ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮಾರು ಹೋಗಿ, ರಮಣೀಯ ತಾಣಗಳ ಫೋಟೋ ಹಂಚಿಕೊಂಡಿದ್ದೇ ತಡ, ಪ್ರವಾಸೋದ್ಯಮವನ್ನೇ ತಮ್ಮ ಹೊಟ್ಟೆಪಾಡು ಮಾಡಿಕೊಂಡಿರುವ ಪಕ್ಕದ ದ್ವೀಪ ರಾಷ್ಟ್ರ ಮಾಲ್ಡೀವ್ಸ್​ ಹೊಟ್ಟೆಗೆ ಬೆಂಕಿ ಇಟ್ಟಂತಾಗಿದೆ. ಈ ಕಾರಣಕ್ಕೆ ಭಾರತ ಮತ್ತು ಪ್ರಧಾನಿ ಮೋದಿ ವಿರುದ್ಧ ನಾಲಿಗೆ ಹರಿಬಿಡುವ ಮೂಲಕ ಮಾಲ್ಡೀವ್ಸ್​ ವಿವಾದ ಸೃಷ್ಟಿಸಿದ್ದಲ್ಲದೆ, ಭಾರತೀಯರ ಕೆಂಗಣ್ಣಿಗೂ ಗುರಿಯಾಗಿದೆ. ಇದೆಲ್ಲರ ನಡುವೆ ನಮ್ಮ ಲಕ್ಷದ್ವೀಪ ಕೆಲವು ದಿನಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ. ನಮಗೆ ಮಾಲ್ಡೀವ್ಸ್​ ಬೇಡ ಲಕ್ಷದ್ವೀಪವೇ ಇರಲಿ ಎನ್ನುತ್ತಿದ್ದಾರೆ. ಹೀಗಾಗಿ ಲಕ್ಷದ್ವೀಪ ಪ್ರವಾಸೋದ್ಯಮ ಅಭಿವೃದ್ಧಿಗೆ ಒಂದು ಹೊಸ ತಿರುವು ಸಿಕ್ಕಿದೆ.
ಇದೆಲ್ಲ ಪ್ರಸ್ತುತ ನಡೆಯುತ್ತಿರುವ ಚರ್ಚೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಸಮದ್ರಗಳ ನಡುವೆ ನಡುವೆ ಇರುವ ಲಕ್ಷದ್ವೀಪ ನಮ್ಮ ಭಾರತಕ್ಕೆ ದಕ್ಕಿದ್ದು ಹೇಗೆ ಎಂಬುದು ಗೊತ್ತಾ? ಈ ಇತಿಹಾಸ ಬಹುತೇಕರಿಗೆ ತಿಳಿದಿಲ್ಲ. ಪಾಕಿಸ್ತಾನ ಪಾಲಾಗಬೇಕಿದ್ದ ಲಕ್ಷದ್ವೀಪ ಭಾರತಕ್ಕೆ ದಕ್ಕಿದ್ದರ ಹಿಂದಿನ ರೋಚಕ ಕಹಾನಿಯನ್ನು ನಾವು ನಿಮಗೆ ತಿಳಿಸುತ್ತೇವೆ ಮುಂದೆ ಓದಿ.
ಲಕ್ಷದ್ವೀಪದ ಇತಿಹಾಸದ ಬಗ್ಗೆ ತಿಳಿಯುವಾಗ ಇಬ್ಬರು ತಮಿಳು ವ್ಯಕ್ತಿಗಳನ್ನು ಸ್ಮರಿಸಲೇಬೇಕಿದೆ. ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ಸಮಯದಲ್ಲಿ ಬಹುತೇಕ ಮುಸ್ಲಿಮರು ಲಕ್ಷದ್ವೀಪದಲ್ಲಿ ವಾಸ ಮಾಡುತ್ತಿದ್ದರು. ಆಗ ಪಾಕಿಸ್ತಾನ ಸ್ವರ್ಗದಂತಿರುವ ದ್ವೀಪವನ್ನು ವಶಪಡಿಸಿಕೊಳ್ಳಲು ಯತ್ನಿಸಿದ್ದರು ಮತ್ತು ಪಾಕಿಸ್ತಾನ ಧ್ವಜ ಇರುವ ಒಂದು ಹಡಗು ಲಕ್ಷದ್ವೀಪದ ಕಡೆ ಹೊರಟಿತ್ತು. ಈ ವೇಳೆ ಹೀರೋ ರೀತಿ ಎಂಟ್ರಿ ಕೊಟ್ಟ ಅಂದಿನ ಉಪಪ್ರಧಾನಿ ಹಾಗೂ ಗೃಹಸಚಿವರಾಗಿದ್ದ ಉಕ್ಕಿನ ಮನುಷ್ಯ ಸರ್ದಾರ್​ ವಲ್ಲಭಬಾಯ್​ ಪಟೇಲ್​, ತಕ್ಷಣ ಈ ವಿಚಾರವನ್ನು ಮೈಸೂರು ಸಂಸ್ಥಾನದ ಕೊನೆಯ ದಿವಾನ ಮತ್ತು ತಮಿಳಿಗ ರಾಮಸ್ವಾಮಿ ಮುದಲಿಯಾರ್​ ಮತ್ತು ಅವರ ಸಹೋದರ ಲಕ್ಷ್ಮಣ ಸ್ವಾಮಿ ಮುದಲಿಯಾರ್​ಗೆ ಟೆಲಿಫೋನ್​ ಮೂಲಕ ಮಾಹಿತಿ ನೀಡಿದರು.
ಸರ್ದಾರ್​ ವಲ್ಲಭಬಾಯ್ ಅವರ ಸಲಹೆ ಮೇರೆ ಮೂದಲಿಯಾರ್​ ಸಹೋದರರು ತಿರುವಂಕೂರು (ಇಂದು ತಿರುವನಂತಪುರಂ) ಪೊಲೀಸರು ಮತ್ತು ಜನರನ್ನು ಲಕ್ಷದ್ವೀಪಕ್ಕೆ ಕರೆದೊಯ್ದು, ಪಾಕಿಸ್ತಾನದವರು ಬರುವುದಕ್ಕೂ ಮೊದಲೇ ಭಾರತೀಯ ಧ್ವಜವನ್ನು ಅಲ್ಲಿ ಹಾರಿಸಿದರು. ಇದೇ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ಹಡಗು ಸಹ ಲಕ್ಷದ್ವೀಪದ ಕಡೆಗೆ ಬಂದಿತು. ಈ ಎಲ್ಲ ಪ್ರಯತ್ನಗಳಿಂದ ಪಾಕಿಸ್ತಾನದ ವಶವಾಗಬೇಕಿದ್ದ ಲಕ್ಷದ್ವೀಪ ನಮ್ಮ ಪಾಲಾಯಿತು.
ಈ ವಿಚಾರವನ್ನು ಸ್ವತಃ ಪ್ರಧಾನಿ ಮೋದಿ ಅವರು ಕೂಡ ಮನ್​ ಕಿ ಬಾತ್​ನಲ್ಲಿ ಹಿಂದೊಮ್ಮೆ ಹಂಚಿಕೊಂಡಿದ್ದಾರೆ.
ಏನಿದು ವಿವಾದ?ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಸೌಂದರ್ಯಕ್ಕೆ ಮಾರುಹೋಗಿ ಕೊಂಡಾಡಿದರು. ಅಲ್ಲದೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತಹ ಮಾತುಗಳನ್ನಾಡಿದರು. ಆದರೆ, ಇದು ಪಕ್ಕದ ಮಾಲ್ಡೀವ್ಸ್​ ಸಹಿಸಿಕೊಳ್ಳಲು ಆಗುತ್ತಿಲ್ಲ. ಏಕೆಂದರೆ, ಕಡಲತಡಿಯ ಪ್ರವಾಸೋದ್ಯಮವನ್ನೇ ಮಾಲ್ಡೀವ್ಸ್​ ದೊಡ್ಡ ಆದಾಯವಾಗಿ ಹೊಂದಿದೆ. ಇತ್ತೀಚೆಗೆ ಲಕ್ಷದ್ವೀಪಕ್ಕೆ ಸಿಗುತ್ತಿರುವ ಪ್ರಚಾರ-ಮನ್ನಣೆ ಸಹಿಸಿಕೊಳ್ಳಲಾಗದೆ ಅಲ್ಲಿನ ಜನಪ್ರತಿನಿಧಿಗಳು ಭಾರತವನ್ನು ಅವಹೇಳನ ಮಾಡುವಂತೆ ಅಭಿಪ್ರಾಯ ವ್ಯಕ್ತಪಡಿಸಿರುವುದು ಕೋಲು ಕೊಟ್ಟು ಪೆಟ್ಟು ತಿಂದಂಥ ಪರಿಸ್ಥಿತಿ ಸೃಷ್ಟಿಯಾಗಿಸಿದೆ. ಮಾಲ್ದೀವ್ಸ್ ಉಪ ಸಚಿವೆ ಮರಿಯಂ ಶಿಯುನಾ ಮುಂತಾದವರು ಪ್ರವಾಸೋದ್ಯಮದ ವಿಚಾರದಲ್ಲಿ ಭಾರತವನ್ನು ಅವಮಾನಿಸಿ ಸೋಷಿಯಲ್ ಮೀಡಿಯಾ ತಾಣವಾದ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ ಭಾರತ ಮಾಲ್ದೀವ್ಸ್​ನ ಗುರಿಯಾಗಿಸುತ್ತಿದೆ, ಕಡಲತಡಿಯ ಪ್ರವಾಸೋದ್ಯಮದಲ್ಲಿ ಮಾಲ್ದೀವ್ಸ್ ಜತೆ ಸ್ಪರ್ಧೆಗಿಳಿದರೆ ಭಾರತ ಸವಾಲೆದುರಿಸಬೇಕಾಗುತ್ತದೆ ಎಂದಿರುವ ಅವರು ಮೋದಿಯನ್ನೂ ನಿಂದಿಸಿ ಪೋಸ್ಟ್ ಮಾಡಿದ್ದರು. ಮಾಲ್ದೀವ್ಸ್ ಎಂಪಿ ಜಹಿದ್ ರಮೀಜ್ ಎಂಬಾತ, ಶ್ರೀಲಂಕಾದಂಥ ರಾಷ್ಟ್ರದ ಸಣ್ಣ ಆರ್ಥಿಕತೆಯನ್ನು ಭಾರತ ನಕಲು ಮಾಡಿ ಹಣ ಮಾಡುತ್ತಿದೆ ಎಂದು ಟೀಕಿಸಿದ್ದು ಕೂಡ ತೀವ್ರ ಆಕ್ರೋಶಕ್ಕೆ ಒಳಗಾಯಿತು.
ಭಾರತೀಯರ ಆಕ್ರೋಶದೇಶದ ಪ್ರಧಾನಿ ಮತ್ತು ಭಾರತದ ಬಗ್ಗೆ ಮಾಲ್ಡೀವ್ಸ್​ ರಾಜಕಾರಣಿಗಳು ಲಘುವಾಗಿ ಮಾತನಾಡಿದ್ದು, ಭಾರತೀಯರ ಆಕ್ರೋಶಕ್ಕೆ ಕಾರಣವಾಯಿತು. ಅನೇಕ ಸೆಲೆಬ್ರಿಟಿಗಳು ಮಾಲ್ಡೀವ್ಸ್​ ವಿರುದ್ಧ ಕಿಡಿಕಾರಿದರು ಮತ್ತು ಮತ್ತೆ ಮಾಲ್ಡೀವ್ಸ್​ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಶಪಥ ಸಹ ಮಾಡಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಮಾಲ್ಡೀವ್ಸ್​ ಬಹಿಷ್ಕರಿಸಿ ಎಂಬ ಅಭಿಯಾನವೂ ಕೂಡ ಟ್ರೆಂಡ್​ ಆಯಿತು. ಮುಂಗಡವಾಗಿ ಬುಕ್ಕಿಂಗ್​ ಆಗಿದ್ದ ಅನೇಕ ಬುಕ್ಕಿಂಗ್​ಗಳು ಸಹ ರದ್ದಾದವು. ಇದರಿಂದ ಮಾಲ್ಡೀವ್ಸ್​ ಜನಪ್ರತಿನಿಧಿಗಳು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ, ಮುಂದೇನು ಮಾಡುವುದು ಎಂಬ ಯೋಚನೆಯಲ್ಲಿ ಮುಳುಗಿದ್ದಾರೆ.
ಮೂವರು ಸಚಿವರ ಅಮಾನತುವಿದೇಶಿ ನಾಯಕರು ಮತ್ತು ಉನ್ನತ ಶ್ರೇಣಿಯ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವುದು ಮಾಲ್ದೀವ್ಸ್ ಸರ್ಕಾರದ ಗಮನಕ್ಕೆ ಬಂದಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು, ಸರ್ಕಾರದ ದೃಷ್ಟಿಕೋನವಲ್ಲ ಎಂದು ಮಾಲ್ದೀವ್ಸ್ ಸರ್ಕಾರ ಬಳಿಕ ಸ್ಪಷ್ಟೀಕರಣ ನೀಡಿದೆ. ಮಾತ್ರವಲ್ಲ, ಇದಾದ ಕೆಲವೇ ಹೊತ್ತಲ್ಲಿ ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಲ್ದೀವ್ಸ್ ಯುವ ಸಬಲೀಕರಣ ಸಚಿವಾಲಯದ ಉಪ ಸಚಿವೆಯರಾದ ಮರಿಯಂ ಶಿಯುನಾ, ಮಾಲ್​ಷಾ, ಸಾರಿಗೆ ಸಚಿವಾಲಯ ಉಪ ಸಚಿವ ಹಸನ್ ಜಿಹಾನ್ ಅವರನ್ನು ಮಾಲ್ದೀವ್ಸ್ ಸರ್ಕಾರ ಅಮಾನತುಗೊಳಿಸಿದೆ.(ಏಜೆನ್ಸೀಸ್​)
ಭಾರತದ ಸಹೋದರ-ಸಹೋದರಿಯರೇ… ಕೊನೆಗೂ ಅಂಗಲಾಚಿ ಬೇಡಿಕೊಂಡ ಮಾಲ್ಡೀವ್ಸ್​!

ದ್ವೀಪರಾಷ್ಟ್ರಕ್ಕೆ ಇದೆಂಥಾ ದುರ್ಗತಿ! ಕಾಪಾಡಿ ಎಂದು ಚೀನಾ ಮುಂದೆ ಮಂಡಿಯೂರಿದ ಮಾಲ್ಡೀವ್ಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + six =
Remember me
