ನವದೆಹಲಿ:ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದ್ದು, ರಾಜ್ಯದಿಂದ 9 ಗಣ್ಯರಿಗೆ ಈ ಗೌರವ ಸಂದಿದೆ. ಉದ್ಯಮಿ ಸೀತಾರಾಮ ಜಿಂದಾಲ್​ಗೆ ಪದ್ಮಭೂಷಣ ಹಾಗೂ 8 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಐವರಿಗೆ ಪದ್ಮವಿಭೂಷಣ, 17 ಜನರಿಗೆ ಪದ್ಮಭೂಷಣ ಹಾಗೂ ಒಟ್ಟು 132 ಜನರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಗಣರಾಜ್ಯೋತ್ಸವ ಮುನ್ನಾ ದಿನವಾದ ಗುರುವಾರ ಕೇಂದ್ರ ಸರ್ಕಾರ ಪದ್ಮಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಮಾಡಿದ ತೆರೆಮರೆ ಸಾಧಕರಿಗೆ ಮನ್ನಣೆ ದೊರೆತಿದೆ. ಗೌರವಕ್ಕೆ ಪಾತ್ರರಾದ ಪ್ರಮುಖ ಪರಿಚಯ ಇಲ್ಲಿದೆ.
19. ಚಂದ್ರೇಶ್ವರ ಠಾಕುರ್- ವೈದ್ಯಕೀಯ- ಬಿಹಾರ
ಎಲೆಮರೆ ಸಾಧನೆಗೆ ಮನ್ನಣೆ:ಪ್ರತಿಭಾ ಬರುವಾ (67) ಪದ್ಮಶ್ರೀ – ಅಸ್ಸಾಂ: ಇವರು ಭಾರತದ ಮಹಿಳಾ ಮಾವುತ. ಸಾಂಪ್ರದಾಯಿಕವಾಗಿ ಪುರುಷ ಪ್ರಧಾನ ಕ್ಷೇತ್ರದಲ್ಲೂ ಇವರು ತಮ್ಮದೇ ಛಾಪು ಮೂಡಿಸಿದ್ದಾರೆ. ಮಾನವ-ಆನೆ ಸಂಘರ್ಷದ ತಗ್ಗಿಸಲಯ ಇವರು ತಮ್ಮದೇ ಕೊಡುಗೆ ನೀಡಿದ್ದಾರೆ. ಕಾಡು ಆನೆಗಳನ್ನು ನಿಭಾಯಿಸಿ, ಸೆರೆಹಿಡಿಯಲು 3 ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಿದ್ದಾರೆ. ತಂದೆಯಿಂದ ಈ ಕೌಶಲ್ಯವನ್ನು ಅವರು ಕಲಿತಿದ್ದಾರೆ.
ಅಶೋಕ್ ಕುಮಾರ್ ಬಿಸ್ವಾಸ್ (67) ಪದ್ಮಶ್ರೀ ಕಲೆ – ಬಿಹಾರ:ಟಿಕುಲಿ ಪೇಂಟರ್ ಆದ ಇವರು ಮೌರ್ಯ ಯುಗದ ಕಲಾರೂಪದ ಮಾರ್ಪಾಡು ಮಾಡಿ ಕಲಾಕೃತಿ ರಚನೆ ಮಾಡುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಅವರು ಈ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಸಾವಿರಾರು ಕಲಾಕೃತಿಗಳನ್ನು ವಿದೇಶಕ್ಕೆ ರಫ್ತು ಮಾಡಿದ್ದು, ಲೆಕ್ಕವಿಲ್ಲದಷ್ಟು ವರ್ಣಚಿತ್ರಗಳನ್ನು ರಚಿಸಿದ್ದಾರೆ. ಕಲಾಸಕ್ತರಿಗೆ ಇವರು ಉಚಿತ ತರಬೇತಿಯನ್ನೂ ನೀಡುತ್ತಿದ್ದಾರೆ. 8,000ಕ್ಕೂ ಹೆಚ್ಚು ಮಹಿಳಾ ಕಲಾವಿದರಿಗೆ ಇವರು ತರಬೇತಿ ನೀಡಿದ್ದಾರೆ.
ಬಾಲಕೃಷ್ಣನ್ ಸದನಂ ಪುತಿಯ ವೀಟಿಲ್ (79) ಪದ್ಮಶ್ರೀ – ಕೇರಳ:ವಿಶಿಷ್ಟವಾದ ಕಲ್ಲುವಾಝಿ ಕಥಕ್ಕಳಿ ನೃತ್ಯಗಾರರಾದ ಇವರು ಜಾಗತಿಕ ಮೆಚ್ಚುಗೆ ಗಳಿಸಿದ್ದಾರೆ. 25 ದೇಶಗಳಲ್ಲಿ, 30 ಅಂತಾರಾಷ್ಟ್ರೀಯ ಉತ್ಸವಗಳಲ್ಲಿ ಇವರು ಕಾರ್ಯಕ್ರಮ ನೀಡಿದ್ದಾರೆ. ನೃತ್ಯ ಸಂಯೋಜಕ ಮತ್ತು ನಿರ್ವಪಕರಾಗಿ 35ಕ್ಕೂ ಹೆಚ್ಚು ಹೊಸ ಪ್ರಯೋಗಗಳನ್ನು ಮಾಡಿದ್ದಾರೆ. 1974ರಲ್ಲಿ ದೆಹಲಿಯ ನೃತ್ಯ ಸಂಸ್ಥೆಯಲ್ಲಿ ಹಿರಿಯ ಕಲಾವಿದರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಇವರು, 1980ರ ಹೊತ್ತಿಗೆ ಸಂಸ್ಥೆಯ ನಿರ್ದೇಶಕರಾದರು.
ಉಮಾ ಮಹೇಶ್ವರಿ ಡಿ. ಪದ್ಮಶ್ರೀ – ಆಂಧ್ರಪ್ರದೇಶ:ಸಂಸ್ಕೃತದ ಮೊದಲ ಮಹಿಳಾ ಹರಿಕಥಾ ಕಲಾವಿದೆ ಎಂದು ಅವರು ಪ್ರಸಿದ್ಧಿ ಪಡೆದಿದ್ದಾರೆ. ಬಹುರಾಗಗಳಲ್ಲಿ ಇವರು ಕಥಾ ಪಠಣ ಮಾಡುತ್ತಾರೆ. ಇವರು ಸಂಗೀತಗಾರರ ಕುಟುಂಬದಿಂದ ಬಂಧವರು. ಹಲವು ಯುವತಿಯರಿಗೆ ಇವರು ಪ್ರೇರಣೆಯಾಗಿದ್ದಾರೆ. ಇವರನ್ನು ನೋಡಿ ಅನೇಕ ಮಹಿಳೆಯರು ಹರಿಕಥೆ ಹೇಳಲು ಪ್ರಾರಂಭಿಸಿದ್ದಾರೆ.
ನೇಪಾಳ್ ಚಂದ್ರ ಸೂತ್ರಧಾರ್ (82) ಪದ್ಮಶ್ರೀ – ಬಂಗಾಳ:ಛಾಹು ಜಾನಪದ ನೃತ್ಯದ ಮುಖವಾಡ ತಯಾರಿಕೆಯಲ್ಲಿ ಪ್ರಸಿದ್ಧವಾದ ಕುಟುಂಬದ 3ನೇ ತಲೆಮಾರಿನವರಾಗಿದ್ದು 2023ರಲ್ಲಿ ನಿಧನರಾದ ನೇಪಾಳ್ ಚಂದ್ರ ಸೂತ್ರಧಾರ್​ಗೆ ಮರಣೋತ್ತರವಾಗಿ ಪ್ರಶಸ್ತಿ ಘೋಷಿಸಲಾಗಿದೆ. 8ನೇ ವಯಸ್ಸಿನಲ್ಲೇ ತಂದೆ ಹಾಗೂ ತಾತನಿಂದ ಮುಖವಾಡ ಕಲೆಯನ್ನು ಕಲಿತಿದ್ದರು. ಈ ಕಲೆಯ ರಕ್ಷಣೆಗೆ 50 ಹೆಚ್ಚು ವರ್ಷ ಕಾಲ ದುಡಿದಿದ್ದರು. 70ಕ್ಕೂ ಅಧಿಕ ಛಾಹು ನೃತ್ಯ ಗುಂಪುಗಳಿಗೆ ತರಬೇತಿ ನೀಡಿರುವ ಇವರು ಮುಖವಾಡ ತಯಾರಿಯ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ್ಯಾಗಾರಗಳಲ್ಲಿ ಭಾಗಿಯಾಗಿದ್ದರು.
ಬಾಬು ರಾಂ ಯಾದವ್ (74) ಪದ್ಮಶ್ರೀ, ಉತ್ತರ ಪ್ರದೇಶ:‘ಹಿತ್ತಾಳೆ ಬಾಬು’ ಎಂದೇ ಪ್ರಸಿದ್ಧರಾದ ಬಾಬು ರಾಂ ಯಾದವ್, ಸಾಂಪ್ರದಾಯಿಕ ತಂತ್ರಗಳನ್ನು ಬಳಸಿ ಸಂಕೀರ್ಣವಾದ ಹಿತ್ತಾಳೆಯ ಕಲಾಕೃತಿಗಳನ್ನು ತಯಾರಿಸುವಲ್ಲಿ ಆರು ದಶಕಗಳ ಅನುಭವ ಹೊಂದಿದ್ದಾರೆ. 40ಕ್ಕೂ ಹೆಚ್ಚು ಜಾಗತಿಕ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಹಿತ್ತಾಳೆ ಕಲಾಕೃತಿಗಳ ರಫ್ತು ಕೂಡ ಮಾಡುವ ಇವರು, ಕುಷ್ಠ ರೋಗಿಗಳ ಸಹಿತ 1,000ಕ್ಕೂ ಹೆಚ್ಚು ಹೊಸಬರಿಗೆ ಈ ಕಲೆಯಲ್ಲಿ ತರಬೇತಿ ಕಾರ್ಯಾಗಾರ ನಡೆಸಿದ್ದಾರೆ. ಕಲಾಕಾರರ ಕಲ್ಯಾಣಕ್ಕಾಗಿ ಆರ್ಥಿಕ ನೆರವು ಒದಗಿಸಲು ‘ಆರ್ಟಿಸಾನ್ ಲೈಟ್’ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.
ಜಾನಕಿಲಾಲ್ (81) ಪದ್ಮಶ್ರೀ-ರಾಜಸ್ಥಾನ:ರಾಜಸ್ಥಾನದ ಭಿಲ್ವಾರದ ಬೆಹ್ರೂಪಿಯಾ (ಬಹುರೂಪಿ?) ಕಲಾವಿದ ಜಾನಕಿಲಾಲ್ ತಮ್ಮ ಕಲಾ ಪ್ರದರ್ಶನದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರನ್ನು ಮಂತ್ರಮುಗ್ಧಗೊಳಿಸಿದ್ದು ಆರು ದಶಕಗಳಿಂದ ಜಾನಪದ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ. ಅಳಿವಿನ ಅಂಚಿನಲ್ಲಿರುವ ಅಪರೂಪದ ಜಾನಪದ ಕಲೆಯ ರಕ್ಷಣೆಗೆ ಶ್ರಮಿಸುತ್ತಿರುವ ಇವರು ಪುರಾಣ, ಜಾನಪದ ಹಾಗೂ ಪಾರಂಪರಿಕ ಕಥೆಗಳಿಂದ ಪಾತ್ರಗಳನ್ನು ಸೃಷ್ಟಿಸುತ್ತಾರೆ.
ದಾಸರಿ ಕೊಂಡಪ್ಪ (63) ಪದ್ಮಶ್ರೀ-ತೆಲಂಗಾಣ:ಬುರ ವೀಣಾ ವಾದಕ ದಾಸರಿ ಕೊಂಡಪ್ಪ ಈ ಕಲೆಯ ಉಳಿವಿಗಾಗಿ ಜೀವನವನ್ನೇ ಮುಡುಪಾಗಿಟ್ಟವರು. ಕನ್ನಡ, ತೆಲುಗಿನಲ್ಲಿ ತತ್ವಪದಗಳ ಗಾಯನದಲ್ಲಿ ಇವರದು ಎತ್ತಿದ ಕೈ. ಬುರ› ವೀಣಾ ವಾದನದ ಕೊನೆಯ ವ್ಯಕ್ತಿ ಎಂಬುದು ಇವರ ಹೆಗ್ಗಳಿಕೆಯಾಗಿದೆ. ಕುಂಬಳಕಾಯಿ, ಬಿದಿರು ಮತ್ತು ತಂತಿ ಬಳಸಿ ತಯಾರಿಸಿದ ಸಂಗೀತ ಸಾಧನವೇ ಬುರ› ವೀಣೆ.
ತನ್ನಂತೆ ಸುಟ್ಟು ಹೋದವರ ಸೇವೆಯಲ್ಲಿ ನಿರತ ಅಗ್ನಿರಕ್ಷೆ:ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಡಾ. ಪ್ರೇಮಾ ಧನರಾಜ್ ಮೂಲತಃ ತಮಿಳುನಾಡಿನ ವೆಲ್ಲೋರಿನವರು. ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರೇಮಾ ಎಂಟು ವರ್ಷದವರಿದ್ದಾಗ (1965) ಮನೆಯ ಅಡುಗೆ ಮನೆಯಲ್ಲಿ ಸ್ಟೌ ಸಿಡಿದು ಅರ್ಧ ದೇಹ ಬೆಂಕಿಯಲ್ಲಿ ಸುಟ್ಟು ಹೋಗಿತ್ತು. ವೆಲ್ಲೋರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆ ದಾಖಲಿಸಲಾಯಿತು. ಸುದೀರ್ಘ ಅವಧಿಯ ಚಿಕಿತ್ಸೆ ಮತ್ತು 14 ಸರ್ಜರಿಗಳಿಂದ ಬದುಕುಳಿದರು. ವೈದ್ಯೆಯಾಗಿ ಸೇವೆ ಸಲ್ಲಿಸಬೇಕು ಎಂಬ ಹಠಕ್ಕೆ ಬಿದ್ದ ಅವರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸೀಟು ದೊರೆಯಿತು. ಪ್ರೇಮಾ ಹಗಲಿರುಳು ಓದಿ ವೈದ್ಯರಾದರು. ಸರ್ಜರಿ ವಿಭಾಗದಲ್ಲಿ ಅಧ್ಯಯನ ಮಾಡಿ ಪ್ಲಾಸ್ಟಿಕ್ ಸರ್ಜನ್ ಆದರು. ಅಮೆರಿಕಾ ಗ್ಲಾಸ್ಗೋದಲ್ಲಿ ಸ್ನಾತಕೋತ್ತರ ಪದವಿ ಪಡೆದು ಶ್ರೇಷ್ಠ ಪ್ಲಾಸ್ಟಿಕ್ ಸರ್ಜನ್ ಎನಿಸಿಕೊಂಡರು. ಮೂವತ್ತು ವರ್ಷಗಳಿಂದ ಬೆಂಕಿಯಲ್ಲಿ ಬೆಂದುಹೋದ ದೇಹಗಳನ್ನು ಸರ್ಜರಿ ಮೂಲಕ ಸರಿಪಡಿಸುವುದು, ಅವರಲ್ಲಿ ಮತ್ತೆ ಜೀವನೋತ್ಸಾಹ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಪ್ರೇಮಾ ಅವರು ಅಗ್ನಿರಕ್ಷಾ ಎಂಬ ಹೆಸರಿನ ಸರ್ಕಾರೇತರ ಸಂಸ್ಥೆ ಸ್ಥಾಪನೆ ಮಾಡಿದ್ದಾರೆ. ಸುಟ್ಟ ಗಾಯಾಳುಗಳಿಗೆ ಉಚಿತ ಚಿಕಿತ್ಸೆ, ಮಾರ್ಗದರ್ಶನ ಮತ್ತು ಆರ್ಥಿಕ ನೆರವು ನೀಡುತ್ತಿದೆ. ಈವರೆಗೆ 25 ಸಾವಿರಕ್ಕೂ ಅಧಿಕ ಸುಟ್ಟ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಕುರಿತು 3 ಪುಸ್ತಕ ಬರೆದಿದ್ದಾರೆ. ಜಾಗತಿಕ ಮಾನವೀಯ ಪ್ರಯತ್ನಗಳ ಭಾಗವಾಗಿ ಇಥಿಯೋಪಿಯಾದಲ್ಲಿ ಮೊದಲ ಸುಟ್ಟ ಗಾಯಾಳುಗಳ ಚಿಕಿತ್ಸಾ ಘಟಕ ಸ್ಥಾಪನೆ. ಕೀನ್ಯಾ, ತಾಂಜೇನಿಯಾ, ನಾರ್ವೆ, ಇಥಿಯೋಪಿಯಾದಲ್ಲಿ ವೈದ್ಯರಿಗೆ ಮಾರ್ಗದರ್ಶನ ನೀಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಸುಟ್ಟುಹೋದ ಅವರ ದೇಹಕ್ಕೆ ಚಿಕಿತ್ಸೆ ನೀಡಿದ್ದ ವೆಲ್ಲೋರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಸೇವೆ ಆರಂಭ ಮಾಡಿದ ಪ್ರೇಮಾ, ಮುಂದೆ ಅದೇ ಕಾಲೇಜಿನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಅಮೆರಿಕಾದ ಟೆಕ್ಸಾಸ್ ಕಾಲೇಜಿನಲ್ಲಿ ವಿಸಿಟಿಂಗ್ ಪೊ›ಫೆಸರ್ ಆಗಿಯೂ ಕೆಲಸ ಮಾಡಿದ್ದಾರೆ.
ಭತ್ತದ ಮೂಲತಳಿ ಸಂರಕ್ಷಕ ಬೆಳೇರಿಗೆ ಒಲಿದ ಪದ್ಮಶ್ರೀ:ಮರೆಯಾಗುತ್ತಿರುವ ದೇಸೀ ಭತ್ತದ ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆಯಲ್ಲಿ 12 ವರ್ಷಗಳಿಂದ ತೊಡಗಿಸಿಕೊಂಡಿರುವ ಕಾಸರಗೋಡು ಜಿಲ್ಲೆಯ ಬೆಳ್ಳೂರು ಗ್ರಾಪಂನ ನೆಟ್ಟಣಿಗೆ ಗ್ರಾಮದ ಕೃಷಿಕ ಸತ್ಯನಾರಾಯಣ ಬೆಳೇರಿ ಅವರಿಗೆ ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಪದ್ಮಶ್ರೀ ಪ್ರಶಸ್ತಿ ಒಲಿದಿದೆ. ದಶಕಗಳ ಹಿಂದೆ ಹಿರಿಯ ಗಾಂಧಿವಾದಿ ಚೇರ್ಕಾಡಿ ರಾಮಚಂದ್ರರಾಯರು ನೀಡಿದ ಒಂದು ಮುಷ್ಟಿ ರಾಜಕಯಮೆ ಎಂಬ ದೇಸಿ ಭತ್ತದ ತಳಿಯೊಂದಿಗೆ ಆರಂಭವಾದ ಅವರ ಕೆಲಸ ಪ್ರಸ್ತುತ 650ಕ್ಕೂ ಹೆಚ್ಚಿನ ತಳಿಗಳ ಸಂರಕ್ಷಣೆವರೆಗೆ ತಲುಪಿದೆ. ರಾಜಕಯಮೆ, ಗಂಧಸಾಲೆ, ಅತಿಕಾರ, ಸುಗ್ಗಿಕಯಮೆ, ನವರ, ಮೈಸೂರು ರಾಜರು ಬಳಸುತ್ತಿದ್ದ ರಾಜಮುಡಿ ಮತ್ತು ರಾಜಭೋಗ, ಉಪ್ಪುನೀರಿನಲ್ಲಿಯೂ ಬೆಳೆಯುವ ಕಗ್ಗ, ಬರನಿರೋಧಕ ಪುಟ್ಟ ಭತ್ತ, ಅವಲಕ್ಕಿಗೆ ಬೇಕಾದ ಸ್ವರಟಾ, ಫಿಲಿಫೈನ್ಸ್ ದೇಶದ ಮನಿಲಾ, ಸುಶ್ರುತನ ಕಾಲದ ಕಳಮೆ, ಬುದ್ಧನ ಕಾಲದ ಕಲಾನಾಮಕ್, ನೇರಳೆ ಬಣ್ಣದ ಡಾಂಬಾರ್ ಕಾಳಿ, ಕಾರ್ ರೆಡ್ ರೈಸ್, ಕಲಾಬತಿ, ನಜರ್ ಬಾತ್ ಅಲ್ಲದೇ ಮಣಿಪುರ, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ›, ಒಡಿಶಾ ಸೇರಿದಂತೆ ಭಾರತದ ಹೆಚ್ಚಿನ ಪ್ರದೇಶಗಳ ಭತ್ತದ ತಳಿಗಳ ಸಂಗ್ರಹ ಇವರಲ್ಲಿದೆ. 2021ರಲ್ಲಿ ಕೇಂದ್ರ ಕೃಷಿ ಇಲಾಖೆ ಕೊಡಮಾಡುವ ‘ಪ್ಲಾಂಟ್ ಜೆನೋಮ್ ಸೇವಿಯೆರ್ ಫಾರ್ಮರ್ ರಿವಾರ್ಡ್’ ಎಂಬ ರಾಷ್ಟ್ರೀಯ ಪುರಸ್ಕಾರಕ್ಕೆ ಸತ್ಯನಾರಾಯನ ಬೆಳೇರಿ ಪಾತ್ರರಾಗಿದ್ದರು. ಕಸಿ ಕಟ್ಟುವಿಕೆ, ಜೇನು ಸಾಕಾಣಿಕೆ, ಗಾರೆ ಕೆಲಸ, ಮರ ಕೆಲಸ, ಇಲೆಕ್ಟ್ರಿಕ್ ಮತ್ತು ಮೋಟಾರ್ ರಿವೈಂಡಿಂಗ್ ಕೆಲಸಗಳಲ್ಲೂ ಪರಿಣಿತರಾಗಿರುವ ಬೆಳೇರಿ ಅವರ ಹಲವು ಕವಿತೆ, ಲೇಖನ, ವ್ಯಂಗ್ಯ ಚಿತ್ರಗಳು ನಾಡಿನ ದಿನಪತ್ರಿಕೆ, ಮ್ಯಾಗಜಿನ್​ಗಳಲ್ಲಿ ಪ್ರಕಟವಾಗಿವೆ.
ಗಿರಿಜನರ ಆತ್ಮಸಾಕ್ಷಿ ಜೇನುಕುರುಬರ ಸೋಮಣ್ಣ:ಎಚ್.ಡಿ.ಕೋಟೆ ತಾಲೂಕಿನ ಜೇನುಕುರುಬರ ಮುಖಂಡ ಸೋಮಣ್ಣ ಗಿರಿಜನರ ಆತ್ಮಸಾಕ್ಷಿ. 1957ರ ಜೂನ್ 1ರಂದು ಜನಿಸಿದ ಸೋಮಣ್ಣ, ಶಾಲೆಯ ಸಾಂಪ್ರದಾಯಿಕ ಶಿಕ್ಷಣ ಪಡೆದವರಲ್ಲ. ಆದಾಗ್ಯೂ ಕಳೆದ 3-4 ದಶಕಗಳಿಂದ ಭೂರಹಿತ ಆದಿವಾಸಿಗಳನ್ನು ಸಂಘಟಿಸಿದ್ದಾರೆ. ಸ್ಥಳೀಯ ಪ್ರಗತಿಪರ ಹೋರಾಟಗಾರರ ಜತೆಗೂಡಿ ಕಟ್ಟಿದ ರಾಜ್ಯ ಮೂಲನಿವಾಸಿ ವೇದಿಕೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಸೋಮಣ್ಣ, ತಮ್ಮ ಸಾಂಘಿಕ ಪ್ರಯತ್ನದಿಂದಾಗಿ ಆದಿವಾಸಿಗಳಿಗೆ ಸುಮಾರು 6 ಸಾವಿರ ಎಕರೆ ಕೃಷಿ ಭೂಮಿ ದೊರಕಿಸಿಕೊಟ್ಟಿದ್ದಾರೆ.
ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಾಗರಹೊಳೆ ಮತ್ತು ಕಾಕನಕೋಟೆ ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಿದ ಆದಿವಾಸಿಗಳನ್ನು ಸೋಮಣ್ಣ ಸಂಘಟಿಸಿ, ಪುನರ್ವಸತಿಗಾಗಿ ಅನೇಕ ಚಳವಳಿ ರೂಪಿಸಿದ್ದಾರೆ. ಹೀಗಾಗಿ, ಇವರ ಪಾಲಿಗೆ ಇವರು ಅಂತರಂಗದ ಬಂಧು.
ಸೋಮಣ್ಣ ಅವರು 1989ರಿಂದಲೇ ಜೇನುಕುರುಬ, ಬೆಟ್ಟಕುರುಬ, ಎರವ ಮತ್ತು ಸೋಲಿಗರನ್ನು ಸಂಘಟಿಸಿ ಪುನರ್ವಸತಿಗಾಗಿ ಹೋರಾಟ ನಡೆಸಿದರು. ಜತೆಗೆ, ಕಾನೂನು ಹೋರಾಟ ನಡೆಸಿದರು. ಒಕ್ಕಲೆಬ್ಬಿಸಿದ ಆದಿವಾಸಿಗಳ ಪರ ಸಾರ್ವಜನಿಕ ಹಿತಾಸಕ್ತಿ ಆಧಾರದ ಮೇಲೆ ಹೈಕೋರ್ಟ್​ನ ಮೊರೆ ಹೋದರು. ಇದರ ಫಲವಾಗಿ ಆದಿವಾಸಿಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡಲು ಪ್ರೊ. ಮುಜಾಫರ್ ಅಸಾದಿ ಹೆಸರಿನಲ್ಲಿ ಏಕವ್ಯಕ್ತಿ ಆಯೋಗ ರಚನೆಯಾಯಿತು. ಆ ವರದಿಯನ್ನು ಆಧರಿಸಿ ಹೈಕೋರ್ಟ್ ಆದಿವಾಸಿಗಳ ಪುನರ್ವಸತಿಗೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತು.
ಸ್ಥಳಾಂತರಗೊಂಡ ಆದಿವಾಸಿಗಳಿಗೆ ಪಡಿತರ ಚೀಟಿ ದೊರಕಿಸಿಕೊಟ್ಟು, ಅವರ ಪ್ರದೇಶದಲ್ಲಿ ನ್ಯಾಯಬೆಲೆ ಅಂಗಡಿ ತೆರೆದು ಆಹಾರದ ಕೊರತೆ ನೀಗುವಂತೆ ಮಾಡಿದ್ದವರಲ್ಲಿ ಸೋಮಣ್ಣನ ಪಾತ್ರ ಹಿರಿದು. ನಾಗರಹೊಳೆ ದಟ್ಟಾರಣ್ಯದಲ್ಲಿ ನಿರ್ವಿುಸಲು ಹೊರಟಿದ್ದ ಹೋಟೆಲ್ ವಿರುದ್ಧವೂ ಇವರು ಹೋರಾಡಿದ್ದಾರೆ. ಇದರಿಂದ ಇದು ಸ್ಥಗಿತಗೊಂಡಿತು. ಮೇಧಾ ಪಾಟ್ಕರ್ ಜತೆಗೆ ಸೇರಿ ಸೋಮಣ್ಣ ನರ್ಮದಾ ಬಚಾವ್ ಆಂದೋಲನ, ಪಶ್ಚಿಮಘಟ್ಟ ಉಳಿಸಲು ಕೈಗೊಂಡ ಗೋವಾ- ಕನ್ಯಾಕುಮಾರಿ ಕಾಲ್ನಡಿಗೆ ಜಾಥಾದಲ್ಲೂ ಪಾಲ್ಗೊಂಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
