ನವದೆಹಲಿ:ಮಳೆಗಾಲದ ಅಧಿವೇಶನದಲ್ಲಿ ಸಂಸತ್ ಅಂಗೀಕರಿಸಿದ ಮಸೂದೆಗಳ ಪೈಕಿ ನಾಲ್ಕು ವಿಧೇಯಕ ಗಳಿಗೆ ರಾಷ್ಟ್ರಪತಿ ದ್ರೌಪದಿ ಮುಮು ಶನಿವಾರ ಅಂಕಿತ ಹಾಕಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ. ಜನನ ಮತ್ತು ಮರಣ ನೋಂದಣಿ ತಿದ್ದುಪಡಿ ಮಸೂದೆ, ಜನವಿಶ್ವಾಸ ತಿದ್ದುಪಡಿ ವಿಧೇಯಕ ಹಾಗೂ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ದೆಹಲಿ ರಾಷ್ಟ್ರಿಯ ರಾಜಧಾನಿ ದೆಹಲಿ ತಿದ್ದುಪಡಿ ಮಸೂದೆ ಮತ್ತು ಡಿಜಿಟಲ್ ವೈಯಕ್ತಿಕ ಡೇಟಾ ಸುರಕ್ಷತಾ ಮಸೂದೆಗೆ ರಾಷ್ಟ್ರಪತಿ ಒಪ್ಪಿಗೆ ಮುದ್ರೆ ಒತ್ತಿದ್ದಾರೆ.
ದೆಹಲಿ ಅಧಿಕಾರಿಗಳ ಹುದ್ದೆ ಮತ್ತು ವರ್ಗಾವಣೆ ಅಧಿಕಾರ ಚುನಾಯಿತ ರಾಜ್ಯ ಸರ್ಕಾರಕ್ಕೆ ಇರಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಈ ಅಧಿಕಾರವನ್ನು ತನ್ನ ಬಳಿಯಲ್ಲೇ ಇರಿಸಿಕೊಳ್ಳುವ ಶಾಸನ ತಂದಿತ್ತು. ಅದಕ್ಕೆ ಸಂಸತ್ ಒಪ್ಪಿಗೆ ಪಡೆದು ಕಾಯ್ದೆಯಾಗಿ ಪರಿವರ್ತಿಸಲು ಈ ಮಸೂದೆ ಮಂಡಿಸಿತ್ತು. ಇದನ್ನು ದೆಹಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ (ಆಪ್) ಬಲವಾಗಿ ವಿರೋಧಿಸಿ, ಸುಪ್ರೀಂಕೋರ್ಟ್ ತೀರ್ಪನ್ನು ನಿರರ್ಥಕಗೊಳಿಸುವ ಮತ್ತು ಚುನಾಯಿತ ಸರ್ಕಾರದ ಅಧಿಕಾರ ಮೊಟಕು ಮಾಡುವ ಶಾಸನ ಎಂದು ಟೀಕಿಸಿತ್ತು. ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಸೋಲಿಸಲು ವಿರೋಧ ಪಕ್ಷಗಳ ಬೆಂಬಲವನ್ನು ಯಾಚಿಸಿತ್ತು. ಆದರೆ, ಮೇಲ್ಮನೆಯಲ್ಲಿ ಈ ಮಸೂದೆ 131-102 ಮತಗಳ ಅಂತರದಲ್ಲಿ ಅಂಗೀಕಾರ ಪಡೆಯಿತು.
ಡಿಜಿಟಲ್ ವೈಯಕ್ತಿಕ ಡೇಟಾ ಮಸೂದೆಯ ಕೆಲ ಅಂಶಗಳಿಗೆ ತಿದ್ದುಪಡಿಯಾಗಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು. ಜನರ ದತ್ತಾಂಶಗಳು ಸರ್ಕಾರದ ನಿಗಾಕ್ಕೆ ಒಳಪಡುವ ಆತಂಕ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದವು. ಮಸೂದೆಯಲ್ಲಿ ಪ್ರಸ್ತಾಪಿಸಿರುವ ಕೆಲ ಅಂಶಗಳು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡುತ್ತದೆ ಎಂದು ಎಡಿಟರ್ಸ್ ಗಿಲ್ಡ್ ಕೂಡ ಆಕ್ಷೇಪಿಸಿತ್ತು. ಡೇಟಾ ಸುರಕ್ಷತೆಯನ್ನು ಉಲ್ಲಂಘಿಸುವ ಆನ್​ಲೈನ್ ವೇದಿಕೆಗಳಿಗೆ 250 ಕೋಟಿ ರೂ.ವರೆಗೆ ದಂಡ ವಿಧಿಸುವ ಪ್ರಸ್ತಾವ ಈ ಮಸೂದೆಯಲ್ಲಿ ಇದೆ.
ಹೊಸ ಮೂರು ಮಸೂದೆಗಳಲ್ಲಿ ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಉದ್ದೇಶವನ್ನು ಸರ್ಕಾರ ವ್ಯಕ್ತಪಡಿಸಿದೆ. ಗುಂಪು ಹಲ್ಲೆ, ವಿಚಾರಣಾಧೀನ ಕೈದಿಗಳ ಜಾಮೀನಿಗೆ ಸಂಬಂಧಿಸಿದ ನಿಯಮ, ಶೂನ್ಯ ಎಫ್​ಐಆರ್ ಬಹುರ್ಚಚಿತವಾಗಿವೆ. ಗುಂಪು ಹಲ್ಲೆ ಮತ್ತು ಜಾತಿ, ಜನಾಂಗ, ಸಮುದಾಯವನ್ನು ಗುರಿಯಾಗಿಟ್ಟುಕೊಂಡು ನಡೆಸುವ ಹತ್ಯೆಗೆ ಏಳು ವರ್ಷ ಕನಿಷ್ಠ ಸಜೆಯು ಹೊಸ ಮಸೂದೆಯಲ್ಲಿ ಇದೆ. ಗರಿಷ್ಠ ಮರಣದಂಡನೆಯನ್ನೂ ವಿಧಿಸಬಹುದು. ಆರೋಪಿಯ ಆಸ್ತಿಯನ್ನು ಜಪ್ತಿ ಮಾಡುವಂತಹ ಹೊಸ ಅಂಶ ಇರುವುದರಿಂದ ಆರೋಪಿಗಳು ವಿಚಾರಣೆಗೆ ತಪ್ಪಿಸುವುದನ್ನು ತಡೆಯುತ್ತದೆ. ಆರ್ಥಿಕ ಅಪರಾಧ ಎಸಗಿ ವಿದೇಶಕ್ಕೆ ಪಲಾಯನ ಮಾಡಿದವರು ವಿಚಾರಣೆಗೆ ಸಹಕರಿಸದಿದ್ದರೆ ಅವರನ್ನು ಕಠಿಣವಾಗಿ ಶಿಕ್ಷಿಸುವ ಅಧಿಕಾರ ಹೊಸ ಮಸೂದೆಯಲ್ಲಿ ಇದೆ. ಠಾಣಾ ವ್ಯಾಪ್ತಿಯ ಹೊರೆಗೆ ಆದರೆ, ರಾಜ್ಯದ ಪರಿಮಿತಿಯಲ್ಲಿ ಯಾವುದೇ ಭಾಗದಲ್ಲಿ ಶೂನ್ಯ ಎಫ್​ಐಆರ್ ದಾಖಲಿಸಲು ಹೊಸ ಮಸೂದೆ ಅವಕಾಶ ನೀಡಲಿದೆ. ಹಾಗೆಯೇ ಇ-ಎಫ್​ಐಆರ್ ದಾಖಲಿಸಲು ಪ್ರತಿ ಜಿಲ್ಲೆಯಲ್ಲೂ ಅಧಿಕಾರಿಗಳನ್ನು ನಿಯುಕ್ತಿ ಮಾಡಬೇಕು ಎಂಬ ಅಂಶ ಜನೋಪಕಾರಿಯಾಗಿದೆ. ಮೂರು ವರ್ಷದವರೆಗೆ ಸಜೆಗೆ ಅವಕಾಶ ಇರುವ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಿದ ನಂತರ ಹೆಚ್ಚುವರಿ ತನಿಖೆ ಅವಶ್ಯಕವಾದರೆ, ಅದನ್ನು 90 ದಿನದಲ್ಲಿ ಮುಗಿಸಬೇಕು. ಅದನ್ನೂ ಮೀರಿದ ಕಾಲಾವಧಿ ಬೇಕಿದ್ದರೆ ಕೋರ್ಟ್ ಅನುಮತಿ ಕಡ್ಡಾಯ ಮಾಡಲಾಗಿದೆ. ಮೊದಲ ಸಲ ಅಪರಾಧ ಎಸಗಿದವರು ಶಿಕ್ಷೆಯ ಅವಧಿಯಲ್ಲಿ ಮೂರನೇ ಒಂದು ಭಾಗದ ಅವಧಿಯನ್ನು ಮುಗಿಸಿದ್ದರೆ ಅಂಥವರಿಗೆ ಜಾಮೀನು ನೀಡಬಹುದು. ವಿಚಾರಣಾಧೀನ ಕೈದಿಗಳು ಪ್ರಕರಣದಲ್ಲಿ ಗರಿಷ್ಠ ಶಿಕ್ಷೆಯ ಅರ್ಧದಷ್ಟು ಅಥವಾ ಮೂರನೇ ಒಂದು ಭಾಗದಷ್ಟು ಅವಧಿಯನ್ನು ಜೈಲಿನಲ್ಲಿ ಕಳೆದಿದ್ದರೆ ಜಾಮೀನಿಗೆ ಅರ್ಹರು. ಆದರೆ, ಈ ನಿಯಮಗಳು ಜೀವಾವಧಿ ಅಥವಾ ಮರಣದಂಡನೆಯಂತಹ ಪ್ರಕರಣಗಳಿಗೆ ಅನ್ವಯ ಆಗುವುದಿಲ್ಲ.
ಐಪಿಸಿ ಮತ್ತು ಸಿಆರ್​ಪಿಸಿ ಬದಲಿಸಲು ಮಂಡಿಸಲಾಗಿರುವ ಭಾರತೀಯ ನ್ಯಾಯ ಸಂಹಿತಾ ಹಾಗೂ ಭಾರತೀಯ ನಾಗರಿಕ ಸುರಕ್ಷತಾ ಸಂಹಿತಾ ಮಸೂದೆ ಗಳು ಪೊಲೀಸ್ ಅಧಿಕಾರವನ್ನು ರಾಜಕೀಯ ಉದ್ದೇಶಗಳಿಗೆ ಬಳಸಲು ಅನುವು ಮಾಡಿಕೊಡುತ್ತದೆ. ಈ ರೀತಿಯ ಶಾಸನದ ಮೂಲಕ ವಿರೋಧ ಪಕ್ಷಗಳನ್ನು ಬಗ್ಗುಬಡಿಯುವುದು ಸರ್ಕಾರದ ಗುಪ್ತ ಕಾರ್ಯಸೂಚಿ ಎಂದು ರಾಜ್ಯಸಭಾ ಸದಸ್ಯ ಮತ್ತು ಸುಪ್ರೀಂಕೋರ್ಟ್​ನ ಹಿರಿಯ ವಕೀಲ ಕಪಿಲ್ ಸಿಬಲ್ ಆರೋಪಿಸಿದ್ದಾರೆ. ಆರೋಪಿಯನ್ನು ಪೊಲೀಸ್ ವಶದಲ್ಲಿ ಇರಿಸಿಕೊಳ್ಳಲು ಹಾಲಿ ಇರುವ 15 ದಿನಗಳ ಅವಧಿಯನ್ನು 60ರಿಂದ 90 ದಿನದವರೆಗೆ ಹಿಗ್ಗಿಸುವ ಅಂಶ ಹೊಸ ಮಸೂದೆಯಲ್ಲಿರುವುದು ವಿರೋಧ ಪಕ್ಷಗಳನ್ನು ಮೌನವಾಗಿಸುವ ಅಸ್ತ್ರ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮುಂಗಾರು ಅಧಿವೇಶಕ್ಕೆ ನಿಗದಿಯಾಗಿದ್ದ ಸಮಯದಲ್ಲಿ ಅರ್ಧದಷ್ಟು ಕಾಲ ವ್ಯರ್ಥವಾಗಿದೆ. ಆದರೆ, ಶಾಸನಾತ್ಮಕ ಚಟುವಟಿಕೆಯ ದರ ಅಧಿಕವಾಗಿದೆ. ಲೋಕಸಭೆಯಲ್ಲಿ ಶೇ. 43 ಹಾಗೂ ರಾಜ್ಯಸಭೆಯಲ್ಲಿ ಶೇ. 55ರಷ್ಟು ಕಲಾಪ ನಡೆದಿದೆ ಪಿಆರ್​ಎಸ್ ಲೆಜಿಸ್ಲೇಟಿವ್ ರೀಸರ್ಚ್ ಸಂಸ್ಥೆ ತಿಳಿಸಿದೆ. ಲೋಕಸಭೆಯಲ್ಲಿ 17 ಕಲಾಪ ಮಾತ್ರ ನಡೆದಿದ್ದು, 44 ತಾಸು 15 ನಿಮಿಷದ ಅವಧಿ ವ್ಯರ್ಥವಾಗಿದೆ. ಅವಿಶ್ವಾಸ ಗೊತ್ತುವಳಿ ಮೇಲಿನ 19 ತಾಸು 59 ನಿಮಿಷ ನಡೆದಿದ್ದು, 60 ಸದಸ್ಯರು ಮಾತನಾಡಿದ್ದಾರೆ. ದೆಹಲಿ ಅಧಿಕಾರಿಗಳ ಹುದ್ದೆ ಮತ್ತು ವರ್ಗಕ್ಕೆ ಸಂಬಂಧಿಸಿದ ಮಸೂದೆ ಮೇಲೆ ಲೋಕಸಭೆಯಲ್ಲಿ ನಾಲ್ಕು ಗಂಟೆ 54 ನಿಮಿವ ಚರ್ಚೆಯಾಗಿದ್ದರೆ, ರಾಜ್ಯಸಭೆಯಲ್ಲಿ ಇದೇ ಮಸೂದೆ ಮೇಲೆ 8 ತಾಸು ಡಿಬೆಟ್ ನಡೆದಿದೆ. ರಾಷ್ಟ್ರೀಯ ಶ್ರುಶೂಷಕ ಮತ್ತು ಸೂಲಗಿತ್ತಿ ಆಯೋಗ, ರಾಷ್ಟ್ರೀಯ ದಂತವೈದ್ಯ ಆಯೋಗ ಮಸೂದೆಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೂರೇ ನಿಮಿಷದಲ್ಲಿ ಮತ್ತು ಕೇಂದ್ರೀಯ ಜಿಎಸ್​ಟಿ, ಏಕೀಕೃತ ಜಿಎಸ್​ಟಿ ತಿದ್ದುಪಡಿ ಮಸೂದೆಗಳು ಎರಡೇ ನಿಮಿಷದಲ್ಲಿ ಅಂಗೀಕಾರ ಪಡೆದವು. ಶಾಸನಾತ್ಮಕ ಚಟುವಟಿಕೆಯಲ್ಲಿ 23 ಮಸೂದೆಗಳು (ಶೇ. 56) ಅಂಗೀಕೃತವಾಗಿದ್ದು, ಎರಡೂ ಸದನಗಳಲ್ಲಿ ಇವುಗಳಿಗೆ ಸರಾಸರಿ ಎಂಟು ದಿನದಲ್ಲಿ ಒಪ್ಪಿಗೆ ದೊರಕಿದೆ. ಲೋಕಸಭೆಯಲ್ಲಿ ಆಯ್ಕೆ ಸಮಿತಿಗೆ 7 ಮಸೂದೆಗಳು ಶಿಫಾರಸಾಗಿವೆ.
ರಾಹುಲ್ ಗಾಂಧಿಗೆ ಹಾಲಿವುಡ್​​ನಿಂದ ಪ್ರಪೋಸಲ್ಸ್​ ಇವೆ, ಅವರ್ಯಾಕೆ ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ಕೊಡ್ತಾರೆ?: ಸಾರಿಕಾ ಪಾಸ್ವಾನ್

ವೈದ್ಯರು ಜನರಿಕ್ ಔಷಧ ಬರೆಯುವುದು ಕಡ್ಡಾಯ, ತಪ್ಪಿದರೆ ದಂಡ: ರಾಷ್ಟ್ರೀಯ ವೈದ್ಯಕೀಯ ಆಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 15 =
Remember me
