ಮುಂಬೈ:ದೆಹಲಿಯಲ್ಲಿ ನಡೆದ ರೈತ ಪ್ರತಿಭಟನಾಕಾರರ ಹಿಂಸಾಚಾರಕ್ಕೆ ಸಂಬಂಧಿಸಿದ ಟೂಲ್​ಕಿಟ್​ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರೆಂಬ ಆರೋಪ ಎದುರಿಸುತ್ತಿರುವ ವಕೀಲೆ ನಿಕಿತಾ ಜೇಕಬ್​ಗೆ ಬಾಂಬೆ ಹೈಕೋರ್ಟ್ ಅಸ್ಥಿರ ನಿರೀಕ್ಷಣಾ ಜಾಮೀನು ನೀಡಿದೆ. ದೆಹಲಿ ಪೊಲೀಸ್ ವಿಶೇಷ ಘಟಕ ದಾಖಲಿಸಿರುವ ಪ್ರಕರಣದಲ್ಲಿ ಬಂಧನಕ್ಕೊಳಗಾದಲ್ಲಿ, 25,000 ರೂಪಾಯಿ ಪರ್ಸನಲ್ ಬಾಂಡ್ ಮತ್ತು ಶೂರಿಟಿಗಳ ಮೇಲೆ ಬಿಡುಗಡೆ ಮಾಡಬೇಕೆಂದು ಕೋರ್ಟ್ ಆದೇಶಿಸಿದೆ.
ಗ್ರೆಟಾ ಥನ್​ಬರ್ಗ್​ ಟ್ವೀಟ್ ಮಾಡಿದ್ದ ಟೂಲ್​ಕಿಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಕ್ಸ್​ಟಿಂಕ್ಷನ್ ರೆಬೆಲಿಯನ್​ ಎಂಬ ಇಂಗ್ಲೇಂಡ್ ಮೂಲದ ಎನ್​ಜಿಒದಲ್ಲಿ ಕೆಲಸ ಮಾಡುವ ನಿಕಿತ ಜೇಕಬ್ ಮತ್ತು ಶಂತನು ಮುಲುಕ್ ಎಂಬುವರ ವಿರುದ್ಧ ದೆಹಲಿ ಪೊಲೀಸರು ನಾನ್-ಬೇಲಬಲ್ ವಾರಂಟನ್ನು ಜಾರಿ ಮಾಡಿದ್ದರು. ನಿಕಿತ ಮೇಲೆ ಐಪಿಸಿ ಸೆಕ್ಷನ್ 124(ಎ) ಅಡಿ ದೇಶದ್ರೋಹ, ಸೆಕ್ಷನ್ 153(ಎ) ಅಡಿ ವಿವಿಧ ಗುಂಪುಗಳ ನಡುವೆ ದ್ವೇಷ ಹರಡುವ ಪ್ರಯತ್ನ ಮತ್ತು ಸೆಕ್ಷನ್ 120 (ಬಿ) ಅಡಿ ಅಪರಾಧಿಕ ಸಂಚು ನಡೆಸಿದ ಆರೋಪಗಳನ್ನು ಪೊಲೀಸರು ದಾಖಲಿಸಿದ್ದರು.
ಇದನ್ನೂ ಓದಿ:ಟೂಲ್​ಕಿಟ್​ ಪ್ರಕರಣದಲ್ಲಿ ದಿಶಾ ನಂತರ ವಕೀಲೆ ನಿಕಿತಾ ಸೇರಿ ಇಬ್ಬರಿಗೆ ವಾರಂಟ್; ಜೂಮ್​ನಲ್ಲೇ ನಡೆದಿತ್ತು ದಾಳಿಯ ಸಂಚು!
ಪೊಲೀಸರ ವಿಚಾರಣೆಯ ನಡುವೆಯೇ ತಲೆಮರೆಸಿಕೊಂಡಿದ್ದ ಜೇಕಬ್, ಮಧ್ಯಂತರ ಪರಿಹಾರ ಕೋರಿ ಬಾಂಬೆ ಹೈಕೋರ್ಟ್​ ಬಾಗಿಲು ತಟ್ಟಿದ್ದರು. ಮಂಗಳವಾರ (ಫೆಬ್ರವರಿ 16) ಈ ಅರ್ಜಿಯು ವಿಚಾರಣೆಗೆ ಬಂದಾಗ, ದೆಹಲಿ ಪೊಲೀಸರ ಸೈಬರ್ ಸೆಲ್ ಘಟಕದ ಪರವಾಗಿ ವಕೀಲ ಹಿತೆನ್ ವೆನೆಗಾವ್​ಕರ್, ಬಾಂಬೆ ಹೈಕೋರ್ಟ್​ನ ವ್ಯಾಪ್ತಿಗೆ ಈ ಕೇಸು ಬರುವುದಿಲ್ಲ ಎಂದು ವಾದಿಸಿದ್ದರು. ಫೆಬ್ರವರಿ 11 ರಂದು ಪೊಲೀಸರು ಜೇಕಬ್ ಮನೆಗೆ ತೆರಳಿ ಸಾಕ್ಷ್ಯಗಳನ್ನು ವಶಪಡಿಸಿಕೊಂಡು ಆಕೆಯನ್ನು ವಿಚಾರಣೆ ಮಾಡಿದ್ದರು. ಮತ್ತೆ ಮಾರನೇ ದಿನ ವಿಚಾರಣೆ ಮುಂದುವರಿಸಲು ಹೋದಾಗ ಆಕೆ ತಲೆಮರೆಸಿಕೊಂಡಿದ್ದರು ಎಂದು ಹೇಳಿದ್ದರು.
ಜೇಕಬ್ ವಕೀಲರಾದ ಮಿಹಿರ್ ದೇಸಾಯಿ, ಜೇಕಬ್ 6-7 ವರ್ಷ ಹೈಕೋರ್ಟ್​ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ್ದಾರೆ. ದೆಹಲಿ ಕೋರ್ಟಿಗೆ ಹೋಗಿ ಜಾಮೀನು ಅರ್ಜಿ ಸಲ್ಲಿಸುವ ಮುಂಚೆ ಬಂಧನಕ್ಕೊಳಗಾಗುವ ಸಾಧ್ಯತೆ ಇದ್ದದ್ದರಿಂದ ಬಾಂಬೆ ಹೈಕೋರ್ಟಿಗೆ ಟ್ರಾನ್ಸಿಟರಿ ಜಾಮೀನು ಅರ್ಜಿ ಸಲ್ಲಿಸಿರುವುದಾಗಿ ಹೇಳಿದ್ದರು. ಸದರಿ ಟೂಲ್​ಕಿಟ್​​ನಲ್ಲಿ ​ಯಾವುದೇ ಹಿಂಸಾಚಾರ ಅಥವಾ ಕೆಂಪುಕೋಟೆಯ ಆಕ್ರಮಣದ ಬಗ್ಗೆ ಮಾತಾಡಿಲ್ಲ. ಅದನ್ನು ಕೇವಲ ರೈತರನ್ನು ಬೆಂಬಲಿಸುವುದಕ್ಕಾಗಿ ರಚಿಸಲಾಗಿತ್ತು ಎಂದು ವಾದಿಸಿದ್ದರು.
ಇದನ್ನೂ ಓದಿ:ಗ್ರೆಟಾ ಜತೆ ದಿಶಾ ಸಂಭಾಷಣೆ ಹೇಗಿತ್ತು ಗೊತ್ತಾ? ಟೂಲ್​ಕಿಟ್​ನಲ್ಲಿತ್ತು ಈ ಎಲ್ಲ ಮಾಹಿತಿಗಳು!
ಈ ಬಗ್ಗೆ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಪ್ರಕಾಶ್ ಡಿ ನಾಯಕ್, ಬುಧವಾರ ಮೂರು ವಾರಗಳ ಅವಧಿಯ ‘ಟ್ರಾನ್ಸಿಟರಿ ಆಂಟಿಸಿಪೇಟರಿ ಬೇಲ್’ ನೀಡಿ ಆದೇಶ ಹೊರಡಿಸಿದ್ದಾರೆ. ಈ ರಕ್ಷಣೆಯನ್ನು ಮೂರು ವಾರಗಳ ಅವಧಿಗೆ ನೀಡಿದ್ದು, ಜೇಕಬ್ ಜಾಮೀನಿಗಾಗಿ ಸೂಕ್ತ ನ್ಯಾಯಾಲಯದ ಮೊರೆ ಹೋಗಲು ಅನುಕೂಲವಾಗುವಂತೆ ನೀಡಲಾಗಿದೆ ಎಂದಿದ್ದಾರೆ. ಮಂಗಳವಾರ ಜೇಕಬ್ ಸಹೋದ್ಯೋಗಿ ಶಂತನು ಮುಲುಕ್​ಗೆ ಬಾಂಬೆ ಹೈಕೋರ್ಟ್​ನ ಮತ್ತೊಂದು ನ್ಯಾಯಪೀಠವು 10 ದಿನಗಳ ಇದೇ ರೀತಿಯ ನಿರೀಕ್ಷಣಾ ಜಾಮೀನು ನೀಡಿತ್ತು.(ಏಜೆನ್ಸೀಸ್)
ಅಮಿತಾಭ್ ಬಚ್ಚನ್​ ಮೊಮ್ಮಗಳ ಹೊಸ ಪ್ಲಾನ್ ಏನು ಗೊತ್ತಾ ?!
ಭಾರತದ ವಿರುದ್ಧ ಮಹಾಸಂಚು ಆರೋಪ: ದಿಶಾ ಮುಗ್ಧೆ ಎಂದ ರಮ್ಯಾ, ಬಿಡುಗಡೆ ಮಾಡದಿದ್ರೆ ಹೋರಾಟ ಎಂದ ರೈತ ಮುಖಂಡ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 18 =
Remember me
