ಮಾಲ್ಡಾ:ಶಿಕ್ಷಕರ ನೇಮಕಾತಿಯಲ್ಲಿ ಬೃಹತ್ ಹಗರಣ ನಡೆಸುವ ಮೂಲಕ ಆಡಾಳಿತರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) 26,000 ಕುಟುಂಬಗಳನ್ನು ಬೀದಿಗೆ ತಂದಿದ್ದು, ಕಟ್ ಆಂಡ್ ಕಮಿಷನ್ ಸಂಸ್ಕೃತಿ ಪಾಲಿಸುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಧ್ವನಿ ಎತ್ತದೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿ, ವಂಚನೆಗಳಿಗೆ ಸಮಾನಾರ್ಥಕ ಪಕ್ಷವೇ ಟಿಎಂಸಿ. ಸಾವಿರಾರು ಕೋಟಿ ರೂ. ಹಗರಣಗಳನ್ನು ನಡೆಸುವ ಮೂಲಕ ಬಂಗಾಳದ ಗೌರವವನ್ನು ಹಾಳು ಮಾಡಿದೆ. ರಾಜ್ಯ ಸರ್ಕಾರವು ಯುವಕರ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿದ್ದು, ಹೈಕೋರ್ಟ್ ಆದೇಶದ ಬಳಿಕ 26,000 ಉದ್ಯೋಗಗಳನ್ನು ರದ್ದುಗೊಳಿಸಲಾಗಿದೆ. ಟಿಎಂಸಿ ನಾಯಕರಿಗೆ ಲಂಚ ನೀಡಲು ಸಾಲ ಮಾಡಿಕೊಂಡಿರುವ ಯುವಕರು ದುಸ್ಥಿತಿಯಲ್ಲಿದ್ದು, ಜೀವನ ನಡೆಸಲು ಅಲೆದಾಡುತ್ತಿದ್ದಾರೆ ಎಂದರು. ಬಾಂಗ್ಲಾದೇಶಿ ನುಸುಳುಕೋರರನ್ನು ಬಂಗಾಳದಲ್ಲಿ ನೆಲೆಗೊಳಿಸಲು ಟಿಎಂಸಿ ಸರ್ಕಾರ ಕೆಲಸ ಮಾಡುತ್ತಿದ್ದರೆ ಕಾಂಗ್ರೆಸ್ ನಿಮ್ಮ(ಭಾರತೀಯರ) ಆಸ್ತಿಯನ್ನು ಅವರಿಗೆ ಹಂಚಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ತುಷ್ಟೀಕರಣಕ್ಕಾಗಿ ಈ ಪಕ್ಷಗಳು ಯಾವುದೇ ಹಂತಕ್ಕೂ ಹೋಗಬಹುದು ಎಂದು ವಾಗ್ದಾಳಿ ನಡೆಸಿದರು.
ಮತಬ್ಯಾಂಕ್​ಗಾಗಿ ಸಿಎಎ ವಿರೋಧ:ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪೌರತ್ವವನ್ನು ನೀಡುವುದಾಗಿದೆ. ಹೊರತು ಕಸಿದುಕೊಳ್ಳುವುದಿಲ್ಲ. ಕಾಂಗ್ರೆಸ್ ಮತ್ತು ಟಿಎಂಸಿ ತಮ್ಮ ಮತಬ್ಯಾಂಕ್ ರಾಜಕಾರಣಕ್ಕಾಗಿ ಸಿಎಎ ವಿರೋಧಿಸುತ್ತಿವೆ. ಧಾರ್ವಿುಕ ಕಾರಣಕ್ಕಾಗಿ ಕಿರುಕುಳ ಅನುಭವಿಸಿ ಜನ್ಮಭೂಮಿ ತೊರೆದ ಹಿಂದು, ಸಿಖ್ ಮತ್ತು ಬೌದ್ಧ ನಿರಾಶ್ರಿತರು ಪೌರತ್ವ ಪಡೆದುಕೊಂಡರೆ ಇವರಿಗೇನು (ವಿರೋಧ ಪಕ್ಷಗಳು) ತೊಂದರೆ? ಎಂದು ಮೋದಿ ಪ್ರಶ್ನಿಸಿದರು.
ಮಹಿಳಾ ವಿರೋಧಿ ಸರ್ಕಾರ :ತ್ರಿವಳಿ ತಲಾಖ್ ರದ್ದತಿಯನ್ನು ವಿರೋಧಿಸುವ ಮೂಲಕ ಟಿಎಂಸಿ ಮುಸ್ಲಿಂ ಸಹೋದರಿಯರಿಗೆ ದ್ರೋಹ ಬಗೆದಿದೆ ಎಂದು ಮೋದಿ ಆರೋಪಿಸಿದರು. ‘ಮಾ-ಮತಿ-ಮನುಷ್’ ಎಂದು ಹೇಳಿ ಅಧಿಕಾರಕ್ಕೆ ಬಂದಿರುವ ಮಮತಾ ಬ್ಯಾನರ್ಜಿ ಸರ್ಕಾರ ರಾಜ್ಯದ ಮಹಿಳೆಯರ ರಕ್ಷಣೆ ಮಾಡುತ್ತಿಲ್ಲ. ಸಂದೇಶಖಾಲಿಯಲ್ಲಿ ಟಿಎಂಸಿ ನಾಯಕರು ಲೈಂಗಿಕ ದೌರ್ಜನ್ಯ ನಡೆಸಿದಾಗ ಸರ್ಕಾರ ಉದಾಸೀನತೆ ತೋರಿದ್ದು, ಅತ್ಯಾಚಾರ ಮಾಡಿದ ಆರೋಪಿಗಳನ್ನು ರಕ್ಷಿಸಲು ಮುಂದಾಗಿದೆ. ಮುಸ್ಲಿಂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಕೇಂದ್ರ ಬಿಜೆಪಿ ಸರ್ಕಾರ ತ್ರಿವಳಿ ತಲಾಖ್ ರದ್ದುಗೊಳಿಸಿದಾಗ ಟಿಎಂಸಿ ವಿರೋಧಿಸಿತ್ತು ಎಂದು ಟೀಕಿಸಿದರು. ಮಾಲ್ಡಾ ಜಿಲ್ಲೆಯಲ್ಲಿ ಮುಸ್ಲಿಂ ಪ್ರಾಬಲ್ಯವಿದೆ.
ಕೇಂದ್ರದ ಹಣ ಸುಲಿಗೆಕೋರರ ಜೇಬಿಗೆ:ಕೇಂದ್ರ ಸರ್ಕಾರದಿಂದ ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಕಳುಹಿಸುವ ಹಣವನ್ನು ಟಿಎಂಸಿ ನಾಯಕರು, ಸಚಿವರು ಮತ್ತು ಸುಲಿಗೆಕೋರರು ಕಸಿದುಕೊಳ್ಳುತ್ತಿದ್ದಾರೆ. ಮೊದಲ ಹಂತದಲ್ಲಿ ಹಿನ್ನಡೆ ಅನುಭವಿಸಿದ ಕಾಂಗ್ರೆಸ್ ಮತ್ತು ಟಿಎಂಸಿಗಳಂಥ ವಿರೋಧ ಪಕ್ಷಗಳು ಎರಡನೇ ಹಂತದಲ್ಲೂ ನೆಲಕಚ್ಚುವುದು ಖಚಿತ ಎಂದು ಪ್ರಧಾನಿ ಮೋದಿ ಹೇಳಿದರು.
ಅಭಿವೃದ್ಧಿ ಶೂನ್ಯ:ಎಡ ಮತ್ತು ಟಿಎಂಸಿ ಆಡಳಿತವು ಬಂಗಾಳದ ಘನತೆಗೆ ಧಕ್ಕೆ ತಂದಿವೆ ಮತ್ತು ಅಭಿವೃದ್ಧಿಯನ್ನು ನಿಲ್ಲಿಸಿವೆ. ಈ ಹಿಂದೆ ಸಾಮಾಜಿಕ ಸಬಲೀಕರಣ, ವೈಜ್ಞಾನಿಕ ಆವಿಷ್ಕಾರ ಮತ್ತ ತತ್ವಶಾಸ್ತ್ರ ಸೇರಿ ಎಲ್ಲ ಕ್ಷೇತ್ರಗಳಲ್ಲಿ ರಾಜ್ಯ ಮುನ್ನಡೆ ಸಾಧಿಸುತ್ತಿತ್ತು. ದುರದೃಷ್ಟವಶಾತ್ ಎಡ ಪಕ್ಷಗಳು ಹಾಗೂ ಟಿಎಂಸಿ ಬಂಗಾಳದ ವೈಭವವನ್ನು ಹಾಳು ಮಾಡಿವೆ ಎಂದು ಮೋದಿ ಹತಾಶೆ ವ್ಯಕ್ತಪಡಿಸಿದರು.
ನೇಮಕಾತಿ ರದ್ದುಗೊಳಿಸಿದ್ದ ಹೈಕೋರ್ಟ್:ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ 24,000ಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ನಡೆದ ಎಸ್​ಎಲ್​ಎಸ್​ಟಿ-2016 ಪರೀಕ್ಷೆಗೆ 23 ಲಕ್ಷಕ್ಕೂ ಅಧಿಕ ಮಂದಿ ಹಾಜರಾಗಿದ್ದರು. ಕಡಿಮೆ ಶ್ರೇಯಾಂಕ ಪಡೆದ ಅಭ್ಯರ್ಥಿಗಳನ್ನೂ ಮೆರಿಟ್ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಅರ್ಹತಾ ಪಟ್ಟಿಯಲ್ಲಿ ಹೆಸರು ಇಲ್ಲದ ವ್ಯಕ್ತಿಗಳಿಗೂ ಶಿಕ್ಷಕರ ನೇಮಕಾತಿ ಪತ್ರ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ನೇಮಕಾತಿಯನ್ನು ಅಸಿಂಧುಗೊಳಿಸಿ ಎಲ್ಲ ಶಿಕ್ಷಕರ ಉದ್ಯೋಗಗಳನ್ನು ರದ್ದುಗೊಳಿಸಿತ್ತು. ಅಲ್ಲದೆ, ಎಲ್ಲ ಅಭ್ಯರ್ಥಿಗಳು 8 ವರ್ಷ ಪಡೆದ ವೇತನವನ್ನು 4 ವಾರಗಳಲ್ಲಿ ಹಿಂದಿರುಗಿಸುವಂತೆ ಆದೇಶಿಸಿತ್ತು. ಈ ಹಗರಣಕ್ಕೆ ಟಿಎಂಸಿ ನಾಯಕರ ಲಂಚದ ಆಸೆ ಕಾರಣ ಎಂದು ಮೋದಿ ಪ್ರಚಾರದಲ್ಲಿ ಎತ್ತಿ ತೋರಿಸುತ್ತಿದ್ದಾರೆ.
ದಲಿತರ ಮಂಗಳಸೂತ್ರ ಆಸ್ತಿ ಮೇಲೆ ಕೈ ಕಣ್ಣು:ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಹೇಳಿಕ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟ ನೀವು ಕಷ್ಟಪಟ್ಟು ದುಡಿದು ಸಂಗ್ರಹಿಸಿದ ಸಂಪತ್ತನ್ನು ವಶಪಡಿಸಿಕೊಳ್ಳಲು ಯೋಜಿಸುತ್ತಿದೆ. ಬಡ ಮತ್ತು ದಲಿತ ಮಹಿಳೆಯರ ಮಂಗಳಸೂತ್ರವನ್ನು ಸಹ ಬಿಡುವುದಿಲ್ಲ. ಈ ಬಗ್ಗೆ ಟಿಎಂಸಿ ನಿಲುವೇನು? ಎರಡೂ ಪಕ್ಷಗಳು ತುಷ್ಟೀಕರಣ ರಾಜಕಾರಣದಲ್ಲಿ ಪೈಪೋಟಿ ನಡೆಸುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಎರಡನೇ ಬಾರಿಗೆ ತಂದೆಯಾದ ಕ್ರಿಕೆಟಿಗ ಕೃನಾಲ್ ಪಾಂಡ್ಯ: ಮಗುವಿನ ಹೆಸರು ರಿವೀಲ್..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
