ಪ್ರಜಾಪ್ರಭುತ್ವದ ಮಹಾಪರ್ವಎಂದೇ ಕರೆಯಲ್ಪಡುವ ಲೋಕಸಭೆ ಚುನಾವಣೆಯ ವೇಳಾಪಟ್ಟಿಯನ್ನು ಶನಿವಾರ ಚುನಾವಣಾ ಆಯೋಗ ಘೋಷಿಸಿದ್ದು, ಏಪ್ರಿಲ್ 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ ಕೆಲ ಚುನಾವಣೆಗಳ ವೈಶಿಷ್ಟ್ಯ ಕುರಿತಾದ ಮಾಹಿತಿ ಇಲ್ಲಿದೆ.
ಈಗೆಲ್ಲ ಚುನಾವಣೆ ಪ್ರಕ್ರಿಯೆ ಹೈಟೆಕ್ ಆಗಿದೆ. ತಂತ್ರಜ್ಞಾನವನ್ನು ಎಲ್ಲ ಹಂತಗಳಲ್ಲಿ ಬಳಸಲಾಗುತ್ತಿದೆ. ಆದರೆ, ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳು ಹಂತಹಂತವಾಗಿ ಅನುಷ್ಠಾನಕ್ಕೆ ಬಂದಿದ್ದು, ಆ ಮುಖೇನ ಭಾರತದ ಚುನಾವಣೆ ವ್ಯವಸ್ಥೆ ಅತ್ಯಂತ ಬಲಿಷ್ಠ ಮತ್ತು ಪಾರದರ್ಶಿ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ.
ಹೀಗಿತ್ತು ಮೊದಲ ಚುನಾವಣೆ: ಭಾರತದ ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು 1951ರ ಅಕ್ಟೋಬರ್ 25ರಿಂದ 1952 ಫೆಬ್ರವರಿ 21ರವರೆಗೆ ಅಂದರೆ ಸರಿಸುಮಾರು 5 ತಿಂಗಳು! ಆಗಿದ್ದ ಮತದಾರರ ಸಂಖ್ಯೆ 17.32 ಕೋಟಿ. ಸುಕುಮಾರ್ ಸೇನ್ ಮೊದಲ ಚುನಾವಣಾ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಈ ಬಾರಿ ಅಂದರೆ 2024ರ ಚುನಾವಣೆ ಹೊತ್ತಿಗೆ ಒಟ್ಟು ಮತದಾರರ ಸಂಖ್ಯೆ 96.88 ಕೋಟಿ. ಮೊದಲ ಚುನಾವಣೆ (1951-52)ಯಲ್ಲಿ 25 ರಾಜ್ಯಗಳ 489 ಕ್ಷೇತ್ರಗಳಿಗೆ 53 ಪಕ್ಷಗಳ 1,949 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 533 ಪಕ್ಷೇತರರೂ ಚುನಾವಣಾ ಕಣದಲ್ಲಿದ್ದರು. ಜಮ್ಮು-ಕಾಶ್ಮೀರ ಚುನಾವಣೆಯಲ್ಲಿ ಭಾಗವಹಿಸಿರಲಿಲ್ಲ. ಅಲ್ಲದೆ, 21 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನವರು ಮಾತ್ರ ಮತದಾನಕ್ಕೆ ಅರ್ಹರಾಗಿದ್ದರು. ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಮತದಾನದಿಂದ ದೂರವುಳಿದಿದ್ದರು. 68 ಹಂತಗಳಲ್ಲಿ ಈ ಚುನಾವಣೆ ನಡೆದದ್ದರಿಂದ, ಐದು ತಿಂಗಳಷ್ಟು ದೀರ್ಘಾವಧಿ ಸಮಯ ತೆಗೆದುಕೊಂಡಿತ್ತು. ಎತ್ತಿನಗಾಡಿಗಳಲ್ಲಿ ಸ್ಪೀಕರ್​ಗಳನ್ನು ಇರಿಸಿ, ಅಭ್ಯರ್ಥಿಗಳ ಪರ ಪ್ರಚಾರ ಮಾಡಲಾಗುತ್ತಿತ್ತು. ಮತದಾರರ ಪಟ್ಟಿ ತಯಾರಿಸಲೆಂದೇ ಆರು ತಿಂಗಳ ಅವಧಿಗೆ ಸಾವಿರಾರು ಸರ್ಕಾರಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹಿಮಾಚಲ ಪ್ರದೇಶದ ಚೀನಾ ತಹಸೀಲ್ ಪ್ರದೇಶದಲ್ಲಿ ಮೊದಲ ಮತ (1951) ಚಲಾವಣೆಯಾಯಿತು. ಹಿಮಪಾತದ ಸಾಧ್ಯತೆಯನ್ನು ಮನಗಂಡು ಹಿಮಾಚಲ ಪ್ರದೇಶದಲ್ಲಿ ಮೊದಲಿಗೆ ಚುನಾವಣೆ ನಡೆಸಲಾಗಿತ್ತು. 489 ಕ್ಷೇತ್ರಗಳ ಪೈಕಿ 364 ಕ್ಷೇತ್ರಗಳನ್ನು ಗೆದ್ದುಕೊಂಡ ಕಾಂಗ್ರೆಸ್, ಭರ್ಜರಿ ಗೆಲುವು ದಾಖಲಿಸಿತ್ತು. ಕಾಂಗ್ರೆಸ್ ಬಳಿಕ ಅತಿ ಹೆಚ್ಚು ಸ್ಥಾನ ಗಳಿಸಿದ್ದು ಪಕ್ಷೇತರರು! 37 ಕ್ಷೇತ್ರಗಳಲ್ಲಿ ಪಕ್ಷೇತರರು ಗೆದ್ದಿದ್ದರು. ಭಾರತೀಯ ಕಮ್ಯುನಿಸ್ಟ್ ಪಾರ್ಟಿ 16 ಮತ್ತು ಜಯಪ್ರಕಾಶ್ ನಾರಾಯಣ ನೇತೃತ್ವದ ಸೋಶಲಿಸ್ಟ್ ಪಾರ್ಟಿ 12 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಕಾಂಗ್ರೆಸ್ಸಿನ ಹಿರಿಯ ನಾಯಕ ಪಂಡಿತ್ ಜವಾಹರಲಾಲ್ ನೆಹರು ಪ್ರಧಾನಿ ಹುದ್ದೆ ಏರಿದರು.
ಕ್ಷೇತ್ರಗಳ ದೃಷ್ಟಿಯಿಂದ ಮೊದಲ ಚುನಾವಣೆಯಿಂದಲೂ ಉತ್ತರಪ್ರದೇಶವೇ ದೊಡ್ಡ ರಾಜ್ಯ. ಆಗ ಉತ್ತರಪ್ರದೇಶದಲ್ಲಿ 85 ಕ್ಷೇತ್ರಗಳು (ಪ್ರಸ್ತುತ 80) ಇದ್ದವು. ಅಲ್ಲದೆ, ಮದ್ರಾಸ್ 75 ಮತ್ತು ಬಿಹಾರ 55 ಕ್ಷೇತ್ರಗಳನ್ನು ಹೊಂದಿದ್ದವು. ದೇಶದ ಮೊದಲ ಕಾನೂನು ಸಚಿವ ಡಾ.ಬಾಬಾಸಾಹೇಬ್ ಅಂಬೇಡ್ಕರ್ 1952ರಲ್ಲಿ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡರು. ಕಾಂಗ್ರೆಸ್ ಅಭ್ಯರ್ಥಿ ನಾರಾಯಣ ಸದೋಬಾ 14 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಅಂಬೇಡ್ಕರ್​ರನ್ನು ಸೋಲಿಸಿದ್ದರು. ಅಂಬೇಡ್ಕರ್ 1,23,576 ಹಾಗೂ ನಾರಾಯಣ ಸದೋಬಾ 1,38,137 ಮತ ಪಡೆದರು. ಆ ಬಳಿಕ ಅಂಬೇಡ್ಕರ್​ರನ್ನು ರಾಜ್ಯಸಭೆಯಿಂದ ಸಂಸದರನ್ನಾಗಿ ಆಯ್ಕೆ ಮಾಡಲಾಯಿತು.
ಸುಧಾರಣೆಗಳು
* ಮತದಾನಕ್ಕೆ ಅರ್ಹ ರಾಗಲು ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ್ದು.
* ಭ್ರಷ್ಟಾಚಾರ, ಹಿಂಸಾಚಾರ, ಅಕ್ರಮಗಳಿಗೆ ಕಡಿವಾಣ
* ಚುನಾವಣೆ ವೆಚ್ಚಕ್ಕೆ ಮಿತಿ
* ಮತಪತ್ರದಿಂದ ಇಲೆಕ್ಟ್ರಾನಿಕ್ ವೋಟಿಂಗ್ ಮಷೀನ್.
* ಮತದಾನ ಪ್ರಮಾಣ ಹೆಚ್ಚಳಕ್ಕೆ ಹಲವು ಉಪಕ್ರಮ
* ಮತದಾರರ ಸಮಸ್ಯೆ ನೀಗಿಸಲು ಆಪ್, ಸಹಾಯವಾಣಿ
* ಬೆಟ್ಟಗುಡ್ಡದ ಪ್ರದೇಶಗಳಲ್ಲೂ ಸುಗಮ ಮತದಾನಕ್ಕೆ ವ್ಯವಸ್ಥೆ
* ಹಣಬಲ, ತೋಳ್ಬಲಕ್ಕೆ ಕಡಿವಾಣ.
ಈ ಬಾರಿ ದೀರ್ಘ ಚುನಾವಣೆ1951-52ರ ಸಾರ್ವತ್ರಿಕ ಚುನಾವಣೆಯ ನಂತರ, ಎರಡನೇ ದೀರ್ಘ ಚುನಾವಣೆ ಈ ಬಾರಿ ನಡೆಯುತ್ತಿದೆ. ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19ರಂದು ಮೊದಲ ಹಂತದ ಮತದಾನವಾದರೆ, ಜೂನ್ 1ರಂದು ಏಳನೇ ಹಾಗೂ ಕೊನೆಯ ಹಂತದ ಮತದಾನ. 2014 ಮತ್ತು 2019ರಲ್ಲಿ ಮೇ ತಿಂಗಳಲ್ಲೇ ಚುನಾವಣಾ ಫಲಿತಾಂಶ ಪ್ರಕಟಗೊಂಡಿತ್ತು. 2014ರಲ್ಲಿ 10 ಹಂತಗಳಲ್ಲಿ ಚುನಾವಣೆ ನಡೆದಿತ್ತು (2014 ಏಪ್ರಿಲ್ 7ರಂದು ಮೊದಲ ಹಂತದ ಮತದಾನ, ಮೇ 12ರಂದು ಕೊನೆಯ ಹಂತದ ಮತದಾನ, ಮೇ 16ರಂದು ಫಲಿತಾಂಶ ಪ್ರಕಟ).
ಠೇವಣಿ ಜಪ್ತಿ ಪ್ರಮಾಣ1951-52ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡ 40 ಅಭ್ಯರ್ಥಿಗಳ ಠೇವಣಿ ಜಪ್ತಿಯಾಗಿತ್ತು! 1980ರಲ್ಲಿ ಶೇಕಡ 74, 1991ರಲ್ಲಿ ಶೇ.86, 1996ರಲ್ಲಿ ಶೇ.91, 1997ರಲ್ಲಿ ಶೇ.56, 2009ರಲ್ಲಿ ಶೇ.85, 2019ರಲ್ಲಿ ಶೇ.86 ಅಭ್ಯರ್ಥಿಗಳ ಠೇವಣಿ ಜಪ್ತಿಯಾಗಿತ್ತು.

ಮಹೇಶ್​ ಬಾಬು ಮುಂದೆಯೇ ವಿಜಯ್​ಗೆ ಅವಮಾನ ಮಾಡಿದ ಸಮಂತಾ? ಅಭಿಮಾನಿಗಳ ಆಕ್ರೋಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − 10 =
Remember me
