ನವದೆಹಲಿ:ದೇಶದಿಂದ ದ್ವೇಷ ನಿಮೂಲವಾಗಿ ಭಾರತ ಒಗ್ಗಟ್ಟಾಗುವವರೆಗೆ ಭಾರತ್ ಜೋಡೋ ಯಾತ್ರೆಯನ್ನು ಮುಂದುವರಿಸುವುದಾಗಿ ಕಳೆದ ವರ್ಷದಿಂದ ನಡೆದ ಯಶಸ್ವಿ ಕಾರ್ಯಕ್ರಮದ ರೂವಾರಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗುರುವಾರ ಘೊಷಿಸಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರವರೆಗಿನ 4,000 ಕಿಲೋ ಮೀಟರ್ ಯಾತ್ರೆ ಆರಂಭವಾದ ವಾರ್ಷಿಕೋತ್ಸವ ಸಂದರ್ಭ ದಲ್ಲಿ ರಾಹುಲ್ ವಿಡಿಯೋ ಒಂದನ್ನು ಹಂಚಿಕೊಂಡು ಯಾತ್ರೆ ಮುಂದುವರಿಕೆಯ ಉದ್ದೇಶವನ್ನು ಪ್ರಕಟಿಸಿದ್ದಾರೆ. ‘ಏಕತೆ ಮತ್ತು ಪ್ರೀತಿಯತ್ತ ಭಾರತ್ ಜೋಡೋ ಯಾತ್ರೆಯ ಕೋಟ್ಯಂತರ ಹೆಜ್ಜೆಗಳು ದೇಶದ ಉತ್ತಮ ನಾಳೆಗಾಗಿನ ಅಡಿಪಾಯ ಆಗಿವೆ’ ಎಂದು ಹೇಳಿರುವ ಗಾಂಧಿ, ಯಾತ್ರೆಯನ್ನು ಮುಂದುವರಿಸುವುದು ತಮ್ಮ ಆಶ್ವಾಸನೆಯಾಗಿದೆ ಎಂದು ಶಪಥ ಮಾಡಿದ್ದಾರೆ. ದೇಶದ ಗಮನ ಸೆಳೆದ ಭಾರತ್ ಜೋಡೋ ಯಾತ್ರೆಯ ವೇಳೆ ಗಾಂಧಿ 12 ಸಾರ್ವಜನಿಕ ಸಭೆಗಳು, 100ಕ್ಕೂ ಅಧಿಕ ಬೀದಿ ಬದಿ ಸಭೆಗಳು ಮತ್ತು 13 ಮಾಧ್ಯವಮ ಗೋಷ್ಠಿಗಳಲ್ಲಿ ಮಾತನಾಡಿದ್ದರು. ಯಾತ್ರೆಯಲ್ಲಿ ನಡೆಯುತ್ತಲೇ 275ಕ್ಕೂ ಹೆಚ್ಚು ಹಾಗೂ ಕುಳಿತುಕೊಂಡು 100ಕ್ಕೂ ಹೆಚ್ಚು ಸಂವಾದಗಳನ್ನು ಕೂಡ ನಡೆಸಿದ್ದರು.
ಭಾರಿ ಸಾಧನೆ: ಒಬ್ಬ ಅರೆಮನಸ್ಸಿನ ಹಾಗೂ ಪಾರ್ಟ್​ಟೈಂ ರಾಜಕಾರಣಿ ಯಿಂದ ಒಬ್ಬ ಪ್ರಬುದ್ಧ ರಾಜಕಾರಣಿಯಾಗಿ ಗಾಂಧಿಯ ವ್ಯಕ್ತಿತ್ವ ಪರಿವರ್ತನೆ ಗೊಂಡಿದ್ದು ಕಾಂಗ್ರೆಸ್​ಗೆ ಈ ಯಾತ್ರೆಯಿಂದ ಸಿಕ್ಕ ದೊಡ್ಡ ಲಾಭವಾಗಿದೆ ಎಂದು ಅನೇಕ ತಜ್ಞರು ವ್ಯಾಖ್ಯಾನಿಸಿದ್ದಾರೆ. 4,000 ಕಿಮೀ ಯಾತ್ರೆಯುದ್ದಕ್ಕೂ ಬೆಂಬಲಿಗರು ಮಾತ್ರವಲ್ಲದೆ, ವಿರೋಧಿಗಳ ಗಮನವನ್ನು ಸೆಳೆಯುವಲ್ಲಿಯೂ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರೂ ಆದ ಗಾಂಧಿ ಯಶಸ್ವಿಯಾಗಿದ್ದರು.
ಸೆಲೆಬ್ರಿಟಿಗಳ ಪಾತ್ರ: ಯಾತ್ರೆಯಲ್ಲಿ ಸಿನಿಮಾ ಮತ್ತು ಟಿವಿ ಸೆಲೆಬ್ರಿಟಿಗಳ ಸಹಿತ ಸಮಾಜದ ವಿವಿಧ ವರ್ಗಗಳ ಜನರು ಭಾಗವಹಿಸಿದ್ದು ವಿಶೇಷವಾಗಿತ್ತು. ಕಮಲ್ ಹಾಸನ್, ಪೂಜಾ ಭಟ್, ರಿಯಾ ಸೇನ್, ಸ್ವರಾ ಭಾಸ್ಕರ್, ರಷ್ಮಿ ದೇಸಾಯಿ, ಆಕಾಂಕ್ಷಾ ಪುರಿ ಮತ್ತು ಅಮೋಲ್ ಪಾಲೇಕರ್ ಅವರಲ್ಲಿ ಕೆಲವು ಪ್ರಮುಖರು. ಲೇಖಕರು, ಸಾಹಿತಿಗಳು, ಭೂ ಸೇನೆಯ ನಿವೃತ್ತ ಮುಖ್ಯಸ್ಥ ಜನರಲ್ ದೀಪಕ್ ಕಪೂರ್ ಮತ್ತು ನೌಕಾ ಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಎಲ್. ರಾಮದಾಸ್, ಆರ್​ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಮತ್ತು ಹಣಕಾಸು ಸಚಿವಾಲಯದ ಮಾಜಿ ಕಾರ್ಯದರ್ಶಿ ಅರವಿಂದ್ ಮಾಯಾರಾಮ್ ಮೊದಲಾದ ಪ್ರಮುಖರು ಕೂಡ ಗಾಂಧಿ ಯಾತ್ರೆಗೆ ಕೈಜೋಡಿಸಿದ್ದರು.
ಭಾರತ್ ಜೋಡೋ ಯಾತ್ರೆ ಒಂದು ದೈಹಿಕ ಕಾರ್ಯಕ್ರಮ ಮಾತ್ರವಾಗಿರಲಿಲ್ಲ. ‘ಒಡೆದ ಸಾಮೂಹಿಕ ಆತ್ಮಸಾಕ್ಷಿಯನ್ನು’ ಮರುನಿರ್ವಿುಸುವ ಪ್ರಕ್ರಿಯೆಯೂ ಆಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ವರ್ಣಿಸಿದ್ದಾರೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದತೆಯಂಥ ಮೌಲ್ಯಗಳು ನಮಗೆ ಸವೋನ್ನತವಾದುದು ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಯುವ ಘಟಕವಾದ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಗುರುವಾರ ಭಾರತ್ ಜೋಡೋ ನಾಯಕತ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. 2024ರ ಲೋಕಸಭೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಬಯಸುವ ಯುವಜನರನ್ನು ಆಹ್ವಾನಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ನಿರ್ದೇಶನದ ಪ್ರಕಾರ ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಭಾರತ್ ಜೋಡೋ ಪಾದಯಾತ್ರೆ ನಡೆಸಲು ಯುವ ಕಾಂಗ್ರೆಸ್ ನಿರ್ಧರಿಸಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ‘ಮೊಹಬ್ಬತ್ ಕೀ ದುಕಾನ್’ ಗಳಲ್ಲಿ (ಪ್ರೀತಿಯ ಅಂಗಡಿ) ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಯಾತ್ರೆಯ ವೇಳೆ ರಾಹುಲ್ ಗಾಂಧಿ ‘ಮೊಹಬ್ಬತ್ ಕೀ ದುಕಾನ್’ ಪದವನ್ನು ಟಂಕಿಸಿದ್ದರು. ದ್ವೇಷದ ಬದಲು ಪ್ರೀತಿ ಹರಡು ವುದು ಇದರ ಉದ್ದೇಶ ಎಂದವರು ಹೇಳಿದ್ದರು.
ಭಾರತ್ ಜೋಡೋ ಯಾತ್ರೆ ಉದ್ದುದ್ದ ಉಪನ್ಯಾಸ ನೀಡುವ ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ನಂತಲ್ಲದೆ ಜನರ ಅಭಿಪ್ರಾಯಗಳನ್ನು ಆಲಿಸುವ ‘ಜನ್ ಕೀ ಚಿಂತಾ’ ಆಗಿತ್ತು.
| ಜೈರಾಮ್ ರಮೇಶ್​, ಕಾಂಗ್ರೆಸ್​ ಮುಖಂಡ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
