ಶ್ರೀನಗರ:ಜಾಗತಿಕ ಒಳಿತಿನ ಒಂದು ಪ್ರಬಲ ಸಾಧನವಾಗಿ ಇಡೀ ವಿಶ್ವವೇ ಯೋಗದತ್ತ ತಿರುಗಿ ನೋಡುತ್ತಿದೆ ಎಂದು ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಆರ್ಥಿಕತೆಯನ್ನು ಪರಿವರ್ತಿಸುವ ಸಾಧ್ಯತೆಯೂ ಯೋಗಕ್ಕಿದೆ ಎಂದು ಮನಮೋಹಕ ದಾಲ್ ಸರೋವರದ ದಂಡೆಯ ಮೇಲಿನ ಎಸ್​ಕೆಐಸಿಸಿಯಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯಲ್ಲಿ ದೇಶವನ್ನು ಮುನ್ನಡೆಸಿದ ಸಂದರ್ಭ ಮೋದಿ ಹೇಳಿದರು. ಯೋಗವು ಜ್ಞಾನ ಮಾತ್ರವೇ ಅಲ್ಲ, ಅದೊಂದು ವಿಜ್ಞಾನವಾಗಿದೆ ಎಂದು ಮೋದಿ ಪ್ರತಿಪಾದಿಸಿದರು. ಜನರು ಯೋಗದ ಬಗ್ಗೆ ಮಾತನಾಡುವಾಗ ಬಹುತೇಕ ಮಂದಿ ಅದು ಅಲ್ಲಾ, ಈಶ್ವರ ಅಥವಾ ದೇವರನ್ನು ಹುಡುಕುವ ಆಧ್ಯಾತ್ಮಿಕ ಮಾರ್ಗವೆಂದು ಭಾವಿಸುತ್ತಾರೆ. ನಂತರ ಯಾವಾಗ ಬೇಕಾದರೂ ನಡೆಯಬಹುದಾದ ಆಧ್ಯಾತ್ಮಿಕ ಪಯಣದ ವಿಚಾರವನ್ನು ಬಿಡಿ. ಈಗ ನೀವು ವ್ಯಕ್ತಿತ್ವ ಬೆಳವಣಿಗೆಗೆ ಗಮನವನ್ನು ಕೇಂದ್ರೀಕರಿಸಬಹುದಾಗಿದ್ದು ಯೋಗವು ಅದರ ಭಾಗವಾಗಿದೆ ಎಂದು ಮೋದಿ ಹೇಳಿದರು.
‘ಯೋಗವನ್ನು ಆ ದೃಷ್ಟಿಯಿಂದ ನೋಡಿದರೆ, ನಿಮಗೆ ನಿಶ್ಚಿತವಾಗಿಯೂ ಅನೇಕ ಲಾಭಗಳು ಸಿಗುತ್ತವೆ. ವ್ಯಕ್ತಿತ್ವ ಬೆಳವಣಿಗೆಯಿಂದ ಸಮಾಜಕ್ಕೆ ಲಾಭವಾಗುತ್ತದೆ. ಅಂತಿಮವಾಗಿ ಅದು ಮನುಕುಲಕ್ಕೆ ಲಾಭವಾಗಿ ಪರಿಣಮಿಸುತ್ತದೆ’ ಎಂದು ಷೇರ್-ಇ-ಕಾಶ್ಮೀರ್ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ (ಎಸ್​ಕೆಐಸಿಸಿ) ಯೋಗ ದಿನಾಚರಣೆಗೆ ನೆರೆದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ವಿದೇಶಗಳಲ್ಲಿ ಯೋಗ ದಿನಾಚರಣೆ:ಸಿಂಗಾಪುರ, ಅಮೆರಿಕ, ಬ್ರಿಟನ್ ಸಹಿತ ಅನೇಕ ದೇಶಗಳು ಉತ್ಸಾಹದಿಂದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದವು. ಸಿಂಗಾಪುರದಲ್ಲಿ ಆರೋಗ್ಯ ರಾಜ್ಯ ಸಚಿವ ರಹಾಯು ಮಹ್ಝಮ್ ಮತ್ತು ಭಾರತೀಯ ಹೈ ಕಮಿಷನರ್ ಶಿಲ್ಪಕ್ ಅಂಬುಲೆ ನೂರಾರು ಜನರೊಂದಿಗೆ ಭಾಗವಹಿಸಿದರು. ದೆಹಲಿಯಲ್ಲಿರುವ ಹಲವು ದೇಶಗಳ ರಾಜತಾಂತ್ರಿಕ ಕಚೇರಿಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ವಿಶ್ವ ಯೋಗ ದಿನದ ಕಾರ್ಯಕ್ರಮ ಗಳಲ್ಲಿ ಪಾಲ್ಗೊಂಡು ಯೋಗದ ಮಹತ್ವವನ್ನು ಸಾರಿದರು.

ನೆಮ್ಮದಿಯ ಬದುಕಿಗೆ ನೆರವು:‘ಹಿಂದಿನ ಚಿಂತೆಗಳ ಹೊರೆ ಇಲ್ಲದೆ ವರ್ತಮಾನದಲ್ಲಿ ಬದುಕಲು ಯೋಗ ನಮಗೆ ನೆರವಾಗುತ್ತದೆ’ ಎಂದು ಪ್ರಧಾನಿ ಹೇಳಿದರು. ‘ನಾವು ಆಂತರಿಕವಾಗಿ ನೆಮ್ಮದಿಯಿಂದ ಇದ್ದರೆ, ಜಗತ್ತಿನ ಮೇಲೆ ಧನಾತ್ಮಕ ಪರಿಣಾಮವನ್ನೂ ಬೀರಬಹುದು. ಸಮಾಜದಲ್ಲಿ ಧನಾತ್ಮಕ ಬದಲಾವಣೆಗೆ ಯೋಗ ಹೊಸ ಮಾರ್ಗವನ್ನು ಒದಗಿಸುತ್ತಿದೆ’ ಎಂದರು.
ಜಾಗತಿಕ ನಾಯಕರ ಚರ್ಚೆ:ಯೋಗವನ್ನು ಆಚರಿಸುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದ ಮೋದಿ, ತಾವು ಹೋದಲ್ಲೆಲ್ಲ ಜಾಗತಿಕ ನಾಯಕರು ಯೋಗದ ಲಾಭಗಳ ಬಗ್ಗೆ ತಮ್ಮೊಂದಿಗೆ ರ್ಚಚಿಸುತ್ತಾರೆ ಎಂದು ತಿಳಿಸಿದರು. ಅನೇಕ ದೇಶಗಳಲ್ಲಿ ಯೋಗವು ದೈನಂದಿನ ಜೀವನದ ಭಾಗವಾಗುತ್ತಿದೆ ಎಂದರು. ತಮ್ಮ ದೇಶದಲ್ಲಿ ಯೋಗವನ್ನು ಜನಪ್ರಿಯಗೊಳಿಸಲು ಕೊಡುಗೆ ನೀಡಿದ 101 ವರ್ಷದ ಫ್ರೆಂಚ್ ಮಹಿಳೆ ಚಾರ್ಲೆಟ್ ಚೊಪಿನ್​ರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಮೋದಿ ನೆನಪಿಸಿದರು. ಉತ್ತರಾಖಂಡ ಮತ್ತು ಕೇರಳದಂಥ ರಾಜ್ಯಗಳಲ್ಲಿ ಯೋಗ ಪ್ರವಾಸೋದ್ಯಮವನ್ನು ನೋಡುತ್ತಿದ್ದೇವೆ ಎಂದು ವಿವರಿಸಿದರು.
ಪ್ರಧಾನಿ ಜತೆ ಸೆಲ್ಪಿಗಾಗಿ ಜನರ ಮನವಿ :ಪ್ರಧಾನಿ ಮೋದಿಯವರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಹೊರಾಂಗಣದಲ್ಲಿ ಆಯೋಜಿಸಲಾಗಿತ್ತು. ಆದರೆ ಬೆಳ್ಳಂಬೆಳಗ್ಗೆ ಮಳೆ ಬಿದ್ದ ಕಾರಣ ಕಾರ್ಯಕ್ರಮವನ್ನು ಒಳಾಂಗಣಕ್ಕೆ ಸ್ಥಳಾಂತರಿಸಲಾಯಿತು. ವರ್ಷಧಾರೆ ಇದ್ದರೂ ಅನೇಕ ವಿದ್ಯಾರ್ಥಿಗಳ ಸಹಿತ ನೂರಾರು ಜನರು ವಿವಿಧ ಯೋಗಾಸನ ಪ್ರದರ್ಶಿಸುವಲ್ಲಿ ಪ್ರಧಾನಿ ಮೋದಿಗೆ ಸಾಥ್ ನೀಡಿದರು. ಸೆಲ್ಪಿ ತೆಗೆಸಿಕೊಳ್ಳಲು ಜನರು ಮಾಡಿಕೊಂಡ ಮನವಿಗೆ ಮೋದಿ ಸಂತೋಷದಿಂದ ಒಪ್ಪಿಕೊಂಡರು. ಮೋದಿ, ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಲು ಮಾರ್ಚ್​ನಲ್ಲಿ ಕೊನೆಯ ಬಾರಿಗೆ ಶ್ರೀನಗರಕ್ಕೆ ಬಂದಿದ್ದರು. ಕಾರ್ಯಕ್ರಮದ ನಂತರ, ‘ಶ್ರೀನಗರದಲ್ಲಿ ಯೋಗದ ನಂತರದ ಸೆಲ್ಪಿಗಳು! ದಾಲ್ ಲೇಕ್​ನಲ್ಲಿ ಅಭೂತಪೂರ್ವ ರೋಮಾಂಚನ!’ ಎಂದು ಮೋದಿ ಎಕ್ಸ್​ನಲ್ಲಿ ಟ್ವೀಟ್ ಮಾಡಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಸೆಲ್ಪಿ ತೆಗೆಸಿಕೊಳ್ಳುತ್ತಿರುವ ಚಿತ್ರಗಳನ್ನು ಜತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಉದ್ಯಮಿಗಳಿಂದ ಮೋದಿ ಗ್ಯಾರಂಟಿ: ‘ಮೋದಿ ಕೀ ಗ್ಯಾರಂಟಿ’ ಮಾದರಿಯಲ್ಲಿ ತಾವು ಕೂಡ ತಮ್ಮ ಉತ್ಪನ್ನಗಳಿಗೆ ಗ್ಯಾರಂಟಿ ನೀಡಬಲ್ಲೆವು ಎಂದು ಜಮ್ಮು ಮತ್ತು ಕಾಶ್ಮೀರದ ಉದ್ಯಮಿಗಳು ಪ್ರಧಾನಿಗೆ ಹೇಳಿದ್ದಾರೆ. ಕಾಶ್ಮೀರಕ್ಕೆ ಭೇಟಿ ನೀಡಿದ್ದ ಮೋದಿ, ಯುವ ಉದ್ಯಮಿಗಳು ಹಾಗೂ ಸ್ಟಾರ್ಟಪ್​ಗಳೊಂದಿಗೆ ಸಂವಹನ ನಡೆಸಿದಾಗ ಉದ್ಯಮಿಗಳು ತಮ್ಮ ಉತ್ಸಾಹವನ್ನು ಪ್ರದರ್ಶಿಸಿದರು.

ಸಶಸ್ತ್ರ ಪಡೆಗಳಿಂದ ಆಚರಣೆ:ಸಿಯಾಚಿನ್ ಗ್ಲೇಷಿಯರ್​ನಿಂದ ಹಿಡಿದು ನೌಕಾಪಡೆ ಹಡಗುಗಳ ವರೆಗೆ ದೇಶದಾದ್ಯಂತ ವಿಭಿನ್ನ ವಾತಾವರಣಗಳಲ್ಲಿ ಕಾರ್ಯನಿರ್ವಹಿಸುವ ಮೂರೂ ಸೇನಾ ಪಡೆಗಳ ಮಿಲಿಟರಿ ಸಿಬ್ಬಂದಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಿ ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ನೌಕಾಪಡೆ ಸಿಬ್ಬಂದಿ ಭಾರತದ ಸಮರವಿಮಾನ ವಾಹಕ ನೌಕೆ ಐಎನ್​ಎಸ್ ವಿಕ್ರಮಾದಿತ್ಯ ಹಾಗೂ ಇತರ ನೌಕೆಗಳ ಮೇಲೆ ಯೋಗಾಸನ ಪ್ರದರ್ಶಿಸಿದರು. ರಾಷ್ಟ್ರ ರಾಜಧಾನಿಯಲ್ಲಿ ವಾಯು ಪಡೆಯ ಹಲವಾರು ಯೋಧರು ಮತ್ತು ಅಧಿಕಾರಿಗಳು ಏರ್ ಫೋರ್ಸ್ ಸ್ಟೇಷನ್​ನಲ್ಲಿ ಜಮಾಯಿಸಿ ಯೋಗ ಪ್ರದರ್ಶನ ನಡೆಸಿ ಕೊಟ್ಟರು.

100 ವರ್ಷ ಬದುಕಲು ನೆರವು:ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದೆ 100 ವರ್ಷ ಕಾಲ ಬದುಕಲು ಯೋಗದ ಆಚರಣೆ ನೆರವಾಗುತ್ತದೆ ಎಂದು ಮಧ್ಯ ಪ್ರದೇಶ ಸಿಎಂ ಮೋಹನ್ ಯಾದವ್ ಅಭಿಪ್ರಾಯ ಪಟ್ಟಿದ್ದಾರೆ. ಯೋಗದ ಮೂಲಕ ದೈಹಿಕ ಫಿಟ್​ನೆಸ್ ಜತೆ ಆಹಾರವೂ ಮುಖ್ಯವಾದುದು ಎಂದು ಈ ಸಂದರ್ಭ ಸಿರಿಧಾನ್ಯ ಪ್ರೋತ್ಸಾಹಕ್ಕಾಗಿ ‘ಶ್ರೀ ಅನ್ನ ಸಂವರ್ಧನಾ ಅಭಿಯಾನ’ಕ್ಕೆ ಯಾದವ್ ಚಾಲನೆ ನೀಡಿದ ಯಾದವ್ ಹೇಳಿದರು.
್ಝರೋಗ್ಯಪೂರ್ಣ ಸಮಾಜಕ್ಕೆ ಯೋಗ:ಆರೋಗ್ಯಕರ ಜೀವನ ಮಾತ್ರವಲ್ಲದೆ ಆರೋಗ್ಯಪೂರ್ಣ ಸಮಾಜ ಸೃಷ್ಟಿಸಲು ಕೂಡ ಯೋಗ ಅಗತ್ಯ ಎಂದು ಛತ್ತೀಸ್​ಗಢ ಸಿಎಂ ವಿಷ್ಣು ದೇವ ಸಾಯಿ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ: 40 ಲಕ್ಷ ರೂಪಾಯಿ ಕೈ ಸಾಲ ಕೊಟ್ಟ ಮೋಹನ್‌ರಾಜ್‌ ನಾಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
