ಬೆಂಗಳೂರು:ಆತ ಕಳೆದ ಡಿಸೆಂಬರ್​ನಲ್ಲಿ ದೂರದ ಉತ್ತರಪ್ರದೇಶದಿಂದ ರೈಲಿನಲ್ಲಿ ಹಲವು ಕನಸುಗಳೊಂದಿಗೆ ರಾಜಧಾನಿಗೆ ಬಂದಿದ್ದ. ಇಲ್ಲಿನ ಬನಶಂಕರಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ. ಗುಡಿಸಲಿನಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಆಧಾರವಾಗಿದ್ದ. ಹೀಗಾಗಿ ಪ್ರತಿ ತಿಂಗಳು ತಪ್ಪದೇ ಮನೆಗೆ ಹಣ ಕಳುಹಿಸುತ್ತಿದ್ದ.
ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ಬಡಾಗಂಜ್​ನ ಸಲ್ಮಾನ್​ ಜೀವನೋಪಾಯಕ್ಕಾಗಿ ಉದ್ಯೋಗ ಅರಸಿ ಬೆಂಗಳೂರಿಗೆ ಆಗಮಿಸಿದ್ದ. ತನ್ನೂರಿನ ಕೆಲವರು ಈಗಾಗಲೇ ಇಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರನ್ನು ಸೇರಿಕೊಂಡಿದ್ದ. ಲಾಕ್​ಡೌನ್​ ಕಾರಣದಿಂದಾಗಿ ಕಳೆದರಡು ತಿಂಗಳಿನಿಂದ ಗುತ್ತಿಗೆದಾರ ಸಂಬಳ ನೀಡದ ಕಾರಣ ಊರಿಗೆ ತೆರಳಲು ನಿರ್ಧರಿದ್ದ. ಸತತ 12 ದಿನಗಳವರೆಗೆ ಕಾಲ್ನಡಿಗೆಯಲ್ಲಿಯೇ 2,000ಕ್ಕೂ ಅಧಿಕ ಕಿ.ಮೀ. ದೂರದಲ್ಲಿರುವ ತನ್ನೂರು ದಾನೇಪುರಕ್ಕೆ ತಲುಪಿದ. ಆದರೆ, ಆತನಿಗಾಗಿ ವಿಧಿ ಅಲ್ಲಿಯೇ ಕಾದಿತ್ತೇನೂ? ಊರು, ಮನೆ ತಲುಪಿದ ಸಂತೋಷ, ತಾಯಿಯನ್ನು ತಬ್ಬಿಕೊಂಡು, ಆನಂದ ಬಾಷ್ಪ ಸುರಿಸಿದ ಒಂದೇ ತಾಸಿನಲ್ಲಿ ಮೃತ್ಯು ಅವನನ್ನು ಬಿಗಿದಪ್ಪಿದೆ.
ಇದನ್ನೂ ಓದಿ;ವಿಶಾಖಪಟ್ಟಣ ವಿಷಾನಿಲ ದುರಂತಕ್ಕೆ ಕಾರಣರಾರು? ವರದಿ ಸಲ್ಲಿಸಿದ ನ್ಯಾಯಾಂಗ ತನಿಖಾ ಸಮಿತಿ
ಊರಿಗೆ ಹೋಗಲು ನಾಲ್ಕು ದಿನಗಳಿಂದ ರೈಲು ನಿಲ್ದಾಣದಲ್ಲಿ ಕಾದರೂ, ಪೊಲೀಸರಿಂದ ಲಾಠಿ ಏಟು, ನಿಂದನೆ ಸಿಕ್ಕಿದ್ದು, ಬಿಟ್ಟರೆ ರೈಲಿನ ಪ್ರಯಾಣ ಆತನಿಗೆ ದಕ್ಕಲಿಲ್ಲ. ಹೀಗಾಗಿ ಆತ ಹಾಗೂ 10 ಸ್ನೇಹಿತರು ಕಾಲ್ನಡಿಗೆಯಲ್ಲಿಯೇ ಊರಿಗೆ ಪ್ರಯಾಣ ಬೆಳೆಸಲು ನಿರ್ಧರಿಸಿದರು. ಮೇ 12ರಂದು ಬನಶಂಕರಿಯಿಂದ ಹೊರಟು ಮೊದಲ ದಿನವೇ ಕರ್ನಾಟಕದ ಗಡಿಯಲ್ಲಿ ಪೊಲೀಸರು ಬೆನ್ನತ್ತಿದರು. ಸ್ಥಳೀಯರು ರೈಲು ಹಳಿಗಳ ಮೇಲೆ ತೆರಳುವಂತೆ ಉಪಾಯ ತಿಳಿಸಿದ್ದರಿಂದ ಅದರಂತೆ, ಆಂಧ್ರದ ಕರ್ನೂಲ್​ವರೆಗೂ ತೆರಳಿದರು.
ಬಳಿಕ ಆಂಧ್ರ-ತೆಲಂಗಾಣದ ಪೊಲೀಸರಿಂದ ತಪ್ಪಿಸಿಕೊಳ್ಳಲು ತುಂಗಭದ್ರಾ ನದಿಯುದ್ದಕ್ಕೂ ಸಾಗಿ, ಮಹಾರಾಷ್ಟ್ರವನ್ನು ತಲುಪಿದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ರಾತ್ರಿ ವೇಳೆ ಸಾಗಿದರು. ಕೆಲವೊಮ್ಮೆ ಅಲ್ಲಲ್ಲಿ ಸಾಗುತ್ತಿದ್ದ ಟ್ರಕ್​ಗಳನ್ನು ಏರಿ ಮಧ್ಯಪ್ರದೇಶದವರೆಗೆ ಬಂದರು. ಸತತ ಒಂಭತ್ತು ದಿನಗಳ ಪ್ರಯಾಣದ ಬಳಿಕ ಉತ್ತರಪ್ರದೇಶದ ಪ್ರಯಾಗ್​ರಾಜ್​ ತಲುಪಿದರು. ಆದರೆ, ಅವರನ್ನು ಪೊಲೀಸರು ಬೆನ್ನು ಹತ್ತಿದ್ದರಿಂದ ಮತ್ತೆ ಹಳಿಗಳ ಮೇಲೆ ಪ್ರಯಾಣ ಮುಂದುವರಿಸಿದರು. ಸತತ 26 ತಾಸುಗಳ ಪ್ರಯಾಣದ ಬಳಿಕ 200 ಕಿ.ಮೀ. ದೂರದ ಲಕ್ನೋ ತಲುಪಿದ ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳುವ ಶಕ್ತಿ ಅವರಲ್ಲಿ ಉಳಿದಿರಲಿಲ್ಲ.
ಇದನ್ನೂ ಓದಿ;ಟೆಸ್ಲಾ ತಯಾರಿಸಿದೆ ‘ಮಿಲಿಯನ್​ ಮೈಲ್​’ ಬ್ಯಾಟರಿ; ವಿದ್ಯುತ್​ಚಾಲಿತ ವಾಹನಗಳ ಕ್ಷೇತ್ರದಲ್ಲಿ ನೂತನ ಯುಗಾರಂಭ
ಶ್ರೀನಗರ ಊರಿಗೆ ಹತ್ತಿರವಾಗಿದ್ದರಿಂದ ಶ್ರೀನಗರದ ಬಡಾಗಂಜ್​ನ ಶಾಲೆಯಲ್ಲಿ ಕ್ವಾರಂಟೈನ್​ಗೆ ಒಳಗಾದರು. ಕೊನೆಗೆ ಮೇ 26 ರಂದು ಸಲ್ಮಾನ್​ ತನ್ನೂರು ದಾನೇಪುರಕ್ಕೆ ತಲುಪಿದ. ಹೊರಟ ದಿನದಿಂದಲೂ ಕಿರಿಯ ಮಗ ಯಾವಾಗ ಮನೆಗೆ ಬರುತ್ತಾನೆ ಎಂದು ಕಾಯುತ್ತಿದ್ದ ತಾಯಿ ರುಕ್ಸಾನಾ ಸಂತಸಕ್ಕೆ ಪಾರವೇ ಇರಲಿಲ್ಲ. ಮನೆಗೆ ಬಂದಿದ್ದಕ್ಕೆ ಸಲ್ಮಾನ್​ ಪ್ರಯಾಣದ ಕಷ್ಟವನ್ನೆಲ್ಲ ಮರೆತು ಹರ್ಷಚಿತ್ತನಾಗಿದ್ದ.
ಇದಾದ ಕೆಲ ಸಮಯದಲ್ಲಿ ಶುಚಿಯಾಗಲೆಂದು ಕಬ್ಬಿನ ಗದ್ದೆಯಲ್ಲಿದ್ದ ನೀರಿನತ್ತ ತೆರಳಿದ್ದಾನೆ. ಗಂಟೆಯಾದರೂ ಮಗ ಬಾರದಿದ್ದಾಗ, ಹೋಗಿ ನೋಡಿದವರಿಗೆ ಕಂಡಿದ್ದು ಆತನ ಶವ. ಹಾವು ಕಚ್ಚಿದ್ದರಿಂದ ಸಲ್ಮಾನ್​ ಸಾವಿಗೀಡಾಗಿದ್ದ. ಈ ನೋವನ್ನು ಅರಗಿಸಿಕೊಳ್ಳಲಾಗದ ತಾಯಿ ಈಗ ಆಸ್ಪತ್ರೆ ಪಾಲಾಗಿದ್ದಾಳೆ. ಆಕೆಯ ಚಿಕಿತ್ಸಾ ವೆಚ್ಚ ಭರಿಸಲಾಗದೆ ಕುಟುಂಬವೀಗ ಸಂಕಷ್ಟದಲ್ಲಿದೆ.
ಮಾರಕ ಕರೊನಾಗೆ ನಂಜನಗೂಡಿನಲ್ಲಿ ತಯಾರಾಗುತ್ತಿರುವ ಲಸಿಕೆ ಬಳಕೆಗೆ ಅನುಮತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
