ಕಟಕ್:ಒಡಿಶಾದ ಪರಲಖೆಮುಂಡಿಯ ಅರಣ್ಯ ಸಹಾಯಕ ಸಂರಕ್ಷಕ (ಎಸಿಎಫ್​) ಅಧಿಕಾರಿ ಸೌಮ್ಯ ರಂಜನ್​ ಮೊಹಪಾತ್ರ ನಿಗೂಢ ಸಾವು ಪ್ರಕರಣದಲ್ಲಿ ತಾಜಾ ಬೆಳವಣಿಗೆಯೊಂದು ನಡೆದಿದೆ. ಸೌಮ್ಯ ರಂಜನ್​ ಪತ್ನಿ ಬಿದ್ಯಾಭಾರತಿ ಪಾಂಡಾ ಹಾಗೂ ಮಾಜಿ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್​ಒ) ಸಂಗ್ರಾಮ್​ ಬೆಹೆರಾ ಅಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಒಡಿಶಾ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.
ಹೈಕೋರ್ಟ್​ನಲ್ಲಿ ಇಬ್ಬರು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದ್ದು, ಪರಲಖೆಮುಂಡಿಯ ಎಸ್​ಡಿಜೆಎಂ ನ್ಯಾಯಾಲಯ ಕಳೆದ ಏಪ್ರಿಲ್​ನಲ್ಲಿ ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದಾರೆ. ಅಡುಗೆ ಭಟ್ಟ ಮನ್ಮಥ್​ ಕುಂಭಾ ಜೊತೆ ಇಬ್ಬರು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಪರಲಖೆಮುಂಡಿಯ ಎಸ್​ಡಿಜೆಎಂ ಕೋರ್ಟ್​ ಆದೇಶ ಹೊರಡಿಸಿತ್ತು. ಎಲ್ಲ ಮುಗಿಯಿತು. ಪ್ರಕರಣದಿಂದ ಬಚಾವ್​ ಆದೆ ಎಂದು ನಿಟ್ಟಿಸಿರು ಬಿಟ್ಟಿದ್ದ ಬಿದ್ಯಾಭಾರತಿ ಪಾಂಡಾಗೆ ಇದೀಗ ಮತ್ತೆ ಬಿಗ್​ ಶಾಕ್​ ಎದುರಾಗಿದ್ದು, ಈ ಕಂಟಕದಿಂದ ಪಾರಾಗಲು ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ:ಕೆ.ಆರ್​. ಸರ್ಕಲ್​ ಅಂಡರ್‌ಪಾಸ್‌ ದುರಂತ: ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ ಲೋಕಾಯುಕ್ತ ಐಜಿಪಿ
ಇಬ್ಬರು ತಮ್ಮ ಅರ್ಜಿಯಲ್ಲಿ ಒಡಿಶಾ ಸರ್ಕಾರ ಮತ್ತು ಸೌಮ್ಯ ರಂಜನ್ ಮೊಹಪಾತ್ರ ಅವರ ತಂದೆ ಅಭಿರಾಮ್ ಅವರನ್ನು ಪ್ರತಿವಾದಿಗಳಾಗಿ ಹೆಸರಿಸಿದ್ದಾರೆ. ಅಭಿರಾಮ್​ ಸಲ್ಲಿಸಿದ್ದ ಅರ್ಜಿ ಆಧಾರದ ಮೇಲೆ ಇಬ್ಬರಿಗೂ ನ್ಯಾಯಾಲಯ ಸಮನ್ಸ್​ ನೀಡಿತ್ತು. ಇಬ್ಬರ ವಿರುದ್ಧ ಇರುವ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳಿಗೆ ಸಂಬಂಧಿಸಿದಂತೆ ಅವರ ವಿಚಾರಣೆ ನಡೆಯಲಿದೆ.
ಅಭಿರಾಮ್​ ಸಲ್ಲಿಸಿದ್ದ ಅರ್ಜಿಯನ್ನು ವಿಶ್ಲೇಷಿಸಿದ ಬಳಿಕ ಇತರೆ ದಾಖಲೆಗಳು ಮತ್ತು ಹೇಳಿಕೆಗಳನ್ನು ನ್ಯಾಯಾಲಯ ದಾಖಲಿಸಿದ್ದು, ಸೌಮ್ಯ ರಂಜನ್​ ಕೊಲೆ ಮತ್ತು ಕೊಲೆಯ ಸಂಚಿನ ಆರೋಪಗಳು ವಿಚಾರಣೆಗೆ ಅರ್ಹ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಮೂವರು ವಿಚಾರಣೆಗೆ ಹಾಜರಾಗಬೇಕೆಂದು ಕೋರ್ಟ್​ ಸಮನ್ಸ್​ ನೀಡಿದೆ. ಇದೀಗ ಈ ಆದೇಶವನ್ನು ಪ್ರಶ್ನೆ ಮಾಡಿ ಬಿದ್ಯಾಭಾರತಿ ಪಾಂಡಾ ಹಾಗೂ ಸಂಗ್ರಾಮ್​ ಬೆಹೆರಾ ಒಡಿಶಾ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.
ಈ ಘಟನೆ ಸೌಮ್ಯ ರಂಜನ್​ ಅವರ ಸರ್ಕಾರಿ ನಿವಾಸದಲ್ಲಿ 2021ರ ಜುಲೈ 11ರಂದು ನಡೆಯಿತು. ಇದೊಂದು ಹತ್ಯೆ ಅಥವಾ ಆತ್ಮಹತ್ಯೆ ಸಾವು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಇದೊಂದು ಆಕಸ್ಮಿಕ ಸಾವು. ಸೀಮೆಎಣ್ಣೆಯನ್ನು ಸುರಿದು ಪೇಪರ್​ ಸುಡುವಾಗ ಕಾಲು ಜಾರಿ ಸೀಮೆಎಣ್ಣೆ ಮೇಲೆ ಬಿದ್ದಿದ್ದರಿಂದ ಸೀಮೆಎಣ್ಣೆ ಆತನ ಮೇಲೆ ಸುರಿದು ಬೆಂಕಿ ತಗುಲಿ ಮೃತಪಟ್ಟಿದ್ದಾನೆಂದು ಚಾರ್ಜ್​ಶೀಟ್​ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಬಿದ್ಯಾ ಭಾರತಿ ಪಾಂಡಾ ಮತ್ತು ಪತಿ ಸೌಮ್ಯ ರಂಜನ್​ ನಡುವೆ ವೈವಾಹಿಕ ಸಂಬಂಧ ಉತ್ತಮವಾಗಿರಲಿಲ್ಲ ಎಂದೆನಿಸುತ್ತದೆ. ಗಂಡನ ಮೇಲೆ ಸೀಮೆಎಣ್ಣೆ ಬಿದ್ದು ಬೆಂಕಿಯಲ್ಲಿ ಸುಡುತ್ತಿರುವಾಗ, ನೀರು ಚೆಲ್ಲುವುದಾಗಲಿ ಅಥವಾ ಆತನನ್ನು ಕಾಪಾಡುವ ಯಾವುದೇ ಪ್ರಯತ್ನವನ್ನು ಬಿದ್ಯಾ ಭಾರತಿ ಮಾಡಿಲ್ಲ ಎಂಬುದು ಚಾರ್ಜ್​ಶೀಟ್​ನಲ್ಲಿದೆ.
ಇದನ್ನೂ ಓದಿ:ಕಣ್ಸನ್ನೆ ಐಡಿಯಾ ನನ್ನದು ಎಂದ ಪ್ರಿಯಾ ವಾರಿಯರ್​! ನಿರ್ದೇಶಕ ಕೊಟ್ಟ ಉತ್ತರಕ್ಕೆ ನೆಟ್ಟಿಗರಿಂದ ಮೆಚ್ಚುಗೆ
ಬಿದ್ಯಾ ಭಾರತಿ ವಿರುದ್ಧ 304 -ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಮತ್ತು 285 (ಬೆಂಕಿ ಅಥವಾ ದಹಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಲಕ್ಷಿಸಿದ್ದು) ಐಪಿಸಿ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಒಡಿಶಾದ ಅಪರಾಧ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ. ಬಿದ್ಯಾ ಭಾರತಿ ಎಸಗಿರುವುದು ಜಾಮೀನು ನೀಡಬಹುದಾದ ಅಪರಾಧವಾಗಿದ್ದು, ಅಪರಾಧ ಸಾಬೀತಾದಲ್ಲಿ ಗರಿಷ್ಠ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ.
ಇನ್ನು ಒಡಿಶಾ ಅಪರಾಧ ವಿಭಾಗದ ಪೊಲೀಸರು ಸಲ್ಲಿಸಿರುವ ಚಾರ್ಜ್​ಶೀಟ್​ಗೆ ಮೃತ ಸೌಮ್ಯ ರಂಜನ್​ ಕುಟುಂಬದ ಪರ ವಕೀಲ ಪಾರ್ಥಸಾರಥಿ ನಾಯಕ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಇದು ಆಕಸ್ಮಿಕವೇ ಆಗಿದ್ದರೆ, ಅದು ಯಾವ ಪರಿಸ್ಥಿತಿಯಲ್ಲಿ ನಡೆಯಿತು? ಆಕಸ್ಮಿಕವೇ ಆಗಿದ್ದರೆ, ಬೆಂಕಿ ಉರಿಯುತ್ತಿದ್ದರೂ ಬಿದ್ಯಾ ಭಾರತಿ ಸುಮ್ಮನೇ ನಿಂತಿದ್ಯಾಕೆ? ಇದೆಲ್ಲ ಕಣ್ಣೊರೆಸುವ ತಂತ್ರ. ಅಪರಾಧ ವಿಭಾಗದ ಪೊಲೀಸರು ಜನರನ್ನು ಭ್ರಮೆಗೆ ನೂಕುವ ಕೆಲಸ ಮಾಡುತ್ತಿದ್ದಾರೆಂದು ಪಾರ್ಥಸಾರಥಿ ಪೊಲೀಸರ ನಡೆಯನ್ನೇ ಅನುಮಾನಿಸಿದ್ದಾರೆ.
ಇನ್ನು ಸೌಮ್ಯ ರಂಜನ್​ ಕುಟುಂಬ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಇತ್ತಿಚೆಗಷ್ಟೇ ಒಡಿಶಾ ಹೈಕೋರ್ಟ್​ ಮೆಟ್ಟಿಲೇರಿತ್ತು. ಸೌಮ್ಯ ರಂಜನ್​ ಕುಟುಂಬ ಬಿದ್ಯಾಭಾರತಿಯ ಹೆಸರನ್ನು ಉಲ್ಲೇಖಿಸಿದ್ದು, ಮಗನ ಸಾವಿನ ಹಿಂದೆ ಪತ್ನಿ ಬಿದ್ಯಾಭಾರತಿ ಕೈವಾಡ ಇದೆ. ಮಗನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಬಿದ್ಯಾಭಾರತಿಗು ಮತ್ತು ಡಿಎಫ್​ಒ ಸಂಗ್ರಾಮ್ ಬೆಹೆರಾಗೂ ಅನೈತಿಕ ಸಂಬಂಧ ಇತ್ತೆಂದು ಸೌಮ್ಯ ರಂಜನ್​ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹೀಗಾಗಿ ಪೊಲೀಸ್​ ಎಫ್​ಐಆರ್​ನಲ್ಲಿ ಬಿದ್ಯಾಭಾರತಿ ಹೆಸರನ್ನು ಸಹ ಸೇರಿಸಲಾಗಿದೆ.
ಈ ಪ್ರಕರಣದಲ್ಲಿ ಸೌಮ್ಯ ರಂಜನ್​ ಪತ್ನಿ ಬಿದ್ಯಾಭಾರತಿ, ಗಜಪತಿ ಡಿಎಫ್​ಒ ಸಂಗ್ರಾಮ್ ಬೆಹೆರಾ ಮತ್ತು ಅಡುಗೆಭಟ್ಟ ಸೇರಿದಂತೆ ಒಟ್ಟು 6 ಮಂದಿಯನ್ನು ಎಫ್​ಐಆರ್​ನಲ್ಲಿ ಸೇರಿಸಿದ್ದಾರೆ. ವಿಚಾರಣೆಯು ನಡೆಯುತ್ತಿದೆ. ಆದರೆ, ಇದುವರೆಗೂ ಸೌಮ್ಯ ರಂಜನ್​ ಸಾವಿಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಇನ್ನು ವಿಚಾರಣೆ ನಡುವೆಯೇ ಪರಲಖೆಮುಂಡಿಯ ಪೊಲೀಸ್​ ಗಜಪತಿ ಡಿಎಫ್​ಒ ಸಂಗ್ರಾಮ್​ ಬೆಹೆರಾಗೆ ಕ್ಲೀನ್​ಚಿಟ್​ ನೀಡಿದ್ದಾರೆ. ಕರೆ ವಿವರಣೆಯನ್ನು ವಿಶ್ಲೇಷಿಸಿದರೆ ಈ ಪ್ರಕರಣಕ್ಕೂ ಡಿಎಫ್​ಒಗೂ ಸಂಬಂಧ ಇಲ್ಲ ಎಂಬುದು ತಿಳಿದುಬರುತ್ತದೆ ಎಂದು ಗಜಪತಿ ಎಸ್​ಪಿ ತಪಾನ್​ ಕುಮಾರ್​ ಪಾಟ್ನಾಯಕ್​ ಮಾಧ್ಯಮಗಳಿಗೆ ತಿಳಿಸಿದ್ದರು. ಆದರೂ, ಪೊಲೀಸರು ಕ್ಲೀನ್​ ಚಿಟ್​ ನೀಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಇದನ್ನೂ ಓದಿ:ಟಾಯ್ಲೆಟ್‌ನಲ್ಲಿ ಕುಳಿತಿದ್ದಷ್ಟೇ.. ಕಾಲಿನ ಮೂಳೆನೇ ಮುರಿದೋಯ್ತು!; ಕಣ್ಣೀರಿನ ಕಥೆ ಕೇಳಿ….
ಸೌಮ್ಯ ರಂಜನ್​ ಕುಟುಂಬ ಬಲವಾದ ಆರೋಪ ಮಾಡಿದ್ದು, ಡಿಎಫ್​ಒ ಮತ್ತು ಬಿದ್ಯಾಭಾರತಿ ನಡುವೆ ಅನೈತಿಕ ಸಂಬಂಧ ಇತ್ತು. ಇದರಿಂದಲೇ ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿತ್ತು. ಮಗನನ್ನು ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದು, ಎಫ್​ಐಆರ್​ನಲ್ಲಿ ಡಿಎಫ್​ಒ ಮತ್ತು ಬಿದ್ಯಾಭಾರತಿಯನ್ನು ಪ್ರಮುಖ ಆರೋಪಿಗಳನ್ನಾಗಿ ಪರಿಗಣಿಸಲಾಗಿದೆ. ಆದರೆ, ಈವರೆಗೂ ಪ್ರಕರಣ ತಾರ್ಕಿಕ ಅಂತ್ಯ ಕಂಡಿಲ್ಲ. ಪ್ರಕರಣದ ನಿಗೂಢತೆ ಹಾಗೇ ಮುಂದುವರಿದಿದೆ.
ಅಂದಹಾಗೆ ಎಸಿಎಫ್​ ಸೌಮ್ಯ ರಂಜನ್ ಅವರು 2021ರ​ ಜುಲೈ 11ರಂದು ಪರಲಖೆಮುಂಡಿಯ ತಮ್ಮ ಕ್ವಾಟ್ರಸ್​ನಲ್ಲಿ ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಕೂಡ ಆಸ್ಪತ್ರೆಗೆ ದಾಖಲಿಸಿದ ದಿನದ ಬೆನ್ನಲ್ಲೇ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದರು.(ಏಜೆನ್ಸೀಸ್​)
ಅರಣ್ಯಾಧಿಕಾರಿ ಡೆತ್​ ಕೇಸ್​: ಕಣ್ಣೆದುರಲ್ಲೇ ಪತಿ ಸಾಯ್ತಿದ್ರೂ ಸುಮ್ನೆ ನಿಂತಿದ್ದ ಪತ್ನಿ, ಚಾರ್ಜ್​ಶೀಟ್​ನಲ್ಲಿ ಸ್ಫೋಟಕ ಮಾಹಿತಿ

ಅರಣ್ಯಾಧಿಕಾರಿ ಸಾವಿನ ಕೇಸ್​: ಪತ್ನಿಯ ಅಕ್ರಮ ಬಯಲಿಗೆಳೆಯಲು ಮಾಡಿದ್ದ ಸುಳ್ಳು ಪತ್ತೆ ಪರೀಕ್ಷೆಯ ವರದಿ ಔಟ್​

ಸೊಸೆಯನ್ನೇಕೆ ಇನ್ನು ಬಂಧಿಸಿಲ್ಲ? ನಿಗೂಢ ಸಾವಿಗೀಡಾದ ಅರಣ್ಯಾಧಿಕಾರಿ ತಂದೆಯ ಕಣ್ಣೀರು..!

ಅರಣ್ಯಾಧಿಕಾರಿ ಸಾವು ಪ್ರಕರಣ: ಪತ್ನಿಯ ಅಕ್ರಮ ಸಂಬಂಧದ ಮುಖವಾಡ ಕಳಚಲು ಪೊಲೀಸರ ಮೆಗಾ ಪ್ಲಾನ್​..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
