ನವದೆಹಲಿ:ಎರಡು ದಿನಗಳ ಹಿಂದೆ ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ಗಡ್ಚಿಂಚಾಲೆಯಲ್ಲಿ ಮಕ್ಕಳ ಕಳ್ಳರೆಂದು ಭಾವಿಸಿ ಇಬ್ಬರು ಸಾಧುಗಳು ಮತ್ತು ಓರ್ವ ಕಾರು ಚಾಲಕನನ್ನು ಹತ್ಯೆ ಮಾಡಿದ ಘಟನೆಯನ್ನು ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಖಂಡಿಸಿದ್ದಾರೆ.
ಹಿಂದು ಹತ್ಯಾಕಾಂಡವನ್ನು ನಿಲ್ಲಿಸಿ ಎಂಬ ಶೀರ್ಷಿಕೆಯಡಿ ಕೈಲಾಶ ನಿತ್ಯಾನಂದ ಯೂಟ್ಯೂಬ್​ ಚಾನಲ್​ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಭಾರತದಲ್ಲಿ ನಿರಂತರವಾಗಿ ಹಿಂದು ಹತ್ಯಾಕಾಂಡ ನಡೆಯುತ್ತಿರುವುದನ್ನು ನಿಮ್ಮೆಲ್ಲರ ಗಮನಕ್ಕೆ ತರುತ್ತಿದ್ದೇನೆ. ನನ್ನ ಇಬ್ಬರು ಸಂಪ್ರದಾಯ ಸಾಧುಗಳನ್ನು ಪಾಲ್ಗರ್‌ ಜಿಲ್ಲೆಯಲ್ಲಿ ಗುಂಪು ಹತ್ಯೆ ಮಾಡಲಾಗಿದೆ. ಭಾರತ ಸ್ವಾತಂತ್ರ್ಯವು ಸಾಧುಗಳಿಗೆ ಸುರಕ್ಷತೆಯನ್ನು ತಂದುಕೊಟ್ಟಿಲ್ಲ ಮತ್ತು ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ. ಮೊದಲು ಇಂಥದ್ದನ್ನು ನಿಲ್ಲಿಸಿ ಎಂದು ವಿಶ್ವದ ಹಿಂದುಗಳು ನಮ್ರತೆಯಿಂದ ಬೇಡಿಕೊಳ್ಳುತ್ತೇವೆ. ನೀವೆಲ್ಲರೂ ಈ ಸತ್ಯಕ್ಕೆ ಎಚ್ಚರಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ ಹತ್ಯೆ ಮಾಡಿದವರ ವಿರುದ್ಧ ಕಿಡಿಕಾರಿದ ನಿತ್ಯಾನಂದ, ಹಿಂದುಗಳಾದ ನಾವು ಸ್ಪೂರ್ತಿಗೊಂಡಾಗ ಸಾಧುಗಳಾಗುತ್ತೇವೆ. ಆದರೆ, ಉಗ್ರರಾಗುವುದಿಲ್ಲ. ಕೆಲವೊಂದು ಧರ್ಮದಲ್ಲಿ ಜನರು ಅತಿಯಾಗಿ ಸ್ಪೂರ್ತಿಗೊಂಡು ಮಿಷನರಿಗಳಾಗಿ ಇತರರನ್ನು ತಮ್ಮ ಧರ್ಮಕ್ಕೆ ಮತಾಂತರ ಮಾಡುತ್ತಾರೆ. ಕೆಲವರು ಉಗ್ರರಾಗಿ ಇತರನ್ನು ಹತ್ಯೆ ಮಾಡುತ್ತಾರೆ. ಆದರೆ, ಹಿಂದು ಧರ್ಮದಲ್ಲಿ ಸ್ಪೂರ್ತಿಗೊಂಡು ಸಾಧುಗಳಾಗಿ, ಧ್ಯಾನ ಮಾಡಿ ಒಳಿತನ್ನು ಬಯಸುತ್ತಾರೆ ಎಂದರು.
ಘಟನೆ ಹಿನ್ನೆಲೆ ಏನು?ಮಕ್ಕಳ ಕಳ್ಳರೆಂದು ಭಾವಿಸಿ ಮೂವರು ವ್ಯಕ್ತಿಗಳನ್ನು ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ಗಡ್ಚಿಂಚಾಲೆ ಎಂಬ ಗ್ರಾಮದಲ್ಲಿ ಜನರು ಪೊಲೀಸರ ಎದುರೇ ದೊಣ್ಣೆಗಳಿಂದ ಹೊಡೆದು ಸಾಯಿಸಿದರು. ಇವರಲ್ಲಿ ಇಬ್ಬರು ಸಾಧುಗಳು ಹಾಗೂ ಒಬ್ಬ ಕಾರು ಚಾಲಕ. ಈ ಮೂವರೂ ಖಂಡಿವಾಲಿಯಿಂದ ಪಾಲ್ಗರ್‌ ಮಾರ್ಗವಾಗಿ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಉದ್ರಿಕ್ತರಾಗಿದ್ದ ಗ್ರಾಮಸ್ಥರು ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಸಾಧುಗಳನ್ನು ಗ್ರಾಮಸ್ಥರು ಹಿಗ್ಗಾಮುಗ್ಗ ಎಳೆದಾಡಿ ದೊಣ್ಣೆ, ಕಲ್ಲುಗಳಿಂದ ಹೊಡೆಯುವ ದೃಶ್ಯಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. ಅಲ್ಲಿಗೆ ಬಂದಿರುವ ಜನರು ತಮ್ಮನ್ನು ರಕ್ಷಿಸುವಂತೆ ಪೊಲೀಸರಲ್ಲಿ ಬೇಡುತ್ತಿರುವ ಸನ್ನಿವೇಶಗಳು ಈ ವೀಡಿಯೋದಲ್ಲಿವೆ. ಇನ್ನೊಂದು ವೀಡಿಯೋದಲ್ಲಿ ಉದ್ರಿಕ್ತರು ಜನರು ಪ್ರಯಾಣಿಸುತ್ತಿದ್ದ ಕಾರು ಮತ್ತು ಪೊಲೀಸರ ಗಸ್ತು ವಾಹನವನ್ನು ಧ್ವಂಸಗೊಳಿಸುವ ದೃಶ್ಯಗಳು ಇವೆ.
ಘಟನೆಗೆ ಸಂಬಂಧಿಸಿದಂತೆ 9 ಮಕ್ಕಳು ಸೇರಿದಂತೆ 101 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಏಪ್ರಿಲ್‌ 30ರವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದ್ದು, ಮಕ್ಕಳನ್ನು ಬಾಲಮಂದಿರದ ವಶಕ್ಕೆ ಒಪ್ಪಿಸಲಾಗಿದೆ.(ಏಜೆನ್ಸೀಸ್​)

ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳು ಸೇರಿದಂತೆ ಮೂವರ ಬರ್ಬರ ಹತ್ಯೆ! ಪೊಲೀಸರ ಎದುರೇ ನಡೆಯಿತು ಘನಘೋರ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 11 =
Remember me
