ನವದೆಹಲಿ: ಸರ್ಕಾರಕ್ಕೆ ಸೆಡ್ಡುಹೊಡೆಯುವ ಹೇಳಿಕೆ ನೀಡಿದ ಸಾಮಾಜಿಕ ಜಾಲತಾಣ ಟ್ವಿಟರ್ ವಿರುದ್ಧ ಗರಂ ಆದ ಕೇಂದ್ರ ಸರ್ಕಾರ, ‘ಪೊದೆ ಕೆದಕುವ ಕಾಲಹರಣದ ಕಾರ್ಯ ಬಿಟ್ಟು, ಈ ನೆಲದ ಕಾನೂನನ್ನು ಗೌರವಿಸಿ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶಕ್ಕೇ ನಿಯಮಗಳ ಪಾಠ ಹೇಳಲು ಬರಬೇಡಿ’ ಎಂದು ತಾಕೀತು ಮಾಡಿದೆ.
‘ನೀತಿ-ನಿಯಮ ರೂಪಿಸುವುದು ಯಾವುದೇ ಸಾರ್ವಭೌಮ ರಾಷ್ಟ್ರದ ಹಕ್ಕು. ಸಾಮಾಜಿಕ ಜಾಲತಾಣ ಸಂಸ್ಥೆಯಾದ ಟ್ವಿಟರ್ ಭಾರತದ ಕಾನೂನು, ನೀತಿಯ ಚೌಕಟ್ಟು ಹೇಗಿರಬೇಕು ಎಂಬುದನ್ನು ನಿರ್ದೇಶಿಸಲಾಗದು. ಟ್ವಿಟರ್ ಹೇಳಿಕೆಯು ಸಂಪೂರ್ಣವಾಗಿ ನಿರಾಧಾರ ಮತ್ತು ಸುಳ್ಳು. ಭಾರತದ ಗೌರವಕ್ಕೆ ಚ್ಯುತಿ ತರುವ ಪ್ರಯತ್ನ’ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಸಚಿವಾಲಯ ತರಾಟೆಗೆ ತೆಗೆದುಕೊಂಡಿದೆ.
‘ಟ್ವಿಟರ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳ ಉದ್ಯೋಗಿಗಳಿಗೆ ದೇಶದಲ್ಲಿ ಯಾವುದೇ ಬೆದರಿಕೆ ಇಲ್ಲ ಮತ್ತು ಅವರೆಲ್ಲರೂ ಸುರಕ್ಷಿತ ಮತ್ತು ಸುಭದ್ರವಾಗಿ ಇದ್ದಾರೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ದೊಡ್ಡ ಪರಂಪರೆ ಶತಮಾನಗಳಿಂದಲೂ ಚಾಲ್ತಿಯಲ್ಲಿದೆ. ಖಾಸಗಿಯವರ ಅದಲ್ಲೂ ಟ್ವಿಟರ್​ನಂತಹ ವಿದೇಶಿ ಸಂಸ್ಥೆಗಳ ಲಾಭದ ದೃಷ್ಟಿಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವಂತಹ ದೈನೇಸಿ ಸ್ಥಿತಿ ದೇಶಕ್ಕೆ ಬಂದಿಲ್ಲ. ಭಾರತದಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಖಾಸಗಿತನದ ಹಕ್ಕು ಯಾವತ್ತೂ ಸುರಕ್ಷಿತವಾಗಿದೆ ಮತ್ತು ಮುಂದೆಯೂ ಸುರಕ್ಷಿತವಾಗಿರುತ್ತದೆ’ ಎಂದು ಟ್ವಿಟರ್ ಹೇಳಿಕೆಗೆ ತಿರುಗೇಟು ನೀಡಿದೆ.
ಟ್ವಿಟರ್ ತನಿಖೆಗೆ ಸಹರಿಸುತ್ತಿಲ್ಲ. ಅವರಿಗೆ ದೇಶದ ಪೊಲೀಸ್ ಮತ್ತು ನ್ಯಾಯಾಂಗದ ಬಗ್ಗೆ ಗೌರವ ಇಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಟ್ವಿಟರ್ ಸಂಸ್ಥೆಯೇ ಸತ್ಯ ಏನು ಎಂಬುದನ್ನು ನಿರ್ಣಯಿಸುವುದು ‘ಅದ್ಭುತ’. ಅದು ನಡೆಸಿರುವ ತನಿಖೆ ಮತ್ತು ನಿರ್ಣಯ ಏನು ಎಂಬುದನ್ನಾದರೂ ತನಿಖಾ ಸಂಸ್ಥೆಗಳ ಜತೆ ಹಂಚಿಕೊಳ್ಳಬೇಕಲ್ಲವೆ? ಎಂದು ದೆಹಲಿ ಪೊಲೀಸ್ ವಕ್ತಾರರು ಹೇಳಿದ್ದಾರೆ.
ವಿನಾಯಿತಿ ಕೋರಿದ ಎನ್​ಬಿಎ
ಡಿಜಿಟಲ್ ವೇದಿಕೆಗಳಿಗೆ ಜಾರಿ ಮಾಡಲಾಗಿರುವ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮದಿಂದ ಸಾಂಪ್ರದಾಯಕ ಟಿವಿ ಮಾಧ್ಯಮಗಳಿಗೆ ವಿನಾಯಿತಿ ನೀಡಬೇಕು. ಹೊಸ ನೀತಿಯಲ್ಲಿ ರುವ ಬಹುತೇಕ ನಿಯಮಗಳನ್ನು ಸುದ್ದಿ ವಾಹಿನಿ ಗಳು ಈಗಾಗಲೇ ಅನುಸರಿಸುತ್ತಿವೆ ಎಂದು ಸುದ್ದಿ ಪ್ರಸಾರಕರ ಅಸೋಸಿಯೇಷನ್ (ಎನ್​ಬಿಎ) ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
ವಿಚಾರಣೆಗೆ ಸಹಕರಿಸದ ಟ್ವಿಟರ್
ಟ್ವಿಟರ್ ಹೇಳಿದ್ದೇನು?: ಸಂಸ್ಥೆಯು ನೌಕರರ ಹಿತರಕ್ಷಣೆಯನ್ನು ಗಮನಿಸುತ್ತಿದೆ. ಭಾರತದಲ್ಲಿನ ಇತ್ತೀಚಿನ ಬೆಳವಣಿಗೆಗಳು ತನ್ನ ಉದ್ಯೋಗಿಗಳಿಗೆ ಸುರಕ್ಷತೆ ಮತ್ತು ಬಳಕೆದಾರರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆತಂಕಕಾರಿಯಾಗಿದೆ ಎಂದು ಟ್ವಿಟರ್ ಕಳವಳ ವ್ಯಕ್ತಪಡಿ ಸಿತ್ತು. ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಇತ್ತೀಚೆಗೆ ಮಾಡಿದ ‘ಕಾಂಗ್ರೆಸ್ ಟೂಲ್ಕಿಟ್’ ಪೋಸ್ಟ್​ಗೆ ‘ತಿರುಚಲಾದ ಮಾಹಿತಿ’ ಟ್ಯಾಗ್ ಹಾಕಿದ್ದರಿಂದ ದೆಹಲಿ ಪೊಲೀಸರು ಕಚೇರಿಗೆ ಬಂದು ನೋಟಿಸ್ ನೀಡಿದ್ದಕ್ಕೆ ಟ್ವಿಟರ್ ಹೀಗೆ ಹೇಳಿತ್ತು.
ತಪ್ಪು ಮಾಹಿತಿ ಹಂಚಿಕೆದಾರರ ವಿರುದ್ಧ ಕ್ರಮ
ಪದೇ ಪದೆ ತಪ್ಪು ಮಾಹಿತಿ ಅಥವಾ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವ ಬಳಕೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಫೇಸ್​ಬುಕ್ ಘೋಷಿಸಿದೆ. ತಪು್ಪಮಾಹಿತಿ ಪರಿಶೀಲಿಸಲು ‘ಫ್ಯಾಕ್ಟ್ ಚೆಕರ್ಸ್’ ಮಗ್ನರಾಗಿದ್ದು, ಇಂಥ ಪೋಸ್ಟ್ಗಳನ್ನು ಮಾಡುವ ಬಳಕೆದಾರರ ರೇಟಿಂಗ್ ಮಾಡಲಾಗುತ್ತಿದೆ. ಜತೆಗೆ ತಪು್ಪಮಾಹಿತಿ ಪೋಸ್ಟ್​ಗಳ ಬಗ್ಗೆ ಬಳಕೆದಾರರಿಗೆ ತಿಳಿವಳಿಕೆ ನೀಡುವ ಕಾರ್ಯ ಕೂಡ ಆಗುತ್ತಿದೆ. ಈಗ ಹೊರಡಿಸಿರುವ ಹೊಸ ಅಧಿಸೂಚನೆಯು ಈ ವಿಷಯವನ್ನು ಇನ್ನಷ್ಟು ಸ್ಪಷ್ಟ ಮತ್ತು ಸರಳಗೊಳಿಸುತ್ತದೆ ಎಂದು ಫೇಸ್​ಬುಕ್ ತಿಳಿಸಿದೆ.
ಕೋಟ್
ಬಳಕೆದಾರರ ಖಾಸಗಿತನವನ್ನು ಸರ್ಕಾರ ಸಂಪೂರ್ಣವಾಗಿ ಮಾನ್ಯ ಮಾಡುತ್ತದೆ ಮತ್ತು ಗೌರವಿಸುತ್ತದೆ. ಹೀಗಾಗಿ ವಾಟ್ಸ್ ಆಪ್​ನ ಬಳಕೆದಾರರು ಹೊಸ ನೀತಿಯ ಬಗ್ಗೆ ಕಳವಳಗೊಳ್ಳುವ ಅವಶ್ಯಕತೆ ಇಲ್ಲ. ನೂತನ ನಿಯಮದ ಉದ್ದೇಶ ಅಪರಾಧಕ್ಕೆ ಕಾರಣವಾಗುವ ಮಾಹಿತಿಯ ಮೂಲ ಯಾವುದೆಂಬುದನ್ನು ತಿಳಿದುಕೊಳ್ಳುವುದಾಗಿದೆ.
| ರವಿಶಂಕರ ಪ್ರಸಾದ್, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಸಂವಹನ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seventeen =
Remember me
