ಮುಂಬೈ:ಜೀವನದಲ್ಲಿ ಯಶಸ್ಸನ್ನು ಹೊಂದಲು ಸಂಸ್ಕೃತಿ-ಸಂಸ್ಕಾರ, ಹೃದಯಶ್ರೀಮಂತಿಕೆ ಬಹಳ ಮುಖ್ಯ. ಕಾಯಕವೇ ಕೈಲಾಸ ಎಂದು ತಿಳಿದು ಬಾಳಿದ ನನ್ನನ್ನು ಕರ್ನಾಟಕ ಸರ್ಕಾರ ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಧನ್ಯತೆಯನ್ನು ಮೂಡಿಸಿದೆ. ಇಂದು ಈ ಮಹಾನ್ ವಿದ್ಯಾಕೇಂದ್ರ ನನ್ನನ್ನು ಆಹ್ವಾನಿಸಿ ಗೌರವಿಸಿರುವುದು ನನಗೆ ಒಂದು ಅಪೂರ್ವ ಅನುಭವ. ವಿಶ್ವವಿದ್ಯಾಲಯದ ಗೌರವ ಅತ್ಯಂತ ಶ್ರೇಷ್ಠವಾದದ್ದು ಎಂಬುದಾಗಿ ಮುಂಬೈನ ಭವಾನಿ ಫೌಂಡೇಷನ್ ಸಂಸ್ಥಾಪಕ ಕುಸುಮೋದರ ಡಿ. ಶೆಟ್ಟಿ ಅವರು ಹೇಳಿದರು.
ಮುಂಬೈ ವಿಶ್ವವಿದ್ಯಾಲಯದ ರಾನಡೆ ಭವನದಲ್ಲಿ ಸೆ. 16ರಂದು ಕನ್ನಡ ವಿಭಾಗ ಆಯೋಜಿಸಿದ್ದ ಸಾಧಕರಿಗೆ ಗೌರವ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಪಾಲ್ಗೊಂಡಿದ್ದರು. ಸಾಧಕರಿಗೆ ನೀಡಲಾಗುವ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಮುಂಬೈ ಬಂಟರ ಸಂಘದ ಸಹಕಾರದಿಂದ ನಾನು ಶಿಕ್ಷಣ ಪಡೆಯಲು ಸಾಧ್ಯವಾಯಿತು. ನಾನು ಯಾವಾಗಲೂ ವಿದ್ಯೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತೇನೆ. ಏಕೆಂದರೆ ವಿದ್ಯೆ ಎಲ್ಲದಕ್ಕೂ ಮಿಗಿಲಾದ ಸಂಪತ್ತು. ಇದನ್ನು ಗಳಿಸಲು ವಯಸ್ಸು-ಕಾಲಗಳ ಮಿತಿ ಇಲ್ಲ. ಇದರಿಂದ ವಂಚಿತರಾದವರಿಗೆ ಕಿಂಚಿತ್ ಸಹಾಯ ಮಾಡಬೇಕು ಎಂಬುದು ನನ್ನ ಧ್ಯೇಯ. ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಇದು ನನಗೆ ಹಣ ಗಳಿಕೆಗಿಂತ ಹೆಚ್ಚಿನ ಸಮಾಧಾನ ನೀಡಿದೆ ಎನ್ನುತ್ತ ಕನ್ನಡ ವಿಭಾಗದ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎನ್. ಉಪಾಧ್ಯ ಅವರ ಕನ್ನಡ ಕಟ್ಟುವ ಕಾರ್ಯವೈಖರಿಯನ್ನು ಅವರು ಇದೇ ವೇಳೆ ಶ್ಲಾಘಿಸಿದರು.
ಕುಸುಮೋದರ ಅವರು ಎಲ್ಲರೂ ಹೆಮ್ಮೆಪಡುವ ಹಾಗೆ, ನಿತ್ಯ ನೆನೆಯುವ ಹಾಗೆ ಅನುಪಮ ಸಾಧನೆ ಮಾಡಿದವರು. ಬದುಕಿನಲ್ಲಿ ಶ್ರಮಪಟ್ಟರೆ ಅಸಾಧ್ಯವಾದುದನ್ನು ಸಾಧಿಸಬಹುದು ಎಂಬುದಕ್ಕೆ ಕುಸುಮೋದರ ಶೆಟ್ಟಿ ಹಾಗೂ ಶಿವರಾಮ ಭಂಡಾರಿಯವರು ಸಾಕ್ಷಿ ಎಂದು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್. ಉಪಾಧ್ಯ ಮೆಚ್ಚುಗೆ ಸೂಚಿಸಿದರು.
ಇನ್ನೊಬ್ಬ ಮುಖ್ಯ ಅತಿಥಿ ಶಿವಾಸ್ ಹೇರ್ ಡಿಸೈನರ್ಸ್ ಪ್ರೈ. ಲಿ. ಮಾಲೀಕ ಶಿವರಾಮ ಭಂಡಾರಿ ಮಾತನಾಡಿ, ನನ್ನ ಸರ್ವಸ್ವವೇ ನನ್ನ ತಾಯಿ. ಕಷ್ಟದಲ್ಲಿ ಬಾಲ್ಯವನ್ನು ಕಳೆದ ನನ್ನನ್ನು ಅವಿರತ ಶ್ರಮ ಹಾಗೂ ಸೇವಾ ನಿಷ್ಠೆ ಈ ಮಟ್ಟಕ್ಕೆ ಬೆಳೆಸಿದೆ. ವಿಶ್ವವಿದ್ಯಾಲಯದ ಬಗ್ಗೆ ನನಗೆ ಅಪಾರ ಗೌರವವಿದೆ ಎಂದರು. ಮುಂಬೈಯಲ್ಲಿ ನಿರಂತರವಾಗಿ ಕನ್ನಡದ ಕಾರ್ಯ ಚಟುವಟಿಕೆಗಳು ನಡೆಯುತ್ತಲೇ ಇವೆ. ಇದಕ್ಕೆ ಇಲ್ಲಿನ ಕನ್ನಡಿಗರ ಭಾಷಾ ಬಾಂಧವ್ಯ ಹಾಗೂ ಸಾಮರಸ್ಯ ಕಾರಣ ಎಂದು ಮತ್ತೊಬ್ಬ ಮುಖ್ಯ ಅತಿಥಿ, ಮುಂಬೈ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಹೇಳಿದರು.
ಮಧುಸೂದನ ರಾವ್ ತಮ್ಮ ‘ಮುಂಬಯಿ ಯಕ್ಷಗಾನ ರಂಗಭೂಮಿ’ ಎಂಬ ಪಿಎಚ್.ಡಿ ಪ್ರಬಂಧವನ್ನು ಕನ್ನಡ ವಿಭಾಗಕ್ಕೆ ಸಲ್ಲಿಸಿದರು. ಮುಂಬೈ ವಿಶ್ವವಿದ್ಯಾಲಯ ನಡೆಸಿದ ಅಂತಿಮ ಎಂಎ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಕಲಾ ಭಾಗ್ವತ್ ಹಾಗೂ ಕನ್ನಡ ಡಿಪ್ಲೊಮಾ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸುಧಾ ಶೆಟ್ಟಿ ಅವರನ್ನು ವಿವಿ ಗೌರವ ಪುರಸ್ಕಾರ ಹಾಗೂ ಗ್ರಂಥ ಗೌರವ ನೀಡಿ ಅಭಿನಂದಿಸಲಾಯಿತು. ಶೇ. 80ಕ್ಕೂ ಅಧಿಕ ಅಂಕ ಪಡೆದ ಶಶಿಕಲಾ ಹೆಗ್ಡೆ, ಶಾಲಿನಿ ಡಿ.ಕೆ. ಹಾಗೂ ರುದ್ರಮೂರ್ತಿ ಪ್ರಭು ಅವರನ್ನು, ನ್ಯಾಕ್ ಮೌಲ್ಯಮಾಪನ ಸಮಯದಲ್ಲಿ ಶ್ರಮವಹಿಸಿ ಕಾರ್ಯನಿರ್ವಹಿಸಿದ ವಿಭಾಗದ ರೇಷ್ಮಾ ಮಾನೆಯವರನ್ನು ವಿಶೇಷವಾಗಿ ಗೌರವಿಸಲಾಯಿತು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಎಸ್. ಶೆಟ್ಟಿ, ಶಶಿಕಲಾ ಹೆಗ್ಡೆ ಮತ್ತಿತರರು ಇದ್ದರು.
ರಾಜಕಾರಣಕ್ಕೂ ಹೆಸರಾಗಿದ್ದ ಆ ರೆಸಾರ್ಟ್​ ಒತ್ತುವರಿ ಮಾಡಿಕೊಂಡಿದ್ದ ಜಾಗ ತೆರವು; ಅಲ್ಲೇ ಕ್ರೀಡಾಸಮುಚ್ಚಯ ನಿರ್ಮಾಣವಾಗಲಿ ಎಂದು ಸಿಎಂಗೆ ಪತ್ರ

ಈತ ಮಕ್ಕಳಿಗೆ ಪಾಠ ಮಾಡುವ ಟೀಚರ್; ಆದರೆ ತನ್ನ ಅಪ್ಪ-ಅಮ್ಮನಿಗೇ ಟಾರ್ಚರ್!; ಮಗನ ಮನೆ ಮುಂದೆಯೇ ತಂದೆ-ತಾಯಿಯ ಪ್ರತಿಭಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 12 =
Remember me
