ಗುಜರಾತ್​:ಮಣ್ಣು ರಕ್ಷಣೆ ಸಲುವಾಗಿ ಜಾಗತಿಕ ಅಭಿಯಾನ ಹಮ್ಮಿಕೊಂಡಿರುವ ಈಶ ಫೌಂಡೇಷನ್​ನ ಸದ್ಗುರು 26 ದೇಶಗಳಲ್ಲಿ ಏಕಾಂಗಿಯಾಗಿ ಮೋಟರ್ ಬೈಕ್​ನಲ್ಲಿ ಪ್ರಯಾಣ ಮಾಡಿ, ಮಣ್ಣು ರಕ್ಷಣೆ ಕುರಿತು ಜಾಗೃತಿ ಮೂಡಿಸಿದ್ದು, ಸದ್ಯ ಗುಜರಾತ್​ನಲ್ಲಿದ್ದಾರೆ.
ಏಷ್ಯಾದ ಅತಿದೊಡ್ಡ ಹಾಲು ಉತ್ಪಾದಕರಲ್ಲಿ ಒಂದಾದ ಬನಾಸ್ ಡೇರಿಯು ಗುಜರಾತ್‌ನ ಪಾಲನ್‌ಪುರ್‌ನಲ್ಲಿ ಸದ್ಗುರು ಅವರನ್ನು ಸ್ವಾಗತಿಸಿದ್ದು, ಅಲ್ಲಿ ಮಣ್ಣು ಉಳಿಸಿ ಅಭಿಯಾನದ ಕುರಿತ ಸಭೆಯನ್ನು ಉದ್ದೇಶಿಸಿ ಸದ್ಗುರು ಮಾತನಾಡಿದರು. ಬನಾಸ್ ಡೇರಿ ಪ್ಲಾಂಟ್ ಅಧ್ಯಕ್ಷ ಶಂಕರಭಾಯಿ ಎಲ್. ಚೌಧರಿ ಸದ್ಗುರು ಅವರನ್ನು ಸ್ವಾಗತಿಸಿದರು.
ನಮ್ಮ ಇಡೀ ನಾಗರಿಕತೆಯನ್ನು ನಿರ್ಮಿಸಿದ ಪವಿತ್ರ ಮಣ್ಣು ಈಗ ನಾಶವಾಗುತ್ತಿದೆ, ಭಾರತದ ಶೇ. 62 ಭಾಗ ಕೃಷಿ ಭೂಮಿ ಈಗಾಗಲೆ ನಶಿಸಿದೆ. ನಾವು ಎಷ್ಟೇ ಹಣವನ್ನು ಸಂಗ್ರಹಿಸಿದರೂ ಆಹಾರಕ್ಕಾಗಿ ನಮಗೆ ಆರೋಗ್ಯಕರ ಮಣ್ಣು ಬೇಕು. ಹೀಗಾಗಿ ಮಣ್ಣು ಉಳಿಸಿ ಅಭಿಯಾನವು ಅಗತ್ಯವಾಗಿದೆ ಎಂದು ಸದ್ಗುರು ಹೇಳಿದರು.
ಇಂದು ನಾವು ಟ್ರಾಕ್ಟರ್‌ಗಳು ಮತ್ತು ಯಂತ್ರಗಳೊಂದಿಗೆ ವ್ಯವಸಾಯ ಮಾಡುತ್ತಿದ್ದೇವೆಯೇ ಹೊರತು ಸಸ್ಯಗಳು ಅಥವಾ ಪ್ರಾಣಿಗಳಿಂದಲ್ಲ. ಅವುಗಳಿಲ್ಲದೆ ಮಣ್ಣು ಎಂದಿಗೂ ಸಮೃದ್ಧವಾಗುವುದಿಲ್ಲ. ಆದರೆ ಪ್ರಾಣಿಗಳನ್ನು ಸಮಸ್ಯೆ ಎಂದು ಪರಿಗಣಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಪ್ರಾಣಿಗಳ ಮೌಲ್ಯವು ಅವುಗಳು ಉತ್ಪಾದಿಸುವ ಹಾಲಿನಿಂದ ಮಾತ್ರವಲ್ಲ, ಸಗಣಿ ರೂಪದಲ್ಲಿ ಪ್ರಾಣಿಗಳ ತ್ಯಾಜ್ಯವು ಕೂಡ ಕೃಷಿಯನ್ನು ಜೀವಂತವಾಗಿಡಲು ಪ್ರಮುಖ ವಿಷಯವಾಗಿದೆ ಎಂದರು. ಇನ್ನು 10-15 ವರ್ಷಗಳಲ್ಲಿ ನಮ್ಮ ಪ್ರಾಣಿಗಳ ಸಂಖ್ಯೆ ಅರ್ಧದಷ್ಟು ಕಡಿಮೆಯಾದರೆ ನಾವು ರಾಷ್ಟ್ರವನ್ನೇ ಸಾಶ ಮಾಡಿದಂತೆ, ನಾವು ಈ ಭೂಮಿಯಲ್ಲಿ ನಮ್ಮ ಪ್ರಾಣಿಗಳನ್ನು ಕಳೆದುಕೊಂಡ ದಿನ, ನಾವು ಮಣ್ಣನ್ನು ನಾಶಪಡಿಸಿದಂತೆ ಎಂದು ಸದ್ಗುರು ಕಿವಿಮಾತು ಹೇಳಿದರು.

ನಾವು ಭೂಮಿತಾಯಿಯನ್ನು ಜೀವಂತವಾಗಿಡಲು ಬಯಸಿದರೆ, ನಾವೆಲ್ಲರೂ ಈ ಕಾರ್ಯಾಚರಣೆಯಲ್ಲಿ ಸದ್ಗುರುಗಳನ್ನು ಬೆಂಬಲಿಸಬೇಕು ಎಂದು ಬನಾಸ್ ಡೇರಿಯ ಎಂಡಿ ಸಂಗ್ರಾಮ್ ಸಿಂಗ್ ಆಗ್ರಹಿಸಿದರು. ನಾವೆಲ್ಲರೂ ಸದ್ಗುರು ಅವರ ಈ ಧ್ಯೇಯೋದ್ದೇಶದಲ್ಲಿ ಪಾಲ್ಗೊಳ್ಳುತ್ತೇವೆ ಮತ್ತು ಮುಂದಿನ ಪೀಳಿಗೆಗೆ ಬನಸ್ ಭೂಮಿಯನ್ನು ಜೀವಂತವಾಗಿಡಲು ನಾವು ಬದ್ಧರಾಗುತ್ತೇವೆ ಎಂಬ ಈ ಪ್ರತಿಜ್ಞೆಯನ್ನು ನನ್ನೊಂದಿಗೆ ತೆಗೆದುಕೊಳ್ಳಲು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ ಎಂದು ನೆರೆದಿದ್ದ ಸಮೂಹವನ್ನು ಸಂಗ್ರಾಮ್ ಸಿಂಗ್​ ಕೇಳಿಕೊಂಡರು. ಬನಸ್ಕಾಂತದ ಜನರು ಈ ಮಾತೃಭೂಮಿಯನ್ನು ಪುನರುಜ್ಜೀವನಗೊಳಿಸಲು ಭರವಸೆ ನೀಡುವುದಾಗಿ ಸದ್ಗುರುಗಳಿಗೆ ಮಾತು ಕೊಟ್ಟರು.ರಾಜ್ಯ ಗೃಹ ಸಚಿವ ಹರ್ಷಭಾಯಿ ಸಾಂಘ್ವಿ ಅವರು ಸದ್ಗುರುಗಳ ನದಿಗಳನ್ನು ರಕ್ಷಿಸಿ ಅಭಿಯಾನದಿಂದ ಪ್ರೇರಿತರಾಗಿ ತಾಪಿ ನದಿಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಪ್ರಾರಂಭಿಸಿದ್ದೇವೆ ಎಂದು ಹೇಳಿದರು.

ಮಣ್ಣು ಉಳಿಸಿ ಅಭಿಯಾನದ ಭಾಗವಾಗಿ ಪ್ರಸ್ತುತ 100 ದಿನಗಳ 30,000 ಕಿ.ಮೀ. ದೂರದ ಏಕಾಂಗಿ ಮೋಟಾರ್‌ಸೈಕಲ್ ಪ್ರಯಾಣದಲ್ಲಿರುವ ಸದ್ಗುರು ಯುರೋಪ್, ಮಧ್ಯ ಏಷ್ಯಾ, ಮಧ್ಯಪ್ರಾಚ್ಯದ ಮೂಲಕ ಸಾಗಿ ಬಂದು, 2022ರ ಮೇ 29ರಂದು ಭಾರತದ ಪಶ್ಚಿಮ ಕರಾವಳಿ ನಗರವಾದ ಜಾಮ್‌ನಗರವನ್ನು ಸೇರಿ ಭಾರತದಲ್ಲಿ ಪ್ರಯಾಣ ಮುಂದುವರಿಸಿದರು. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಮತ್ತು ಸದ್ಗುರುಗಳ ಸಮ್ಮುಖದಲ್ಲಿ ಮಣ್ಣನ್ನು ಉಳಿಸಲು ಈಶಾ ಔಟ್‌ರೀಚ್‌ನೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಗುಜರಾತ್ ಪಾತ್ರವಾಯಿತು.
ಸದ್ಗುರುಗಳು ಭಾರತದ 9 ರಾಜ್ಯಗಳಾದ್ಯಂತ ಪ್ರಯಾಣಿಸುತ್ತ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಣ್ಣು ಉಳಿಸಿ ಅಭಿಯಾನದ ಬೈಕ್ ರ‍್ಯಾಲಿ ಪೂರ್ಣಗೊಳಿಸುತ್ತಾರೆ. ಅಲ್ಲಿ ಸದ್ಗುರು ಪ್ರಾರಂಭಿಸಿದ ಕಾವೇರಿ ಕೂಗು ಯೋಜನೆಯು 1,25,000 ರೈತರಿಗೆ 62 ಮಿಲಿಯನ್ ಮರಗಳನ್ನು ನೆಡಲು ಹಾಗು ಮಣ್ಣು ಮತ್ತು ಕಾವೇರಿ ನದಿಯನ್ನು ಪುನರುಜ್ಜೀವನಗೊಳಿಸಲು ಅನುವು ಮಾಡಿಕೊಟ್ಟಿದೆ.
ಮಣ್ಣು ಉಳಿಸಿ ಅಭಿಯಾನದ ಪ್ರಾಥಮಿಕ ಉದ್ದೇಶವೆಂದರೆ ಮಣ್ಣಿನ ಅಳಿವಿನ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ತುರ್ತು ಕಾರ್ಯನೀತಿ ಸುಧಾರಣೆಗಳ ಮೂಲಕ ಕೃಷಿ ಮಣ್ಣಿನಲ್ಲಿ ಕನಿಷ್ಠ ಶೇ. 3ರಿಂದ 6 ಜೈವಿಕ ಅಂಶ ಕಡ್ಡಾಯಗೊಳಿಸುವಂತೆ ಪ್ರಪಂಚದ ಎಲ್ಲಾ ರಾಷ್ಟ್ರಗಳನ್ನು ಆಗ್ರಹಪಡಿಸುವುದು.

ಪ್ರಸ್ತುತ ಭಾರತದಲ್ಲಿ ಕೃಷಿ ಮಣ್ಣಿನಲ್ಲಿನ ಸರಾಸರಿ ಜೈವಿಕ ಅಂಶವು ಶೇ. 0.68 ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ದೇಶದ ಮಣ್ಣು ಅಳಿವಿನ ಹಾದಿಯಲ್ಲಿದ್ದು ಮರುಭೂಮೀಕರಣದ ಅಪಾಯದಲ್ಲಿದೆ. ದೇಶದಲ್ಲಿ ಸುಮಾರು ಶೇ.30ರಷ್ಟು ಫಲವತ್ತಾದ ಮಣ್ಣು ಈಗಾಗಲೇ ಬಂಜರು ಭೂಮಿಯಾಗಿ ಮಾರ್ಪಟ್ಟಿವೆ ಮತ್ತು ಇಳುವರಿ ಪಡೆಯಲು ಅಸಮರ್ಥವಾಗಿವೆ.
ಮಣ್ಣು ಉಳಿಸಿ ಅಭಿಯಾನವು ಯುಎನ್ ಸಿಸಿಡಿ, ದಿ ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ(ಯುಎನ್ಇಪಿ), ವಿಶ್ವ ಆಹಾರ ಕಾರ್ಯಕ್ರಮ ಮತ್ತು ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಬೆಂಬಲವನ್ನು ಪಡೆದುಕೊಂಡಿದೆ. ಸದ್ಗುರು ಮಾರ್ಚ್ 21ರಂದು ಲಂಡನ್​ನಿಂದ ತಮ್ಮ ಒಬ್ಬಂಟಿ ಮೋಟರ್ ಸೈಕಲ್ ಪ್ರಯಾಣವನ್ನು ಪ್ರಾರಂಭಿಸಿದಾಗಿನಿಂದ ಪ್ರಪಂಚದ 74 ದೇಶಗಳು ತಮ್ಮ ದೇಶಗಳಲ್ಲಿ ಮಣ್ಣು ಉಳಿಸಲು ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳಲು ಒಪ್ಪಿಕೊಂಡಿವೆ.
ಶಾವಿಗೆ-ಸಂಡಿಗೆ ಒಣಗಿಸಲು ಬಳಕೆಯಾದ ಸುವರ್ಣಸೌಧ!; ಕೆಲಸ ಕಳೆದುಕೊಂಡ ಮಹಿಳೆ, ಇಂಜಿನಿಯರ್​ಗೆ ನೋಟಿಸ್​..

ಪತಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್​ಗೆ ಸಿಲುಕಿ ಪತ್ನಿ ಸಾವು; ಛಿದ್ರಗೊಂಡ ದೇಹ, ತುಂಡಾಗಿ ಬಿದ್ದ ಕೈ..

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:12 + fifteen =
Remember me
