
ನವದೆಹಲಿ:ಅಶಿಸ್ತಿನ ವರ್ತನೆ ಮತ್ತು ಸಭಾಪತಿಯ ನಿರ್ದೇಶನಗಳ ಕಡೆಗಣನೆ ಹಿನ್ನೆಲೆಯಲ್ಲಿ ಮತ್ತೆ 49 ಸಂಸದರನ್ನು ಅಮಾನತುಗೊಳಿಸಿದ್ದರಿಂದ ಮಂಗಳವಾರ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಬಣದ ಬಲವು ಮತ್ತಷ್ಟು ಕ್ಷೀಣಿಸಿತು. ಸೋಮವಾರದಂದು ಸಂಸತ್ತಿನ ಉಭಯ ಸದನಗಳಿಂದ 78 ಸಂಸದರನ್ನು ಅಮಾನತುಗೊಳಿಸಿದ್ದು, ಮಂಗಳವಾರವೂ ಅಮಾನತು ಪ್ರಕ್ರಿಯೆ ಮುಂದುವರಿಯಿತು.
ಇದರೊಂದಿಗೆ ಸಂಸತ್ತಿನಿಂದ ಅಮಾನತುಗೊಂಡಿರುವ ಒಟ್ಟು ಸಂಸದರ ಸಂಖ್ಯೆ 141ಕ್ಕೆ ಏರಿದೆ. ಸೋಮವಾರ ಲೋಕಸಭೆಯಿಂದ 46 ಸಂಸದರು ಮತ್ತು ರಾಜ್ಯಸಭೆಯಿಂದ 45 ಸಂಸದರನ್ನು ಅಮಾನತುಗೊಳಿಸಲಾಗಿದೆ.
ಮಂಗಳವಾರ ಅಮಾನತುಗೊಂಡ ಸಂಸದರಲ್ಲಿ ಕಾಂಗ್ರೆಸ್‌ನ ಶಶಿ ತರೂರ್, ಮನೀಶ್ ತಿವಾರಿ ಮತ್ತು ಕಾರ್ತಿ ಚಿದಂಬರಂ, ಎನ್‌ಸಿಪಿಯ ಸುಪ್ರಿಯಾ ಸುಳೆ, ಸಮಾಜವಾದಿ ಪಕ್ಷದ ಡಿಂಪಲ್ ಯಾದವ್, ಎನ್‌ಸಿಪಿಯ ಫಾರೂಕ್ ಅಬ್ದುಲ್ಲಾ, ಡಿಎಂಕೆಯ ಎಸ್ ಸೆಂಥಿಲ್‌ಕುಮಾರ್, ಆಮ್ ಆದ್ಮಿ ಪಕ್ಷದ ಸುಶೀಲ್ ಕುಮಾರ್ ರಿಂಕು, ತೃಣಮೂಲ ಕಾಂಗ್ರೆಸ್​ನ ಸುದೀಪ್ ಬಂಧೋಪಾಧ್ಯಾಯ ಸೇರಿದ್ದಾರೆ. ಸಂಸದರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಮಂಡಿಸಿದರು.
ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಕೆಳಮನೆಯಲ್ಲಿ, “ಸದನದೊಳಗೆ ಫಲಕಗಳನ್ನು (ಪ್ಲೆಕಾರ್ಡ್​​) ತರಬಾರದೆಂದು ನಿರ್ಧರಿಸಲಾಗಿದೆ, ಇತ್ತೀಚಿನ ಚುನಾವಣೆಯಲ್ಲಿ ಸೋತ ನಂತರ ಹತಾಶೆಯಿಂದ ಅವರು ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಕಾರಣಕ್ಕಾಗಿ ನಾವು (ಸಂಸದರನ್ನು ಅಮಾನತುಗೊಳಿಸುವ) ಪ್ರಸ್ತಾವನೆಯನ್ನು ತರುತ್ತಿದ್ದೇವೆ.” ಎಂದು ಹೇಳಿದರು.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಖರ್ ಅವರಿಗೆ ಪತ್ರ ಬರೆದು ಸಂಸತ್ತಿನ ಪ್ರಕ್ರಿಯೆಗಳ ಹಿತದೃಷ್ಟಿಯಿಂದ ಸಂಸದರ ಅಮಾನತು ವಿಷಯವನ್ನು ಪರಿಗಣಿಸುವಂತೆ ಕೇಳಿಕೊಂಡಿದ್ದಾರೆ. ಸದನದಲ್ಲಿ ಹಾಜರಿರದ ಅಥವಾ ಅಡ್ಡಿಪಡಿಸಿದ ಕೆಲವು ಸಂಸದರನ್ನು ಕೂಡ ಅಮಾನತುಗೊಳಿಸಲಾಗಿದೆ ಎಂದು ಪವಾರ್ ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕರು ಈ ಸಾಮೂಹಿಕ ಅಮಾನತುಗಳನ್ನು ಬಲವಾಗಿ ಟೀಕಿಸಿದ್ದಾರೆ, ಆಡಳಿತಾರೂಢ ಬಿಜೆಪಿ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಮೂಲಕ ಮತ್ತು ಸಂಸದೀಯ ಭಾಷಣವನ್ನು ಹತ್ತಿಕ್ಕುವ ಮೂಲಕ “ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ” ಎಂದು ಆರೋಪಿಸಿದ್ದಾರೆ.
“ಯಾವುದೇ ಅರ್ಥಪೂರ್ಣ ಚರ್ಚೆಯಿಲ್ಲದೆ ಅಪಾಯಕಾರಿ ಮಸೂದೆಗಳನ್ನು ಅಂಗೀಕರಿಸಲು ಪ್ರತಿಪಕ್ಷಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಾಗುತ್ತಿದೆ. ಡಿಸೆಂಬರ್ 13 ರಂದು ಇಬ್ಬರು ಆರೋಪಿಗಳನ್ನು ಲೋಕಸಭೆಗೆ ಕರೆತಂದ ಬಿಜೆಪಿ ಸಂಸದರನ್ನು ಬಿಟ್ಟುಬಿಡಲು ಇದು ನಡೆಯುತ್ತಿದೆ. ಹೊಸ ಸಂಸತ್ತಿನಲ್ಲಿ ‘ನಮೋಕ್ರಸಿ’ಯ ಎಲ್ಲಾ ರೀತಿಯ ದೌರ್ಜನ್ಯಗಳು ಬೆಳಕಿಗೆ ಬರುತ್ತಿದೆ” ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಪ್ರತಿಪಕ್ಷಗಳು ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭಾ ಅಧ್ಯಕ್ಷರನ್ನು ಅವಮಾನಿಸಿದ್ದರಿಂದ ಈ ಕ್ರಮ ಅಗತ್ಯ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ತಮ್ಮ ನಡವಳಿಕೆಯಿಂದ ದೇಶವನ್ನು “ಮುಜುಗರಕ್ಕೀಡು ಮಾಡುತ್ತಿವೆ” ಎಂದು ಆರೋಪಿಸಿದ ಗೋಯಲ್, ವಿರೋಧ ಪಕ್ಷದ ಸದಸ್ಯರು ಫಲಕಗಳನ್ನು ತಂದು, ಸಂಸತ್ತಿನ ಕಲಾಪಗಳನ್ನು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದರು ಎಂದು ಹೇಳಿದ್ದಾರೆ.

ಟಿಎಂಸಿ ಸಂಸದನಿಂದ ಧನಖರ್​ ಮಿಮಿಕ್ರಿ, ರಾಹುಲ್​ ಗಾಂಧಿಯಿಂದ ಚಿತ್ರೀಕರಣ: ನಾಚಿಕೆಗೇಡು ಎಂದು ಹರಿಹಾಯ್ದ ಉಪರಾಷ್ಟ್ರಪತಿ
ಬೆದರಿಸುವವ, ಅನೇಕ ಕೊಲೆಗಳಲ್ಲಿ ಭಾಗಿಯಾದವ: ಕೇರಳ ಸಿಎಂ ವಿರುದ್ಧ ರಾಜ್ಯಪಾಲ ಖಾನ್​ ವಾಗ್ದಾಳಿ
ಜ್ಞಾನವಾಪಿ ಪ್ರಕರಣದಲ್ಲಿ ಮುಸ್ಲಿಂ ಸಮುದಾಯಕ್ಕೆ ಹಿನ್ನಡೆ: ಪೂಜೆ, ಸಮೀಕ್ಷೆ ವಿರುದ್ಧದ ಮನವಿ ತಿರಸ್ಕರಿಸಿದ ನ್ಯಾಯಾಲಯ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 − 8 =
Remember me
