ನವದೆಹಲಿ:ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಸಮ್ಮಿಶ್ರ ಸರ್ಕಾರ ಬಹುಮತ ಪಡೆಯುವಲ್ಲಿ ಯಶಸ್ವಿಯಾದ ನಂತರ ಸರ್ಕಾರ ರಚನೆಯ ವಿವರಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಪಾಲುದಾರರ ಸಭೆ ನಡೆಸಿದರು.
ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು, ಜೆಡಿಯು ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಸೇರಿದಂತೆ ಪ್ರಮುಖ ಎನ್‌ಡಿಎ ಪಾಲುದಾರರು ಸಭೆಯಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಂದಿನ ಸರ್ಕಾರವನ್ನು ರಚಿಸಲು ಎನ್‌ಡಿಎಯನ್ನು ಔಪಚಾರಿಕವಾಗಿ ಆಹ್ವಾನಿಸದಿದ್ದರೂ, ಬಿಜೆಪಿಯ ಮಿತ್ರಪಕ್ಷಗಳು ಈಗಾಗಲೇ ಮೋದಿ ಅವರ ಮೂರನೇ ಕ್ಯಾಬಿನೆಟ್‌ನಲ್ಲಿ ಪಾಲು ಪಡೆದುಕೊಳ್ಳಲು ತಮ್ಮ ಬೇಡಿಕೆಗಳನ್ನು ಮುಂದಿಡಲು ಪ್ರಾರಂಭಿಸಿವೆ ಎಂದು ತಿಳಿಸಿವೆ.
ಬಿಜೆಪಿ ಏಕಾಂಗಿಯಾಗಿ 240 ಲೋಕಸಭಾ ಸ್ಥಾನಗಳನ್ನು ಗಳಿಸಿದ್ದು, ಬಹುಮತಕ್ಕೆ 272 ಸ್ಥಾನಗಳ ಅಗತ್ಯವಿದೆ. ಹೀಗಾಗಿ, ಕೇಸರಿ ಪಕ್ಷವು ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲು ತನ್ನ ಮಿತ್ರಪಕ್ಷಗಳ ಬೆಂಬಲಕ್ಕಾಗಿ ಪರದಾಡುತ್ತಿದೆ.
ಎನ್‌ಡಿಎ ಪಾಲುದಾರರು ಬಿಜೆಪಿಯಿಂದ ಏನು ಬೇಡಿಕೆ ಇಟ್ಟಿದ್ದಾರೆ ಎಂಬುದನ್ನು ಇಲ್ಲಿ ನೋಡೋಣ:
ಹೊಸ ಎನ್‌ಡಿಎ ಸರ್ಕಾರದಲ್ಲಿ ಕೃಷಿ ಖಾತೆಯಲ್ಲಿ ತಮ್ಮ ಪಕ್ಷವು ಆಸಕ್ತಿ ಹೊಂದಿದೆ ಎಂದು ಜೆಡಿಎಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸುಳಿವು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ನಮಗೆ ಅಂತಹ ಯಾವುದೇ ಬೇಡಿಕೆಯಿಲ್ಲ. ನಮ್ಮ ಆದ್ಯತೆಯು ಕರ್ನಾಟಕಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಬಹಳ ಹಿಂದಿನಿಂದಲೂ ಇರುವ ಸಮಸ್ಯೆಗಳ ಪರಿಹಾರವಾಗಿದೆ. ಕೇಂದ್ರದಲ್ಲಿ ಕರ್ನಾಟಕಕ್ಕೆ ಪ್ರಾತಿನಿಧ್ಯ (ಕ್ಯಾಬಿನೆಟ್ ಸ್ಥಾನ) ನೀಡುವ ಬಗ್ಗೆ ನರೇಂದ್ರ ಮೋದಿ ನಿರ್ಧರಿಸುತ್ತಾರೆ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಒಟ್ಟು 28 ಸ್ಥಾನಗಳನ್ನು ಹೊಂದಿರುವ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಬಿಜೆಪಿ 17 ಮತ್ತು ಜೆಡಿಎಸ್ ಎರಡು ಸ್ಥಾನಗಳನ್ನು ಗೆದ್ದಿದೆ.
ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಕೇಂದ್ರದ ಹೊಸ ಸರ್ಕಾರದಲ್ಲಿ ಲೋಕಸಭೆ ಸ್ಪೀಕರ್ ಹುದ್ದೆಯನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಂದ್ರಬಾಬು ನಾಯ್ಡು ಅವರು 7-8 ಕ್ಯಾಬಿನೆಟ್​ ಸಚಿವ ಮತ್ತು ಒಂದು ರಾಜ್ಯ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಸಚಿವ ಸಂಪುಟಗಳಲ್ಲಿ ರಸ್ತೆ ಸಾರಿಗೆ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ವಸತಿ ಮತ್ತು ನಗರ ವ್ಯವಹಾರಗಳು, ಕೃಷಿ, ಜಲ ಶಕ್ತಿ, ಐಟಿ ಮತ್ತು ವಾಣಿಜ್ಯ, ಶಿಕ್ಷಣ ಮತ್ತು ಹಣಕಾಸು ಸೇರಿವೆ.
“ನಾನು ಅನುಭವಿ ಮತ್ತು ನಾನು ಈ ದೇಶದಲ್ಲಿ ಹಲವಾರು ರಾಜಕೀಯ ಬದಲಾವಣೆಗಳನ್ನು ಕಂಡಿದ್ದೇನೆ. ನಾವು ಎನ್‌ಡಿಎಯಲ್ಲಿದ್ದೇವೆ, ನಾನು ದೆಹಲಿಯಲ್ಲಿ ಎನ್‌ಡಿಎ ಸಭೆಗೆ ಹೋಗುತ್ತಿದ್ದೇನೆ” ಎಂದು ನಾಯ್ಡು ಈ ಮೊದಲೇ ಪ್ರಕಟಿಸಿದ್ದರು.
ಆಂಧ್ರಪ್ರದೇಶದಿಂದ ಕ್ರಮವಾಗಿ 16 ಮತ್ತು 2 ಲೋಕಸಭಾ ಸ್ಥಾನಗಳನ್ನು ಗೆದ್ದಿರುವ ಟಿಡಿಪಿ ಮತ್ತು ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು ಕೇಂದ್ರದಲ್ಲಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ.
‘ಕಿಂಗ್‌ಮೇಕರ್’ ಎಂದು ಸಾಮಾನ್ಯವಾಗಿ ಹೇಳಲಾಗುವ ನಿತೀಶ್ ಕುಮಾರ್ ಅವರು ಕಠಿಣ ಚೌಕಾಶಿಯಲ್ಲಿ ತೊಡಗುತ್ತಾರೆ. ಅಲ್ಲದೆ, ಮುಂದಿನ ಮೋದಿ ಸರ್ಕಾರದಲ್ಲಿ ಹೆಚ್ಚಿನ ಮಂತ್ರಿ ಸ್ಥಾನಗಳನ್ನು ಪಡೆಯಲು ಯತ್ನಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಮೂಲಗಳ ಪ್ರಕಾರ ಜೆಡಿಯು 3 ಕ್ಯಾಬಿನೆಟ್ ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ.
ಇದಕ್ಕೂ ಮುನ್ನ ಮಾತನಾಡಿದ ಬಿಹಾರದ ಸಚಿವ ಮತ್ತು ಹಿರಿಯ ಜೆಡಿಯು ನಾಯಕ ವಿಜಯ್ ಕುಮಾರ್ ಚೌಧರಿ, ನಿತೀಶ್ ಕುಮಾರ್ ನೇತೃತ್ವದ ಪಕ್ಷವನ್ನು ಇಂಡಿಯಾ ಬ್ಲಾಕ್ ಓಲೈಸುತ್ತಿದೆ. ಆದರೆ ಅದು ಎನ್‌ಡಿಎ ಜತೆಯಲ್ಲಿಯೇ ಇರುತ್ತದೆ ಎಂದು ಹೇಳಿದ್ದಾರೆ.
ಬಿಹಾರದ 40 ಲೋಕಸಭಾ ಸ್ಥಾನಗಳಲ್ಲಿ ಜೆಡಿಯು 12 ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಒಂದು ಕ್ಯಾಬಿನೆಟ್ ಮತ್ತು ಒಂದು ರಾಜ್ಯ ಸಚಿವ ಸ್ಥಾನಕ್ಕಾಗಿ ಮುಂದಿನ ಎನ್​ಡಿಎ ಸರ್ಕಾರಕ್ಕೆ ಒತ್ತಡ ಹೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಎಲ್‌ಜೆಪಿ (ರಾಮ್ ವಿಲಾಸ್) ಚುನಾವಣೆಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದು, ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕೆಯ ಭಾಗವಾಗಿ ತನಗೆ ನೀಡಲಾದ ಎಲ್ಲ ಐದು ಲೋಕಸಭಾ ಸ್ಥಾನಗಳಲ್ಲಿ ಗೆದ್ದಿದೆ. ಪಕ್ಷವು ಹಾಜಿಪುರ, ವೈಶಾಲಿ, ಸಮಸ್ತಿಪುರ್, ಖಗರಿಯಾ ಮತ್ತು ಜಮುಯಿ ಸ್ಥಾನಗಳಲ್ಲಿ ಸ್ಪರ್ಧಿಸಿ ಗೆದ್ದಿದೆ.
ಇದಲ್ಲದೆ, ಹಿಂದೂಸ್ತಾನಿ ಅವಾಮ್ ಮೋರ್ಚಾದ (ಎಚ್​ಎಎಂ-ಎಸ್​​) ಮುಖ್ಯಸ್ಥ ಜಿತಮ್ ರಾಮ್ ಮಾಂಝಿ ಅವರು ಹೊಸ ಸರ್ಕಾರದಲ್ಲಿ ಕ್ಯಾಬಿನೆಟ್ ಹುದ್ದೆಯನ್ನು ಬಯಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಹಿಂದೂಸ್ತಾನಿ ಅವಾಮ್ ಮೋರ್ಚಾದ ಮುಖ್ಯಸ್ಥರಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ಗಯಾದಿಂದ ಸಂಸತ್​ಗೆ ಪದಾರ್ಪಣೆ ಮಾಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ಪ್ರಧಾನಿಗೆ ತನ್ನ ಬೆಂಬಲವನ್ನು ನೀಡಿದೆ, ಆದರೆ ಮೋದಿ 3.0 ಸರ್ಕಾರದಲ್ಲಿ ಒಂದು ಕ್ಯಾಬಿನೆಟ್ ಮತ್ತು ಎರಡು ರಾಜ್ಯ ಸಚಿವ ಸ್ಥಾನಗಳನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಶಿವಸೇನಾ (ಶಿಂಧೆ) ಏಕಾಂಗಿಯಾಗಿ ಲೋಕಸಭೆಯಲ್ಲಿ ಏಳು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಕೇಂದ್ರದಲ್ಲಿ ಬಿಜೆಪಿಯ ನಿರ್ಣಾಯಕ ಮಿತ್ರಪಕ್ಷವೆಂದು ಪರಿಗಣಿಸಲಾಗಿದೆ.
45 ಪೈಸೆಯಿಂದ 75 ರೂಪಾಯಿಗೆ ಏರಿದ ಸ್ಟಾಕ್​ ಬೆಲೆ: ಈಗ 1 ಷೇರಿಗೆ 3 ಷೇರು ಉಚಿತವಾಗಿ ನೀಡುತ್ತಿದೆ ಕಂಪನಿ

ರೂ. 2900ರಿಂದ 900ಕ್ಕೆ ಕುಸಿಯಬಹುದು ರಕ್ಷಣಾ ಕಂಪನಿ ಷೇರು: ಮಾರಾಟಕ್ಕೆ ತಜ್ಞರ ಸಲಹೆ ನೀಡಿದ್ದೇಕೆ?

ಉಚಿತವಾಗಿ ಷೇರು ನೀಡುತ್ತಿದೆ ಇನ್ಫ್ರಾ ಕಂಪನಿ: ಒಂದೇ ದಿನದಲ್ಲಿ ಸ್ಟಾಕ್​ ಬೆಲೆ 17% ಏರಿಕೆ; ಜೂನ್​ 22 ಮಹತ್ವದ ದಿನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
