ನವದೆಹಲಿ:ನನ್ನನ್ನು ಸಂಸತ್ತಿನಿಂದ ಶಾಶ್ವತವಾಗಿ ಅನರ್ಹಗೊಳಿಸಿದರೂ ಸುಮ್ಮನಿರುವುದಿಲ್ಲ. ಸಂಸತ್ ಸದಸ್ಯನಾಗಿ ಇರಲಿ, ಇರದಿರಲಿ. ನಾನು ಮಾಡುವ ಕೆಲಸ ಮಾಡಿಯೇ ತೀರುತ್ತೇನೆ. ಉದ್ಯಮಿ ಗೌತಮ್ ಅದಾನಿಯವರನ್ನು ರಕ್ಷಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುತ್ತಲೇ ಇರುತ್ತೇನೆ. ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ದೇಶಕ್ಕಾಗಿ ಹೋರಾಡುತ್ತಲೇ ಇರುತ್ತೇನೆ. ವಿದೇಶದಲ್ಲಿ ಮಾತನಾಡಿದ ವಿಚಾರಕ್ಕೆ ಸಂಬಂಧಿಸಿ ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ ಎಂದು ಕಾಂಗ್ರೆಸ್ ನಾಯಕ, ಅನರ್ಹ ಸಂಸದ ರಾಹುಲ್ ಗಾಂಧಿ ಗುಡುಗಿದ್ದಾರೆ.
ಲೋಕಸಭೆಯಿಂದ ಅನರ್ಹಗೊಂಡ ಬಳಿಕ ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಮೊದಲ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್, ಕೇಂದ್ರ ಸರ್ಕಾರ, ಉದ್ಯಮಿ ಗೌತಮ್ ಅದಾನಿ, ಪಿಎಂ ಮೋದಿ ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಅದಾನಿ ನೇತೃತ್ವದ ಕಂಪನಿಗಳಲ್ಲಿ ಹಲವು ಶೆಲ್ ಕಂಪನಿಗಳು 20 ಸಾವಿರ ಕೋಟಿ ರೂ. ಹೂಡಿಕೆ ಮಾಡಿವೆ. ಈ ಹಣ ಎಲ್ಲಿಂದ ಬಂದಿದೆ? ಈ ಬಗ್ಗೆ ಕೇಂದ್ರ ಸರ್ಕಾರ ತನಿಖೆ ಏಕೆ ಮಾಡುತ್ತಿಲ್ಲ? ಅಕ್ರಮ ಹೂಡಿಕೆಯಲ್ಲಿ ಕಾಂಗ್ರೆಸ್ ಆಡಳಿತದ ಸಿಎಂಗಳು ಭಾಗಿಯಾಗಿದ್ದರೂ ಜೈಲಿಗೆ ಹಾಕಲಿ. ಯಾರೇ ಅಕ್ರಮ ಮಾಡಿದ್ದರೂ ಶಿಕ್ಷೆ ನೀಡಲಿ ಎಂದ ರಾಹುಲ್, ಇದರಲ್ಲಿ ಕೆಲ ರಕ್ಷಣಾ ಕಂಪನಿಗಳು ಹೂಡಿಕೆ ಮಾಡಿರುವ ಅನುಮಾನವಿದೆ. ಈ ಬಗ್ಗೆ ರಕ್ಷಣಾ ಇಲಾಖೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಹೃದಯಾಘಾತಕ್ಕೀಡಾಗಿ ಮೃತಪಟ್ಟ ಕನ್ನಡ ಸಿನಿಮಾ ನಿರ್ದೇಶಕ
ರಕ್ಷಣಾ ಕೈಗಾರಿಕೆ, ವಿಮಾನ ನಿಲ್ದಾಣಗಳಿಗೆ ಸಂಬಂಧಿಸಿದ ನಿಯಮ ಬದಲಿಸಿ ಅದಾನಿ ಸಮೂಹಕ್ಕೆ ನೀಡಿರುವುದು, ಬಾಂಗ್ಲಾದೇಶ ಮತ್ತು ಶ್ರೀಲಂಕಾಕ್ಕೆ ಸಂಬಂಧಿಸಿ ನೀಡಿರುವ ಹೇಳಿಕೆಗಳ ಬಗ್ಗೆ ದಾಖಲೆಗಳನ್ನು ಸಂಸತ್ತಿಗೆ ನೀಡಿದೆ. ಲೋಕಸಭೆ ಸ್ಪೀಕರ್ ಅವರಿಗೂ ಪತ್ರ ಬರೆದೆ. ಸ್ಪೀಕರ್​ರನ್ನು ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಿ ಎಂದು ಭೇಟಿ ಮಾಡಿ ಕೇಳಿಕೊಂಡೆ. ಅವರು ನಕ್ಕರೇ ವಿನಃ ಅವಕಾಶ ನೀಡಲಿಲ್ಲ. ನಂತರ ನಾನು ಭಾರತದ ಸಮಸ್ಯೆ ಬಗ್ಗೆ ವಿದೇಶಗಳು ಹಸ್ತಕ್ಷೇಪ ಮಾಡಿ ಮಾತುಕತೆ ನಡೆಸಬೇಕು ಎಂದು ಹೇಳಿರುವುದಾಗಿ ಸುಳ್ಳು ಹಬ್ಬಿಸಲಾಯಿತು ಎಂದು ಆರೋಪಿಸಿದ್ದಾರೆ.
ಪ್ರಧಾನಿ ಮೋದಿಯವರಿಗೆ ನಾನು ಸಂಸತ್ತಿನಲ್ಲಿ ಮುಂದೆ ಮಾಡಬೇಕಿದ್ದ ಭಾಷಣದ ಬಗ್ಗೆ ಭಯವಿತ್ತು. ನಾನು ನೇರವಾಗಿ ಮೋದಿ-ಅದಾನಿ ಸಂಬಂಧವನ್ನೇ ಪ್ರಶ್ನಿಸುತ್ತಿದ್ದೇನೆ. ಇದನ್ನು ಮೋದಿಯವರಿಗೆ ಅರಗಿಸಿ ಕೊಳ್ಳಲಾಗುತ್ತಿಲ್ಲ. ಹೀಗಾಗಿಯೇ, ನನ್ನನ್ನು ಹಠಾತ್ ಅನರ್ಹಗೊಳಿಸಿದ್ದಾರೆ. ಇದಕ್ಕೆಲ್ಲಾ ಹೆದರುವ, ಜಗ್ಗುವ ವ್ಯಕ್ತಿ ನಾನಲ್ಲ ಎಂದು ಸವಾಲು ಹಾಕಿದ್ದಾರೆ. ಪ್ರಜಾ ಪ್ರತಿನಿಧಿ ಕಾಯ್ದೆಗಳ ನಿಬಂಧನೆಗಳ ಅನುಸಾರ ನಿಮ್ಮನ್ನು ಅನರ್ಹಗೊಳಿಸಲಾಗಿದೆಯಲ್ಲ ಎಂಬ ಪ್ರಶ್ನೆಗೆ ಹೆಚ್ಚು ವಿವರಣೆ ನೀಡದ ರಾಹುಲ್, ಈ ಬಗ್ಗೆ ನಮ್ಮ ಕಾನೂನು ತಂಡ ಕೆಲಸ ಮಾಡುತ್ತಿದೆ. ನೀವು ಅವರ ಬಳಿ ಪ್ರಶ್ನೆ ಕೇಳಬಹುದು. ಈ ಸರ್ಕಾರಕ್ಕೆ ಅದಾನಿ ಎಂದರೆ ದೇಶ, ದೇಶ ಎಂದರೆ ಎಂಬಂತಾಗಿದೆ. ಜನರ ಸಮಸ್ಯೆಗಳು ಬೇಕಿಲ್ಲ ಎಂದರು.
ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ವೈಯಕ್ತಿಕ ನಿಂದನೆ ಮಾಡಿ ಮಾತನಾಡಿದರೆ, ಅದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳಲಿದೆ. ರಾಹುಲ್ ಗಾಂಧಿ ಒಂದು ವರ್ಗದ ವಿರುದ್ಧ ಮಾತನಾಡಿ ದ್ದಾರೆ. ಬಹಳ ಜನರಿಗೆ ಇದರಿಂದ ನೋವಾಗಿದೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ರಾಹುಲ್ ಗಾಂಧಿ ಅವರನ್ನು ಕುತಂತ್ರ ನಡೆಸಿ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದು ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಬಗೆದ ಅಪಮಾನ. ದೇಶದಲ್ಲಿನ ಕಪ್ಪುಹಣ, ಅದಾನಿ, ಅಂಬಾನಿ ಬಗ್ಗೆ ಲೋಕಸಭೆಯಲ್ಲಿ ಪದೇ ಪದೆ ಮಾತನಾಡಿದ್ದನ್ನು ಸಹಿಸದೆ ಅನರ್ಹತೆ ತಂತ್ರ ಹೆಣೆಯಲಾಗಿದೆ.
|ಮಲ್ಲಿಕಾರ್ಜುನ ಖರ್ಗೆಎಐಸಿಸಿ ಅಧ್ಯಕ್ಷ

ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8(3)ರ ಪ್ರಕಾರ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಗಳು ತಕ್ಷಣವೇ ಅನರ್ಹಗೊಳ್ಳುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸ ಲಾಗಿದೆ. ಕೇರಳ ಮೂಲದ ಸಾಮಾಜಿಕ ಕಾರ್ಯಕರ್ತ ಆಭಾ ಮುರಳೀಧರನ್ ಅರ್ಜಿ ಸಲ್ಲಿಸಿದ್ದು, 1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8(3)ರ ಅಡಿಯಲ್ಲಿ ತಕ್ಷಣವೇ ಅನರ್ಹಗೊಳಿಸುವಿಕೆಯು ಕಾನೂನುಬಾಹಿರ ಎಂದು ಘೊಷಿಸಲು ಮನವಿ ಮಾಡಿದ್ದಾರೆ. ಚುನಾಯಿತ ಶಾಸಕಾಂಗ ಸಂಸ್ಥೆಗಳ ಜನಪ್ರತಿನಿಧಿಗಳನ್ನು ತಕ್ಷಣವೇ ಅನರ್ಹಗೊಳಿಸುವುದರಿಂದ ಅವರು ಪ್ರತಿನಿಧಿ ಸುವ ಕ್ಷೇತ್ರಗಳಲ್ಲಿ ತಮ್ಮ ಕರ್ತವ್ಯಗಳನ್ನು ಮುಕ್ತವಾಗಿ ನಿರ್ವಹಿಸುವುದರಿಂದ ನಿರ್ಬಂಧಿ ಸುತ್ತದೆ ಎಂದು ಅರ್ಜಿಯವಲ್ಲಿ ವಿವರಿಸಲಾಗಿದೆ.
2019ರ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾದ ನಂತರ ರಾಹುಲ್ ಗಾಂಧಿ ಲೋಕಸಭೆಯಿಂದ ಅನರ್ಹಗೊಂಡಿದ್ದಾರೆ. ಅದಕ್ಕೂ ಅದಾನಿ-ಹಿಂಡನ್​ಬರ್ಗ್ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟಪಡಿಸಿ ದ್ದಾರೆ. ಅದಾನಿ ಸಮೂಹದ ಭ್ರಷ್ಟಾಚಾರಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ಹೀಗೆ ಮಾಡಿದ್ದಾರೆ ಎಂಬ ರಾಹುಲ್ ಗಾಂಧಿ ಆರೋಪಗಳು ಸುಳ್ಳು ಮತ್ತು ಆಧಾರರಹಿತ. ರಾಹುಲ್ ಗಾಂಧಿ ಅಂಚಿನಲ್ಲಿರುವ ಸಮುದಾಯದ ಜನರನ್ನು ಅವಮಾನಿಸಿದ್ದಾರೆ. ನೊಂದವರಿಗೆ ನ್ಯಾಯಾಲಯದ ಮೊರೆ ಹೋಗುವ ಹಕ್ಕಿದೆ. ನೀವು ಕ್ಷಮೆಯಾಚಿಸುತ್ತೀರಾ ಎಂದು ನ್ಯಾಯಾಲಯ ಕೇಳಿದ್ದರೂ, ರಾಹುಲ್ ಕ್ಷಮೆ ಕೇಳಲಾರೆ ಎಂದಿದ್ದರು. ಇದಾದ ನಂತರ ತೀರ್ಪು ಬಂದಿದೆ ಎಂದು ಪ್ರಸಾದ್ ವಿವರಿಸಿದ್ದಾರೆ. ರಾಹುಲ್ ಇತರೆ ಹಿಂದುಳಿದ ವರ್ಗ ಗಳನ್ನು (ಒಬಿಸಿ) ಅವಮಾನಿಸಿದ್ದಾರೆ ಮತ್ತು ಬಿಜೆಪಿ ಇದನ್ನು ಖಂಡಿಸಿದೆ. ರಾಹುಲ್ ವಿರುದ್ಧ ಆಂದೋಲನ ಪ್ರಾರಂಭಿಸಲಿದ್ದೇವೆ. ಅಷ್ಟಕ್ಕೂ ಪ್ರತಿಭಾವಂತ ವಕೀಲರ ಸೈನ್ಯ ಹೊಂದಿರುವ ಕಾಂಗ್ರೆಸ್ ಸೂರತ್ ಸೆಷನ್ಸ್ ನ್ಯಾಯಾಲಯ ತೀರ್ಪನ್ನು ಪ್ರಶ್ನಿಸಲು ಇನ್ನೂ ಏಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − eight =
Remember me
