ನವದೆಹಲಿ:ಭವಿಷ್ಯದ ರೈಲ್ವೆ ವ್ಯವಸ್ಥೆಯನ್ನು ಉತ್ತಮ ಹಾಗೂ ಗಟ್ಟಿಗೊಳಿಸುವ ಪರಿಕಲ್ಪನೆಯೊಂದಿಗೆ ಕೇಂದ್ರ ಬಜೆಟ್​ನಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಈ ಬಾರಿಯ ಬಜೆಟ್​ನಲ್ಲಿ ರೈಲ್ವೆ ಕ್ಷೇತ್ರಕ್ಕೆ 1,10,055 ಕೋಟಿ ರೂ. ಮೀಸಲಿಡಲಾಗಿದೆ. ವಿಶ್ವದ ಅತಿದೊಡ್ಡ ರೈಲ್ವೆ ಸಂಪರ್ಕ ಜಾಲ ಹೊಂದಿರುವ ಭಾರತೀಯ ರೈಲ್ವೆಯಲ್ಲಿ ಆತ್ಮನಿರ್ಭರ ಪರಿಕಲ್ಪನೆ ಅನುಷ್ಠಾನಗೊಳಿಸಲಾಗುತ್ತಿದೆ. ಜತೆಗೆ ರೈಲ್ವೆ ಸೇವೆ ಇನ್ನಷ್ಟು ಭದ್ರಗೊಳಿಸುವಂತಹ ಭವಿಷ್ಯದ ಯೋಜನೆಗಳನ್ನು ಪ್ರಕಟಿಸಲಾಗಿದೆ. ಹಾಗೆಯೇ, ರೈಲ್ವೆ ಸೇವೆ ಮೂಲಕ ಆರ್ಥಿಕ ಪರಿಸ್ಥಿತಿ ವೃದ್ಧಿ ಮಾಡುವಂತಹ ಸರಕು ಸಾಗಣೆ ಕಾರಿಡಾರ್​ಗಳ ಅನುಷ್ಠಾನದ ಬಗ್ಗೆಯೂ ಪ್ರಸ್ತಾಪಿಸಿ ಹಣ ಮೀಸಲಿಸಲಾಗಿದೆ.
ಶೇ.50 ಕಡಿತ:ಕಳೆದ ಬಾರಿಗಿಂತ ಈ ಬಾರಿ ರೈಲ್ವೆ ಕ್ಷೇತ್ರಕ್ಕೆ ಶೇ.50 ಕಡಿಮೆ ಅನುದಾನ ಮೀಸಲಿಡಲಾಗಿದೆ. 2020-21ನೇ ಸಾಲಿನ ಬಜೆಟ್​ನಲ್ಲಿ ರೈಲ್ವೆ ಯೋಜನೆಗಳಿಗಾಗಿ 2,25,913 ಕೋಟಿ ರೂ. ನಿಗದಿ ಮಾಡಲಾಗಿತ್ತು. 2021-22ನೇ ಸಾಲಿಗೆ 1,10,055 ಕೋಟಿ ರೂ. ಮೀಸಲಿಡಲಾಗಿದೆ. ಅದರಲ್ಲಿ 1,07,100 ಕೋಟಿ ರೂ.ಗಳನ್ನು ಬಂಡವಾಳ ವೆಚ್ಚವನ್ನಾಗಿ ನಿಗದಿ ಮಾಡಲಾಗಿದೆ.
ರೈಲ್ವೆ ಸುರಕ್ಷತಾ ವ್ಯವಸ್ಥೆ:ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಸಲುವಾಗಿ ವಿಸ್ತಾ ಡೋಮ್ ಎಲ್​ಎಚ್​ಬಿ ಬೋಗಿಗಳನ್ನು ಪರಿಚಯಿಸಲಾಗುತ್ತಿದೆ. ಪ್ರಮುಖವಾಗಿ ಪ್ರವಾಸಿ ತಾಣ ಮಾರ್ಗದಲ್ಲಿ ಈ ಬೋಗಿಗಳ ಮೂಲಕ ರೈಲುಗಳು ಸೇವೆ ನೀಡಲಿವೆ. ಜತೆಗೆ ಹೈಡೆನ್ಸಿಟಿ ಮತ್ತು ಹೆಚ್ಚು ಬಳಕೆಯಾಗುವ ಮಾರ್ಗಗಳಲ್ಲಿ ಸ್ವದೇಶಿ ತಂತ್ರಜ್ಞಾನದ ರೈಲ್ವೆ ಸುರಕ್ಷತಾ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ.
ಸರಕು ಸಾಗಣೆ ಕಾರಿಡಾರ್:ಸರಕು ಸಾಗಣೆಯಲ್ಲಿ ಭಾರಿ ವಾಹನಗಳ ಬಳಕೆ ಕಡಿಮೆ ಮಾಡಲು ರೋ-ರೋ ಮಾದರಿಯ ರೈಲುಗಳ ಸಂಚಾರ ಚಾಲ್ತಿಯಲ್ಲಿದೆ. ಇದಕ್ಕೆ ಪೂರಕವಾಗಿ 2022ರ ಜೂನ್​ನಲ್ಲಿ ಪಶ್ಚಿಮ ಮತ್ತು ಪೂರ್ವ ನಿಗದಿತ ಸರಕು ಸಾಗಣೆ ಕಾರಿಡಾರ್​ಗಳು ಕಾರ್ಯನಿರ್ವಹಿಸಲಿವೆ. ವಿಮಾನನಿಲ್ದಾಣ ಮಾರ್ಗಕ್ಕೆ 15 ಸಾವಿರ ಕೋಟಿ ರೂ., ಬೆಂಗಳೂರಿನ ನಮ್ಮ ಮೆಟ್ರೋ ರೈಲು ಯೋಜನೆಯ ವಿಮಾನನಿಲ್ದಾಣ ಸಂಪರ್ಕ ಮಾರ್ಗಕ್ಕೆ ಕೇಂದ್ರ ಬಜೆಟ್​ನಲ್ಲಿ ಅನುದಾನ ಘೋಷಿಸಲಾಗಿದೆ.
ಭವಿಷ್ಯದ ರೈಲ್ವೆಗೆ ಒತ್ತು:ಅನುದಾನ ಕಡಿಮೆ ಘೋಷಣೆಯಾಗಿದ್ದರೂ ಹೊಸ ಯೋಜನೆಗಳಿಗಿಂತ ಭವಿಷ್ಯದ ರೈಲ್ವೆ ವ್ಯವಸ್ಥೆ ಗಟ್ಟಿಗೊಳಿಸುವತ್ತ ಹೆಚ್ಚಿನ ಗಮನಹರಿಸಲಾಗಿದೆ. ಪ್ರಮುಖವಾಗಿ 2030ರಲ್ಲಿ ರೈಲ್ವೆ ಪ್ರಯಾಣಿಕರು, ರೈಲುಗಳ ಸಂಚಾರವನ್ನು ಗಮನದಲ್ಲಿಟ್ಟು ಕೊಂಡು ರಾಷ್ಟ್ರೀಯ ರೈಲ್ವೆ ಯೋಜನೆ 2030 ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಅದರ ಮೂಲಕ ಪ್ರಯಾಣಿಕರ ರೈಲು ಸೇವೆಗಿಂತ ರೈಲುಗಳ ಮೂಲಕ ಸರಕು ಸಾಗಣೆ ಹೆಚ್ಚಳಕ್ಕೆ ಕ್ರಮವಹಿಸಲು ಮುಂದಾಗಿದೆ.
ಪಿಪಿಪಿ ಮಾದರಿಯಲ್ಲಿ ನಿರ್ಮಾಣ:ಪೂರ್ವ ಸರಕು ಸಾಗಣೆ ಕಾರಿಡಾರ್​ನಲ್ಲಿ 263.7 ಕಿ.ಮೀ. ಉದ್ದದ ಸೋನ್​ನಗರ್- ಗೊಮೋಹ್ ಮಾರ್ಗವನ್ನು 2021-22ನೇ ಸಾಲಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುವುದು ಹಾಗೂ 274.3 ಕಿ.ಮೀ. ಉದ್ದದ ಗೋಮೋಗ್-ಡಂಕುಣಿ ಮಾರ್ಗವನ್ನು ಶೀಘ್ರವೇ ಸರಕು ಸಾಗಣೆ ಮಾರ್ಗವನ್ನಾಗಿಸುವ ಕುರಿತು ಪ್ರಸ್ತಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸುವ ಪೂರ್ವ ಕರಾವಳಿ ಕಾರಿಡಾರ್ ಆದ ಖರಗ್​ಪುರ್-ವಿಜಯವಾಡ, ಪೂರ್ವ-ಪಶ್ಚಿಮ ಕಾರಿಡಾರ್ ಇತ್ರಸಿ-ವಿಜಯವಾಡ ಮಾರ್ಗದ ವಿವರ ಯೋಜನಾ ವರದಿ ರೂಪಿಸಲು ಕ್ರಮಕ್ಕೆ ನಿರ್ಧರಿಸಲಾಗಿದೆ.
ಬ್ರಾಡ್​ಗೇಜ್ ಶೇ.100 ವಿದ್ಯುದ್ಧೀಕರಣ:ದೇಶದಲ್ಲಿನ ಬ್ರಾಡ್​ಗೇಜ್ ಮಾರ್ಗವನ್ನು ಇನ್ನೆರಡು ವರ್ಷದಲ್ಲಿ ಶೇ.100 ವಿದ್ಯುದ್ಧೀಕರಿಸುವ ಪ್ರಸ್ತಾಪ ಬಂದಿದೆ. ಸದ್ಯ 2020ರ ಅಕ್ಟೋಬರ್ 1ರ ದತ್ತಾಂಶ ಪ್ರಕಾರ 41,548 ರೈಲ್ವೆ ಕಿ.ಮೀ. ಉದ್ದದ ಬ್ರಾಡ್​ಗೇಜ್ ವಿದ್ಯುದ್ಧೀಕರಿಸಲಾಗಿದೆ. 2021ರ ಕೊನೆಯಲ್ಲಿ ಅದನ್ನು 46,000 ರೈಲ್ವೆ ಕಿ.ಮೀ.ಗೆ ವಿದ್ಯುದ್ಧೀಕರಣ ವಿಸ್ತರಿಸುವುದು ಹಾಗೂ 2023ರ ಡಿಸೆಂಬರ್ ವೇಳೆಗೆ ಶೇ.100 ರೈಲ್ವೆ ಮಾರ್ಗಗಳನ್ನು ವಿದ್ಯುದ್ಧೀಕರಿಸುವ ಗುರಿ ಹೊಂದಲಾಗಿದೆೆ.
ಸಾರ್ವಜನಿಕ ಸಾರಿಗೆಗೆ 18 ಸಾವಿರ ಕೋಟಿ ರೂ.:ವೈಯಕ್ತಿಕ ಸಾರಿಗೆ ಬಳಕೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಸಮೂಹ ಸಾರಿಗೆ ಅಥವಾ ಸಾರ್ವಜನಿಕ ಸಾರಿಗೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಮೆಟ್ರೋ ರೈಲು ಮತ್ತು ಬಸ್​ಗಳ ಸಂಚಾರ ಹೆಚ್ಚಿಸಲು ಈ ಬಾರಿಯ ಬಜೆಟ್​ನಲ್ಲಿ 18 ಸಾವಿರ ಕೋಟಿ ರೂ. ಮೀಸಲಿಡಲಾಗುತ್ತಿದೆ. ಖಾಸಗಿ ಸಹಭಾಗಿತ್ವದಲ್ಲಿ 20 ಸಾವಿರ ಬಸ್​ಗಳ ನಿರ್ವಹಣೆ ಮತ್ತು ಪೂರೈಕೆಯಂತಹ ಯೋಜನೆಯನ್ನೂ ಪರಿಚಯಿಸಲಾಗುತ್ತದೆ.
ಎರಡನೇ ಹಂತದ ನಗರಗಳಲ್ಲಿ ಮೆಟ್ರೋ ಲೈಟ್, ನಿಯೋ:ದೇಶದಲ್ಲಿ 702 ಕಿ.ಮೀ. ಉದ್ದದ ಮಾರ್ಗದಲ್ಲಿ ಮೆಟ್ರೋ ರೈಲು ಸೇವೆ ನೀಡಲಾಗುತ್ತಿದ್ದು, 1,016 ಕಿ.ಮೀ. ಉದ್ದದ ಮೆಟ್ರೋ ಮತ್ತು ಆರ್​ಆರ್​ಟಿಎಸ್ ಮಾರ್ಗಗಳು ನಿರ್ಮಾಣ ಹಂತದಲ್ಲಿವೆ. ಒಟ್ಟು 27 ನಗರಗಳಲ್ಲಿ ಈ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಜತೆಗೆ 2ನೇ ಹಂತದ ನಗರಗಳಲ್ಲಿ ಕಡಿಮೆ ವೆಚ್ಚದಲ್ಲಿ ಅನುಷ್ಠಾನಗೊಳಿಸಬಹುದಾದ ಮೆಟ್ರೋ ಲೈಟ್ ಮತ್ತು ಮೆಟ್ರೋ ನಿಯೋ ರೈಲುಗಳ ಸಂಚಾರ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − nine =
Remember me
