ಬೆಂಗಳೂರು:ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಕನ್ನಡದ ನಂ.1 ಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 24/7 ನ್ಯೂಸ್ ಚಾನೆಲ್ ಆಯೋಜಿಸಿದ್ದ ‘ವಿಜಯೋತ್ಸವ ಲಕ್ಕಿ ಡ್ರಾ’ನಲ್ಲಿ ಆಯ್ಕೆಯಾದ ವಿಜೇತರಿಗೆ ಬೆಂಗಳೂರಿನ ವಿಜಯವಾಣಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಕಾರು-ಬೈಕ್ ಸೇರಿ ಹಲವು ಬಹುಮಾನಗಳನ್ನು ವಿತರಿಸಲಾಯಿತು.
ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಹಾಗೂ ನಟಿ ಕಾರುಣ್ಯಾ ರಾಮ್ ವಿಜೇತರಿಗೆ ಬಹುಮಾನ ವಿತರಿಸಿದರು. ಬೆಂಗಳೂರಿನ ಭಟ್ಟರಹಳ್ಳಿ ನಿವಾಸಿ ವಿ. ಮಲ್ಲಿಕಾರ್ಜುನ ದಂಪತಿಗೆ ಕಾರ್ ಕೀ ನೀಡಲಾಯಿತು. ಗಿಫ್ಟ್ ಸ್ವೀಕರಿಸಿದ ಎಲ್ಲ ವಿಜೇತರು ಅತೀವ ಸಂತಸ ವ್ಯಕ್ತಪಡಿಸಿದರು. ಈ ಬಾರಿ ಬೆಂಗಳೂರಿನಲ್ಲಿ 11 ಲಕ್ಷಕ್ಕೂ ಹೆಚ್ಚು ಕೂಪನ್ ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಲಕ್ಕಿ ಡ್ರಾ ಮೂಲಕ 675 ವಿಜೇತರನ್ನು ಆಯ್ಕೆ ಮಾಡಲಾಗಿದ್ದು, ವಿಜೇತರಿಗೆ ಕಾರು, ಬೈಕ್, ಟಿವಿ, ರೆಫ್ರಿಜರೇಟರ್, ಬೈಸಿಕಲ್, ಚಿನ್ನದ ನಾಣ್ಯ, ವೆಟ್ ಗ್ರೈಂಡರ್​, ಸೇಫ್ ಲಾಕರ್ ಸೇರಿ ಹಲವು ಬಹುಮಾನಗಳನ್ನು ಕೊಡಮಾಡಲಾಯಿತು.
ಬಹುಮಾನ ವಿಜೇತರನ್ನು ಅಭಿನಂದಿಸಿ ಮಾತನಾಡಿದ ಆನಂದ ಸಂಕೇಶ್ವರ, ವಿಜಯವಾಣಿ ಪತ್ರಿಕೆ ಆರಂಭವಾಗಿ ಹತ್ತು ವರ್ಷ ಪೂರೈಸಿದೆ. ಶುರುವಾದ ಕೇವಲ 24 ತಿಂಗಳಲ್ಲೇ ನಂ.1 ಸ್ಥಾನಕ್ಕೆ ಏರಿತು. ಅದೇ ರೀತಿ ದಿಗ್ವಿಜಯ ವಾಹಿನಿ ಕೂಡ ಬರುವ ಏಪ್ರಿಲ್​ಗೆ ಐದು ವರ್ಷ ಪೂರೈಸುತ್ತಿದ್ದು, ಸಾಮಾಜಿಕ ವೇದಿಕೆಯಲ್ಲಿ ನಂ.1 ಸ್ಥಾನದಲ್ಲಿದೆ. ಈ ಯಶಸ್ಸಿಗೆ ಕಾರಣರಾದ ಸಿಬ್ಬಂದಿ ವರ್ಗ, ಓದುಗರು ಹಾಗೂ ವೀಕ್ಷಕರಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ವಿಜಯೋತ್ಸವ ಓದುಗರು ಮತ್ತು ವ್ಯಾಪಾರಿಗಳ ನಡುವಿನ ಬಾಂಧವ್ಯ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಕಾರು ಬಹುಮಾನವಾಗಿ ಸ್ವೀಕರಿಸಿದ ಮಲ್ಲಿಕಾರ್ಜುನ್ ಹಾಗೂ ಬೈಕ್ ಬಹುಮಾನವಾಗಿ ಪಡೆದ ಶಾಲಿನಿ ಪ್ರಸಾದ್ ದಂಪತಿ ಲಕ್ಕಿ ಡ್ರಾ ಮೂಲಕ ತಮಗೆ ದೊರೆತ ಬಹುಮಾನದ ಕುರಿತು ಸಂತಸ ವ್ಯಕ್ತಪಡಿಸಿದರು. ವಿಜಯವಾಣಿ ಪತ್ರಿಕೆ ಸಂಪಾದಕ ಕೆ.ಎನ್.ಚನ್ನೇಗೌಡ, ವಿಆರ್​ಎಲ್ ಮೀಡಿಯಾ ಉಪಾಧ್ಯಕ್ಷ ಅರುಣ್ ಕೆ.ಆರ್. ಉಪಸ್ಥಿತರಿದ್ದರು.
ದಸರಾ ಹಾಗೂ ದೀಪಾವಳಿ ಹಬ್ಬ ಸಂದರ್ಭದಲ್ಲಿ 40 ದಿನಗಳ ಕಾಲ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಆಯೋಜಿಸಿದ್ದ ವಿಜಯೋತ್ಸವ ಶಾಪಿಂಗ್ 2021ರಲ್ಲಿ ರಾಜ್ಯಾದ್ಯಂತ 75 ಲಕ್ಷಕ್ಕೂ ಅಧಿಕ ಕೂಪನ್​ಗಳು ಸಂಗ್ರಹವಾಗಿದ್ದು, ಅವುಗಳಲ್ಲಿ 2,500 ಬಹುಮಾನಗಳನ್ನು ವಿತರಿಸಲಾಗುತ್ತಿದೆ. 9 ವರ್ಷಗಳಿಂದ ಈ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಈವರೆಗೂ 20 ಸಾವಿರಕ್ಕೂ ಅಧಿಕ ವಿಜೇತರಿಗೆ ಬಹುಮಾನ ವಿತರಿಸಲಾಗಿದೆ. ಇದರಲ್ಲಿ ಯಾವುದೇ ಲೋಪದೋಷಗಳು ಆಗದಂತೆ ವಿಜಯವಾಣಿಯ ಇಡೀ ತಂಡ ಮೂರು ತಿಂಗಳ ಕಾಲ ಕಾರ್ಯನಿರ್ವಹಿಸಿದೆ ಎಂದು ಆನಂದ ಸಂಕೇಶ್ವರ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜಯೋತ್ಸವ ಒಂದೇ ಅಲ್ಲದೆ, ಪ್ರತಿ ವರ್ಷ ಎಜ್ಯುಕೇಷನ್ ಎಕ್ಸ್​ಪೋ, ಪ್ರಾಪರ್ಟಿ ಎಕ್ಸ್​ಪೋ ಸೇರಿ ಹಲವು ಉತ್ಸವಗಳನ್ನು ನಡೆಸಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ನಿಯಮ ಹಾಗೂ ಮಾರ್ಗಸೂಚಿ ಆಧರಿಸಿ ಈ ವರ್ಷವೂ ಆಯೋಜಿಸಲಾಗುವುದು. ಇದರಲ್ಲಿ ಹಲವು ಶಾಲೆಗಳು, ಡೆವಲಪರ್ಸ್ ಪಾಲ್ಗೊಳ್ಳಲಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಈ ಎಕ್ಸ್​ಪೋಗಳು ಉತ್ತಮ ವೇದಿಕೆ ಒದಗಿಸಲಿವೆ. ಇದೇ ರೀತಿ ದಿಗ್ವಿಜಯ ವಾಹಿನಿಯಲ್ಲಿ ಮಹಿಳೆಯರಿಗಾಗಿ ಲಕ್ ಲಕ್ಷ್ಮಿಯರು ಕಾರ್ಯಕ್ರಮ ನಡೆಸುತ್ತಿದ್ದು, ಸರಳ ಪ್ರಶ್ನೆಗೆ ಉತ್ತರಿಸಿದವರಿಗೆ 5 ಸಾವಿರ ರೂ. ಬಹುಮಾನ ನೀಡಲಾಗುವುದು. ಈ ಕಾರ್ಯಕ್ರಮ ನಡೆಯುವಾಗ ಅರ್ಧ ಗಂಟೆಯಲ್ಲಿ 30ರಿಂದ 35 ಸಾವಿರ ಮಿಸ್ಡ್ ಕಾಲ್​ಗಳು ಇರುತ್ತವೆ. ವಿಆರ್​ಎಲ್ ಸಾರಿಗೆಯಲ್ಲಿ ಮಹಿಳೆಯರಿಗೆ ಸುರಕ್ಷತೆಯ ಪ್ರಯಾಣದೊಂದಿಗೆ ಟಿಕೆಟ್​ನಲ್ಲಿ ರಿಯಾಯಿತಿ ಸಹ ಒದಗಿಸಲಾಗಿದೆ ಎಂದು ಆನಂದ ಸಂಕೇಶ್ವರ ತಿಳಿಸಿದರು.
ಕೋವಿಡ್​ನಂತಹ ಸಂಕಷ್ಟ ಸಂದರ್ಭದಲ್ಲೂ ವಿಜಯವಾಣಿ ಮತ್ತು ದಿಗ್ವಿಜಯ ವತಿಯಿಂದ ವಿಜಯೋತ್ಸವ ಆಚರಿಸಿ ಲಕ್ಕಿ ಡ್ರಾ ಮೂಲಕ ಬಹುಮಾನ ನೀಡುತ್ತಿರುವುದು ವಿಶೇಷವಾಗಿದೆ ಎಂದು ನಟಿ ಕಾರುಣ್ಯ ರಾಮ್ ಹೇಳಿದರು. ನನಗೆ ಬಾಲ್ಯದಿಂದಲೂ ಪತ್ರಿಕೆ ಓದುವ ಅಭ್ಯಾಸವಿದೆ. ನಮ್ಮ ಮನೆಯಲ್ಲಿ ಕನ್ನಡ ಪತ್ರಿಕೆಗೆ ಮೊದಲ ಆದ್ಯತೆ. ನಾನು ನಿತ್ಯ ತಪ್ಪದೆ ವಿಜಯವಾಣಿ ಓದುತ್ತೇನೆ. ಓದುಗರಿಗಾಗಿ ಬಹಳಷ್ಟು ಕಾರ್ಯಕ್ರಮಗಳನ್ನು ವಿಜಯವಾಣಿ ಮಾಡುತ್ತಿರುವುದು ಸಂತೋಷದ ವಿಚಾರ. ವಿಜಯವಾಣಿ ಹಾಗೂ ದಿಗ್ವಿಜಯ ಹೆಸರಿನಲ್ಲೇ ವಿಜಯ ಇದೆ ಎಂದರು. ಇಂತಹ ಬೃಹತ್ ಸಂಸ್ಥೆ ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿರುವ ಡಾ.ವಿಜಯ ಸಂಕೇಶ್ವರ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ. ಕೋವಿಡ್ ಸಂಕಷ್ಟ ಸಮಯದಲ್ಲೂ ನೌಕರರಿಗೆ ವೇತನ ನೀಡುವುದರಲ್ಲಿ ಯಾವುದೇ ಸಮಸ್ಯೆ ಮಾಡದೆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇದೀಗ ಅವರ ಜೀವನ ಚರಿತ್ರೆ (ಬಯೋಪಿಕ್) ರೂಪುಗೊಳ್ಳುತ್ತಿದ್ದು, ಅದು ಎಲ್ಲರಿಗೂ ಮಾದರಿಯಾಗಲಿದೆ ಎಂದ ಕಾರುಣ್ಯಾ ರಾಮ್ ಬಹುಮಾನ ಪಡೆದ ಎಲ್ಲರಿಗೂ ಶುಭಕೋರಿದರು.
ವಿಜೇತರ ಪಟ್ಟಿ:ವಿ.ಮಲ್ಲಿಕಾರ್ಜುನ ದಂಪತಿ- ಕಾರು, ಶಾಲಿನಿಪ್ರಸಾದ್ ದಂಪತಿ- ಬೈಕ್, ಮಂಜುನಾಥ್ ದಿಸಲೆ- ಟಿವಿ, ಬಿನೋಜ್- ರೆಫ್ರಿಜರೇಟರ್, ಕೆ.ಹನುಮಂತರಾಯ- ಬೈಸಿಕಲ್ ಬಹುಮಾನವಾಗಿ ಪಡೆದರೆ, ಎಸ್.ವಿಶಾಲ್- 3 ಗ್ರಾಂ ಚಿನ್ನದ ನಾಣ್ಯ, ರಾಜೇಶ್- ವೆಟ್ ಗ್ರೈಂಡರ್, ಪ್ರಕಾಶ್ ನಾರಾಯಣ್ ನಾಯರ್- ಸೇಫ್ ಲಾಕರ್ ತಮ್ಮದಾಗಿಸಿಕೊಂಡರು.

ಬಹುಮಾನ ಕುರಿತು ಕರೆ ಬಂದಾಗ ನಂಬಲಿಲ್ಲ. 3 ದಿನ ಕರೆಯನ್ನು ಸ್ವೀಕರಿಸಲಿಲ್ಲ. ಮತ್ತೆ ಕರೆ ಮಾಡಿ ವಿಜಯವಾಣಿ ಪತ್ರಿಕೆಯಿಂದ ಎಂದು ಹೇಳಿದಾಗ ಕಚೇರಿಗೆ ಬಂದು ವಿಚಾರಿಸಿದೆ. ಆಗ ನಂಬಿಕೆ ಬಂತು. ವಾಷಿಂಗ್​ ಮಷಿನ್ ಖರೀದಿಗೆ ಸಿಕ್ಕ ಕೂಪನ್​ನಿಂದ ಕಾರು ಬಹುಮಾನವಾಗಿ ಸಿಕ್ಕಿರುವುದು ಇನ್ನೂ ಕನಸು ಎಂದೆನಿಸುತ್ತಿದೆ. ತುಂಬಾ ಸಂತೋಷವಾಯಿತು. ಇಂತಹ ಕಾರ್ಯಕ್ರಮ ನಡೆಸಿದ ವಿಜಯವಾಣಿ ಬಳಗಕ್ಕೆ ಧನ್ಯವಾದಗಳು.
|ವಿ.ಮಲ್ಲಿಕಾರ್ಜುನಕಾರು ವಿಜೇತ




ತಾಯಿಗಾಗಿ ಶ್ರೀ ಕೃಷ್ಣ ಡೈಮಂಡ್​ನಲ್ಲಿ ಆಭರಣ ಖರೀದಿಸಿದ್ದೆವು. ಅದರಲ್ಲಿ ದೊರೆತ ಕೂಪನ್​ನಿಂದಾಗಿ ಬೈಕ್ ಬಹುಮಾನವಾಗಿ ದೊರೆತಿದ್ದು ಸಂತೋಷ ತಂದಿದೆ.
|ಶಾಲಿನಿ ಪ್ರಸಾದ್ಬೈಕ್ ವಿಜೇತೆ



ಮಗಳಿಗಾಗಿ ಹುಂಡಿ ಹಣದಲ್ಲಿ ಚಿನ್ನದ ರಿಂಗ್ ಕೊಂಡಿದ್ದೆವು. ಅದನ್ನು ಅವಳು ಹುಟ್ಟುಹಬ್ಬಕ್ಕೆ ಹಾಕಿಕೊಂಡಿದ್ದಳು. ಅದರಿಂದ ಬಹುಮಾನ ಸಿಗುತ್ತದೆ ಎಂದು ಭಾವಿಸಿರಲಿಲ್ಲ. ಲಕ್ಕಿ ಡಿಪ್ ಮೂಲಕ ನಮಗೆ ಬಹುಮಾನ ದೊರೆತಿರುವುದು ಇದೇ ಮೊದಲು. ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
|ಪ್ರಕಾಶ್ ನಾರಾಯಣ್ ನಾಯರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − three =
Remember me
