ನವದೆಹಲಿ:ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವಿನ ಮೊದಲ ಹಂತದ ಮಾತುಕತೆ ವಿಫಲಗೊಂಡ ಹಿನ್ನೆಲೆಯಲ್ಲಿ ಗುರುವಾರ ನಡೆಯಲಿರುವ ಎರಡನೇ ಹಂತದ ಮಾತುಕತೆ ಬಗ್ಗೆ ವ್ಯಾಪಕ ಕುತೂಹಲ ಮೂಡಿದೆ. ಈ ಮಧ್ಯೆ, ದೆಹಲಿ-ಹರ್ಯಾಣದ ಟಿಕ್ರಿ ಮತ್ತು ಸಿಂಘು ಗಡಿಭಾಗಗಳಲ್ಲಿ ಸಾವಿರಾರು ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ.
ಕೃಷಿ ಕಾನೂನಿನಲ್ಲಿ ಅಡಕಗೊಂಡಿರುವ ಮೂರೂ ಪ್ರಮುಖ ಅಂಶಗಳನ್ನು ಕೈಬಿಟ್ಟು, ಕನಿಷ್ಠ ಬೆಂಬಲ ಬೆಲೆ ಕುರಿತ ಖಚಿತತೆಯನ್ನು ಮರುಸ್ಥಾಪಿಸಬೇಕು ಎನ್ನುತ್ತಿರುವ ರೈತರು, ಪಟ್ಟು ಸಡಿಲಿಸಲು ಸಾಧ್ಯವೇ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಒಂದುವೇಳೆ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ದೆಹಲಿ ಸಂರ್ಪಸುವ ಇತರೆ ಗಡಿ ಭಾಗಗಳಲ್ಲೂ ಪ್ರತಿಭಟನೆ ನಡೆಸಿ, ರಸ್ತೆಗಳನ್ನು ಬ್ಲಾಕ್ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ 2ನೇ ಸುತ್ತಿನ ಮಾತುಕತೆ ಯಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸಡಿಲಗೊಳಿಸಿ ರೈತರ ಮನವೊಲಿಸುವುದೇ ಎಂಬುದು ಸದ್ಯದ ಪ್ರಶ್ನೆ. ಕೇಂದ್ರ ತನ್ನ ಹಠಮಾರಿ ಧೋರಣೆ ಮುಂದುವರಿಸಿದಲ್ಲಿ ನಾವು ನಮ್ಮ ದಾರಿ ನೋಡಿಕೊಳ್ಳ ಬೇಕಾಗುತ್ತದೆ ಎಂದು ರೈತ ಸಂಘಟನೆಗಳ ಮುಖಂಡ ಗುರ್ನಾಮ್ ಸಿಂಗ್ ಚಡೋಣಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನ ಕರೆದು ಮೂರೂ ಕೃಷಿ ಕಾನೂನನ್ನು ರದ್ದುಗೊಳಿಸಬೇಕು ಎಂದು ಇನ್ನೋರ್ವ ರೈತ ಮುಖಂಡ ದರ್ಶನ್ ಪಾಲ್ ಹೇಳಿದ್ದಾರೆ.
ಏತನ್ಮಧ್ಯೆ, ಗುರುವಾರದ ಮಾತುಕತೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ, ಕೃಷಿ ನರೇಂದ್ರ ಸಿಂಗ್ ತೋಮರ್, ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಮತ್ತೊಮ್ಮೆ ಸಭೆ ಸೇರಿದ್ದು, ರೈತರೊಂದಿಗೆ ಯಾವೆಲ್ಲಾ ವಿಷಯಗಳನ್ನು ಪ್ರಸ್ತಾಪಿಸಬೇಕು ಎಂಬ ಬಗ್ಗೆ ರ್ಚಚಿಸಿದ್ದಾರೆ. ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆ ಹೊಂದಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ವಲಯದಲ್ಲೂ ಹೆಚ್ಚಾಗುತ್ತಿದ್ದು, ಮಿತ್ರಪಕ್ಷಗಳೂ ಹೋರಾಟದಲ್ಲಿ ರೈತ ಪರ ದನಿ ಎತ್ತುತ್ತಿವೆ. ಇದು ದೇಶವ್ಯಾಪಿ ಬಿಜೆಪಿ ವಿರೋಧಿ ಭಾವನೆ ಬಲಗೊಳ್ಳಲೂ ಕಾರಣವಾಗಬಹುದು ಎಂಬ ಆತಂಕವೂ ಬಿಜೆಪಿ ನಾಯಕರನ್ನು ಕಾಡುತ್ತಿದೆ.

ರೈತ ಸಂಘಟನೆಗಳನ್ನು ಆದ್ಯತೆಗೆ ತೆಗೆದುಕೊಂಡು ಸಮಾಧಾನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೆರೆಮರೆಯಲ್ಲೇ ತಂತ್ರಗಳನ್ನು ರೂಪಿಸುತ್ತಿರುವುದು ಗಮನಸೆಳೆದಿದೆ. ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ರಾಜನಾಥ್ ಸಿಂಗ್ ಮೊದಲಿನಿಂದಲೂ ಕೃಷಿ ಸಂಘಟನೆಗಳೊಂದಿಗೆ ಉತ್ತಮ ಸಂಪರ್ಕ ಸಾಧಿಸಿದ್ದಾರೆ. ಖುದ್ದು ಕೃಷಿಕನ ಮಗನಾಗಿರುವ ಅವರಿಗೆ ಕೃಷಿಕರ ಮನದಾಳ ಸುಲಭದಲ್ಲಿ ಅರ್ಥವಾಗಿಬಿಡುತ್ತದೆ. ಹೀಗಾಗಿಯೇ, ರೈತ ಪ್ರತಿಭಟನೆಗಳನ್ನು ತಗ್ಗಿಸುವ ವಿಚಾರದಲ್ಲಿ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸುವ ಜವಾಬ್ದಾರಿಯನ್ನು ಅವರ ಹೆಗಲಿಗೇರಿಸಲಾಗಿದೆ. ಕೃಷಿ ಕಾನೂನು ಜಾರಿ ವೇಳೆಯೂ ಹಾಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರಾಜನಾಥ್ ನಿವಾಸಕ್ಕೆ ತೆರಳಿ ಹಲವು ಸುತ್ತಿನ ಮಾತುಕತೆ, ಸಮಾಲೋಚನೆ ನಡೆಸಿದ್ದರು. ಕೇಂದ್ರ ಸರ್ಕಾರದಲ್ಲಿ ನಂಬರ್ 2 ಅಮಿತ್ ಷಾ ಆಗಿದ್ದರೂ, ಅರುಣ್ ಜೇಟ್ಲಿ ನಂತರದ ಟ್ರಬಲ್ ಶೂಟರ್ ಸ್ಥಾನ ರಾಜನಾಥ್ ಬೆನ್ನಿಗೇರಿದೆ. ರೈತರ ಮುಂದೆ ಯಾವುದೇ ಷರತ್ತು ಗಳನ್ನಿಡದೆ ಅವರ ಮಾತುಗಳನ್ನು ಆಲಿಸಬೇಕು ಎಂದು ರಾಜ್​ನಾಥ್ ಅವರೇ ಕೇಂದ್ರದ ಇತರೆ ಸಚಿವರಿಗೆ ಸಲಹೆ ನೀಡಿದ್ದರು.

ರೈತರ ಆದಾಯ ದ್ವಿಗುಣಗೊಳಿಸಲಿದ್ದೇವೆ ಎಂದ ಕೇಂದ್ರ ಸರ್ಕಾರ ಅವರ ಆದಾಯವನ್ನು ಅರ್ಧಕ್ಕಿಳಿಸಿಬಿಟ್ಟಿದೆ. ಸೂಟ್​ಬೂಟ್ ಸರ್ಕಾರದ ಸ್ನೇಹಿತರ ಆದಾಯ ನಾಲ್ಕು ಪಟ್ಟು ಹೆಚ್ಚಿದೆ. ರೈತ ವಿರೋಧಿ ಕೃಷಿ ಕಾನೂನನ್ನು ಕೇಂದ್ರ ಸರ್ಕಾರ ತಕ್ಷಣವೇ ರದ್ದುಗೊಳಿಸಬೇಕು ಮತ್ತು ವಾಕ್ಚಾತುರ್ಯಗಳಿಂದ ರೈತರನ್ನು ವಂಚಿಸುವುದು ಇನ್ನಾದರೂ ನಿಲ್ಲಬೇಕು.
|ರಾಹುಲ್ ಗಾಂಧಿಕಾಂಗ್ರೆಸ್ ನಾಯಕ
ರೈತರು ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಪ್ರಮಾಣದಲ್ಲಿ ತರಕಾರಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ, ಅಂಗಡಿ ಮಾಲೀಕರು, ತಳ್ಳುವ ಗಾಡಿ ತರಕಾರಿ ಮಾರಾಟಗಾರರು ತರಕಾರಿಗಳ ಬೆಲೆ ಏರಿಸಿದ್ದು, ಪ್ರತಿಭಟನೆಯ ಬಿಸಿ ಬಡ, ಮಧ್ಯಮ ವರ್ಗಕ್ಕೆ ವ್ಯಾಪಕವಾಗಿ ತಟ್ಟಿದೆ.
ಬೆಂಗಳೂರು:ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಧಾರವಾಡ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ ಯಲ್ಲಿ ರೈತರಿಂದ ಪ್ರತಿಭಟನೆ ನಡೆಯಿತು. ಧಾರವಾಡದಲ್ಲಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಹೆದ್ದಾರಿ ತಡೆ ನಡೆಸಲಾಯಿತು. ಹುಬ್ಬಳ್ಳಿಯಲ್ಲಿ ಕಳಸಾ-ಬಂಡೂರಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಸಹ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:4 × four =
Remember me
