷ್ಟು ಹುಮ್ಮಸ್ಸು ಬಂದಿದೆ.
|ಶಶಿಧರ ಯಲಿಗಾರ
ಧಾರವಾಡದಲ್ಲಿ ಬೆಳೆದರು:ಧಾರವಾಡದಲ್ಲಿ ಹುಟ್ಟಿದ ಶಶಿಧರ ಅವರು ಕೆಇ ಬೋರ್ಡ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವರೆಗೆ ಓದಿದರು. ಹೆಚ್ಚಿನ ವ್ಯಾಸಂಗ ಸಾಧ್ಯವಾಗದೆ ಕರಕುಶಲ ವಸ್ತುಗಳ ವ್ಯಾಪಾರ ಆರಂಭಿಸಿದರು. 1989ರಲ್ಲಿ ವಿವಾಹವಾಯಿತು. ಮುಂದೆ ವ್ಯಾಪಾರವನ್ನು ಧಾರವಾಡ, ಹುಬ್ಬಳ್ಳಿ, ಕೊಲ್ಲಾಪುರ, ದಾವಣಗೆರೆವರೆಗೂ ವಿಸ್ತರಿಸಿದರು. 1998ರಲ್ಲಿ ನಷ್ಟ ಅನುಭವಿಸಿದರು. ತಂದೆಯವರ ಹುಟ್ಟೂರು ಸವಣೂರು ತಾಲೂಕಿನ ಹುರಳಿಕುಪ್ಪಿಗೆ ಬಂದರು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿ 2017ಕ್ಕೆ ಶಿಗ್ಗಾಂವ ತಾಲೂಕಿನ ಗಂಗೇಭಾವಿಗೆ ಆಗಮಿಸಿದರು. ಅಲ್ಲಿಂದ ಇವರ ಉದ್ಯಮ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳು ಅವಿರತವಾಗಿ ನಡೆದಿವೆ.
ದೇಸಿ ಜಾನುವಾರುಗಳು:ಗಂಗೇಭಾವಿಯಲ್ಲಿ ಗೋಶಾಲೆ ನಿರ್ಮಿಸಿ ಸುಮಾರು 40ಕ್ಕೂ ಹೆಚ್ಚು ದೇಸಿ ಆಕಳು, ಕರುಗಳಿಗೆ ಆಶ್ರಯ ನೀಡಿದ್ದಾರೆ. ಗೋ ಉತ್ಪನ್ನಗಳನ್ನು ತಯಾರಿಸಿ ಸೇವಾ ಮನೋಭಾವನೆಯೊಂದಿಗೆ ರೆಸಾರ್ಟ್‌ಗೆ ಬರುವ ಗ್ರಾಹಕರಿಗೆ ತಲುಪಿಸುವ ಗುರಿ ಇಟ್ಟುಕೊಂಡಿದ್ದಾರೆ. ರೆಸಾರ್ಟ್‌ಗೆ ಬಂದವರಿಗೆ ಗೋ ಕಮ್ಯುನಿಕೇಷನ್‌ಗೆ ಅವಕಾಶ ನೀಡಲಾಗುತ್ತದೆ.ಪತ್ನಿ- ಮಕ್ಕಳ ಬೆಂಬಲ:ಪತ್ನಿ ಸುನಿತಾ, ಪುತ್ರರಾದ ಆಕಾಶ ಹಾಗೂ ಸೌರಭ, ಸೊಸೆ ಆದ್ಯಾ, ಮೊಮ್ಮಗಳು ಧೈರ್ಯ ಆಕಾಶ ಯಲಿಗಾರ ಅವರನ್ನು ಒಳಗೊಂಡ ತುಂಬು ಕುಟುಂಬದೊಂದಿಗೆ ಗಂಗೇಭಾವಿಯಲ್ಲಿ ನೆಲೆಸಿರುವ ಇವರು ತಮ್ಮ ಏಳ್ಗೆಯಲ್ಲಿ ಧರ್ಮಪತ್ನಿ ಹಾಗೂ ಮಕ್ಕಳು, ಆಪ್ತ ಸ್ನೇಹಿತರ ಸಹಕಾರವನ್ನು ಸ್ಮರಿಸುತ್ತಾರೆ.ಸಮಾಜಕ್ಕೆ ಕೊಡುವ ಗುಣ:2021ರಲ್ಲಿ ಇವರಿಗೆ ಕರೊನಾ ಸೋಂಕು ತಗುಲಿತ್ತು. ಒಂದು ವಾರ ಜೀವನ್ಮರಣದ ಮಧ್ಯೆ ಹೋರಾಡಿದ ಇವರು ಪುನರ್‌ಜನ್ಮ ಪಡೆದರು. ಆಗಲೇ ಇವರಿಗೆ ಅನಿಸಿದ್ದು ಜೀವನದಲ್ಲಿ ಎಷ್ಟೇ ಗಳಿಸಿದರೂ ಹೋಗುವಾಗ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು ಅಥವಾ ಕೊಟ್ಟು ಹೋಗಬೇಕು. ಹಾಗಾಗಿ ಈ ಸಮಾಜಕ್ಕಾಗಿ ಕೊಟ್ಟು ಹೋಗಬೇಕೆಂದು ನಿರ್ಧರಿಸಿದರು. ಕರೊನಾ ವಾರಿಯರ್ಸ್‌ ನರ್ಸ್, ಆಶಾ ಕಾರ್ಯಕರ್ತರು, ಪೌರಕಾರ್ಮಿಕರಿಗೆ ಆಹಾರ ಕಿಟ್ ನೀಡಿದರು. ಶಿಗ್ಗಾಂವಿ ಸವಣೂರು ತಾಲೂಕಿನ ಎಲ್ಲ ಕೊಳೆಗೇರಿ ನಿವಾಸಿಗಳು, ರಿಕ್ಷಾ ಚಾಲಕರು, ಮಂಗಳಮುಖಿಯರು, ಭಿಕ್ಷುಕರಿಗೆ ಗುಣಮಟ್ಟದ ಆಹಾರ ಕಿಟ್ ನೀಡಿದರು. ಅವರ ಮುಖದಲ್ಲಿ ನಗು ಅರಳಿದ್ದನ್ನು ಕಂಡು ಇನ್ನಷ್ಟು ಸಮಾಜ ಸೇವೆ ಮಾಡಲು ಉತ್ತೇಜನ ಪಡೆದರು. ಸಾವಿರಾರು ಕ್ಷಯ ರೋಗಿಗಳಿಗೆ ಹಾಗೂ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಿದರು. ಗಂಗೇಭಾವಿಯಲ್ಲಿರುವ ಮೀಸಲು ಪೊಲೀಸ್ ಪಡೆಯ 500 ಕುಟುಂಬಗಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಿದರು. ಎಂಟು ಸಾವಿರ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವ್ಯವಸ್ಥೆ ಮಾಡಿದರು. ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸುಮಾರು 5 ಲಕ್ಷ ನೋಟ್‌ಬುಕ್ ವಿತರಣೆ ಮಾಡಿದರು.
ಜನಸೇವಕ ಚಂದು ಪಾಟೀಲ್‌ಗೆ ವಿಜಯರತ್ನ ಗರಿ; ವಿಜಯವಾಣಿ-ದಿಗ್ವಿಜಯ ವಾಹಿನಿಯ ಪ್ರತಿಷ್ಠಿತ ಗೌರವ
ಇಂಚಲದಲ್ಲಿ ಮಲ್ಲೂರ ಮನೆತನದ ಶಿಕ್ಷಣ ಕ್ರಾಂತಿ: ಸಾಧಕ ಡಿ.ಬಿ. ಮಲ್ಲೂರಗೆ ‘ವಿಜಯರತ್ನ’ ಪುರಸ್ಕಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
