ನವದೆಹಲಿ:ಆಹಾರ ಮತ್ತು ರಸಗೊಬ್ಬರಗಳ ಮೇಲಿನ ಸಬ್ಸಿಡಿಯಲ್ಲಿ ಶೇಕಡ 26ರಷ್ಟು ಕಡಿತ ಮಾಡುವ ಮೂಲಕ ಹೊಸ ವರ್ಷದಲ್ಲಿ ಜನರು ಹಾಗೂ ರೈತರ ಜೀವನದ ಮೇಲೆ ಕೇಂದ್ರ ಸರ್ಕಾರ ಭಾರಿ ಬರೆ ಎಳೆಯಲು ಸಜ್ಜಾಗಿದೆ. ಏಪ್ರಿಲ್​ನಿಂದ ಆರಂಭವಾಗುವ ಹಣಕಾಸು ವರ್ಷದಲ್ಲಿ ಒಟ್ಟು 3.70 ಲಕ್ಷ ಕೋಟಿ ರೂಪಾಯಿಯಷ್ಟು ಸಬ್ಸಿಡಿಗಳನ್ನು ಕಡಿತ ಮಾಡಲಾಗುತ್ತದೆ. ಕೋವಿಡ್ ಅವಧಿಯಲ್ಲಿ ತುಂಬಾ ಹೆಚ್ಚಾಗಿದ್ದ ಆರ್ಥಿಕ ಕೊರತೆಯನ್ನು ನಿಯಂತ್ರಿಸಲು ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಮೂವರು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ 39.45 ಲಕ್ಷ ಕೋಟಿ ರೂಪಾಯಿ ಬಜೆಟ್ ವೆಚ್ಚದಲ್ಲಿ ಆಹಾರ ಮತ್ತು ರಸಗೊಬ್ಬರ ಸಬ್ಸಿಡಿಯ ಪಾಲೇ ಎಂಟನೇ ಒಂದರಷ್ಟಿದೆ. ಹಲವು ರಾಜ್ಯಗಳಲ್ಲಿ ಅಸೆಂಬ್ಲಿ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಆಹಾರ ಸಬ್ಸಿಡಿಗಳ ಇಳಿಕೆಯು ರಾಜಕೀಯವಾಗಿ ಸೂಕ್ಷ್ಮ ವಿಚಾರವಾಗಲಿದೆ.
2.30 ಲಕ್ಷ ಕೋಟಿ ರೂ.:ಮುಂದಿನ ವಿತ್ತ ವರ್ಷದಲ್ಲಿ ಬಜೆಟ್​ನಲ್ಲಿ 2.30 ಲಕ್ಷ ಕೋಟಿ ರೂಪಾಯಿ ಆಹಾರ ಸಬ್ಸಿಡಿ ಒದಗಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ. ಮಾರ್ಚ್ 31ರ ವರೆಗಿನ ಪ್ರಸಕ್ತ ವರ್ಷದಲ್ಲಿ ಅದು 2.70 ಲಕ್ಷ ಕೋಟಿ ರೂಪಾಯಿ ಆಗಿದೆ. ರಸಗೊಬ್ಬರ ಸಬ್ಸಿಡಿಯಲ್ಲಿ ಸುಮಾರು 1.40 ಲಕ್ಷ ಕೋಟಿ ರೂಪಾಯಿ ಕಡಿತವಾಗುವ ನಿರೀಕ್ಷೆಯಿದೆ. ಈ ವರ್ಷದ ಸುಮಾರು 2.30 ಲಕ್ಷ ಕೋಟಿ ರೂಪಾಯಿಗೆ ಹೋಲಿಸಿದರೆ ಇದು ಗಣನೀಯ ಇಳಿಕೆಯಾಗಲಿದೆ. ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಗಳು ಈ ಎಲ್ಲ ಮಾಹಿತಿ ನೀಡಿದ್ದಾರೆ.
ಉಚಿತ ಆಹಾರ ಯೋಜನೆ ಅಂತ್ಯ:ಕೋವಿಡ್ ಸಾಂಕ್ರಾಮಿಕದ ಕಾಲದ ಉಚಿತ ಆಹಾರ ಧಾನ್ಯ ವಿತರಣೆ ಯೋಜನೆಯನ್ನು ಅಂತ್ಯಗೊಳಿಸುವ ಮೂಲಕ ಸರ್ಕಾರಕ್ಕೆ ಹೆಚ್ಚಿನ ಉಳಿತಾಯ ಆಗಲಿದೆ. ಅದರ ಬದಲಿಗೆ ಕಡಿಮೆ ಖರ್ಚಿನ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಇದರಿಂದಾಗಿ ವರ್ಷದಲ್ಲಿ ಬಡವರಿಗೆ ದೊರೆಯುವ ಪಡಿತರದಲ್ಲಿ ಅರ್ಧದಷ್ಟು ಕಡಿತವಾಗಲಿದೆ. ಈ ವರ್ಷ ಕರ್ನಾಟಕ ಸಹಿತ 9 ರಾಜ್ಯಗಳ ವಿಧಾನ ಸಭೆಗಳಿಗೆ ಹಾಗೂ ಮುಂದಿನ ವರ್ಷ ಲೋಕಸಭೆಗೆ ಚುನಾವಣೆ ನಡೆಯಲಿದ್ದು ಆಹಾರ ಹಾಗೂ ರಸಗೊಬ್ಬರ ಸಬ್ಸಿಡಿ ಹೊಡೆತದ ಪರಿಣಾಮವನ್ನು ಸರ್ಕಾರ ಹೇಗೆ ನಿಭಾಯಿಸಲಿದೆ ಎಂಬ ಕುತೂಹಲ ಉಂಟಾಗಿದೆ.
ಶೇಕಡ 6.4 ಜಿಡಿಪಿ ಗುರಿ
ಸರ್ಕಾರ ವಿತ್ತೀಯ ಕೊರತೆಯನ್ನು ನಿಯಂತ್ರಿಸಲು ಉತ್ಸುಕವಾಗಿದ್ದು ಪ್ರಸಕ್ತ ವಿತ್ತ ವರ್ಷಕ್ಕೆ ಶೇಕಡ 6.4 ಜಿಡಿಪಿ ಸಾಧಿಸುವ ಗುರಿ ಹೊಂದಿದೆ. ಇದು ಸಾಕ್ರಾಮಿಕತೆ ಅವಧಿ ಹೊರತುಪಡಿಸಿ, ಕಳೆದ ದಶಕದ ಸರಾಸರಿ ಶೇಕಡ 4ರಿಂದ ಶೇ. 4.5ಕ್ಕಿಂತ ಹೆಚ್ಚಿನ ಗುರಿಯಾಗಿದೆ. ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ವೆಚ್ಚ ಗಗನಕ್ಕೇರಿದ್ದು ಅನುಪಾತವು ಶೇಕಡ 9.3ರಷ್ಟಕ್ಕೆ ಏರಿತ್ತು.
ಹೊಸ ವರ್ಷದ ಗಿಫ್ಟ್ ಎಂದು ಕಾಂಗ್ರೆಸ್ ವ್ಯಂಗ್ಯ
ಆಹಾರ ಮತ್ತು ರಸಗೊಬ್ಬರ ಸಬ್ಸಿಡಿ ಕಡಿತದ ಕೇಂದ್ರದ ಯೋಚನೆಯು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿಯವರ ಹೊಸ ವರ್ಷದ ‘ಕೊಡುಗೆ’ ಆಗಿದೆ ಎಂದು ಕಾಂಗ್ರೆಸ್ ಪಕ್ಷ ಮಂಗಳವಾರ ವ್ಯಂಗ್ಯವಾಡಿದೆ. 81 ಕೋಟಿ ಬಡವರ ಪಡಿತರ ಸಾಮಗ್ರಿಗೆ ಅರ್ಧದಷ್ಟು ಕೊಕ್ಕೆ ಬೀಳಲಿದೆ. 10 ಕೆಜಿ ಆಹಾರ ಧಾನ್ಯ ಪಡೆಯಲು ಅರ್ಹರಾಗಿರುವವರಿಗೆ ಇನ್ನು ಮುಂದೆ ಕೇವಲ 5 ಕೆಜಿ ಸಿಗಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಹೇಳಿದ್ದಾರೆ.
ಪ್ರಧಾನಿ ಮೋದಿ ಸಚಿವ ಸಂಪುಟವು ಪ್ರಧಾನ ಮಂತ್ರಿ ಗರೀಬ್ ಅನ್ನ ಕಲ್ಯಾಣ ಯೋಜನೆಯನ್ನು ಸ್ಥಗಿತಗೊಳಿಸಿರುವುದರಿಂದ 2023ನೇ ವರ್ಷವು ಹತಾಶ ಸುದ್ದಿಯೊಂದಿಗೆ ಆರಂಭವಾಗಿದೆ ಎಂದು ರಮೇಶ್ ಟೀಕಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 4 =
Remember me
