| ಮಂಜುನಾಥ ಕೆ. ಬೆಂಗಳೂರು
ವಾಹನ ಸವಾರರು ಚಾಲನೆ ವೇಳೆ ಡ್ರೖೆವಿಂಗ್ ಲೈಸೆನ್ಸ್ (ಡಿಎಲ್) ಹಾಗೂ ರಿಜಿಸ್ಟ್ರೇಷನ್ ಕಾರ್ಡ್ (ಆರ್​ಸಿ) ಸೇರಿ ವಾಹನದ ದಾಖಲಾತಿಗಳನ್ನು ಭೌತಿಕವಾಗಿ ಇಟ್ಟುಕೊಳ್ಳುವುದು ಕಡ್ಡಾಯವಲ್ಲ. ಇನ್ನು ಮುಂದೆ ಎಲೆಕ್ಟ್ರಾನಿಕ್ ದಾಖಲೆ ಹೊಂದಿದ್ದರೂ ಸಂಚಾರಿ ಪೊಲೀಸರು ತಡೆಯುವಂತಿಲ್ಲ..!
ಡಿಜಿ ಲಾಕರ್ ದಾಖಲಾತಿ ಪರಿಗಣಿಸುವ ವ್ಯವಸ್ಥೆ ಕರ್ನಾಟಕದಲ್ಲಿ ಈಗಾಗಲೇ ಜಾರಿಯಲ್ಲಿದ್ದರೂ ಬಹುತೇಕ ಸವಾರರಿಗೆ ಈ ಮಾಹಿತಿ ತಿಳಿದಿರಲಿಲ್ಲ. ಇದೀಗ ಪೊಲೀಸರು ಈ ಸೇವೆಯನ್ನು ಎಲ್ಲ ಸವಾರರು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಅನುಮೋದಿತ ಎಂ-ಪರಿವಾಹನ್ ಹಾಗೂ ಡಿಜಿ ಲಾಕರ್​ನಲ್ಲಿ ಅಪ್​ಲೋಡ್ ಮಾಡಿಕೊಂಡಿರುವ ದಾಖಲಾತಿಗಳನ್ನು ಪೊಲೀ ಸರು ಇನ್ನು ಮುಂದೆ ಪರಿಗಣಿಸಲಿದ್ದಾರೆ.
ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯು ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಡಿಜಿ ಲಾಕರ್ ಸೇವೆಯನ್ನು ನಾಗರಿಕರಿಗೆ ಒದಗಿಸಿದೆ. ಈ ಮೂಲಕ ಡಿಜಿಟಲ್​ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸರ್ಕಾರವು ಕಾಗದರಹಿತ ಮತ್ತು ನಾಗರಿಕ ಸ್ನೇಹಿ ವ್ಯವಸ್ಥೆ ಸೃಷ್ಟಿಸುವ ಸಲುವಾಗಿ ಎಂ-ಪರಿವಾಹನ್/ಡಿಜಿ ಲಾಕರ್ ಅಪ್ಲಿಕೇಶನ್​ಗಳನ್ನು ಬಳಕೆ ಮಾಡಲು ಅನುಮತಿ ನೀಡಿದೆ. ಈ ಎರಡು ಆಪ್​ಗಳ ಮೂಲಕ ತೋರಿಸುವ ಡಿಎಲ್, ಆರ್​ಸಿ ಕಾರ್ಡ್ ಸೇರಿ ಇತರೆ ದಾಖಲೆಗಳನ್ನು ಪೊಲೀಸರು ಮತ್ತು ಆರ್​ಟಿಒ ಅಧಿಕಾರಿಗಳು ಮಾನ್ಯ ಮಾಡಬೇಕಿದೆ.
ಆಂಧ್ರ ಸವಾರರಿಗೆ ರಿಲ್ಯಾಕ್ಸ್:ಹೊಸ ಆದೇಶದ ಪ್ರಕಾರ ಆಂಧ್ರದ ವಾಹನ ಚಾಲಕರು ಕರ್ನಾಟಕದ ಎಲ್ಲಾ ಘಟಕಗಳಲ್ಲಿ ಡಿಎಲ್, ನೋಂದಣಿ ಪ್ರಮಾಣ ಪತ್ರ, ಇತರ ವಾಹನ ದಾಖಲಾತಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರದರ್ಶಿಸಿದಲ್ಲಿ ಮಾನ್ಯತೆ ಮಾಡುವಂತೆ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳನ್ನು ಭೌತಿಕ ಸ್ವರೂಪದಲ್ಲಿ ಡಿಜಿಟಲ್ ಚಿಪ್ ಆಧಾರಿತ ಆರ್​ಸಿ/ಡಿಎಲ್ ಸ್ಮಾರ್ಟ್ ಕಾರ್ಡ್​ಗಳನ್ನು ಹಂಚಿಕೆ ಮಾಡಿಲ್ಲ. ಬದಲಿಗೆ ಡಿಎಲ್, ನೋಂದಣಿ ಪ್ರಮಾಣ ಪತ್ರ ಹಾಗೂ ಇತರೆ ವಾಹನ ದಾಖಲಾತಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ತಂತ್ರಜ್ಞಾನ/ಮೊಬೈಲ್ ಆಪ್ ಸ್ವರೂಪದಲ್ಲಿ ಬಳಕೆ ಮಾಡಿ ಪ್ರದರ್ಶಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ವಾಹನ ಮಾಲೀಕರು/ಚಾಲಕರು ತಮ್ಮ ಡಿಎಲ್/ಆರ್​ಸಿಯನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರದರ್ಶಿಸಿದ ಪಕ್ಷದಲ್ಲಿ ಅವುಗಳನ್ನು ಒಪ್ಪಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಆಂಧ್ರ ವಾಹನ ಸಂಚಾರಕ್ಕೆ ಸಮಸ್ಯೆ:ಆಂಧ್ರಪ್ರದೇಶದಲ್ಲಿ ಲಾರಿ ಮಾಲೀಕರ ಸಂಘವು ತಮ್ಮ ರಾಜ್ಯದ ವಾಹನಗಳು ಸಂಚರಿಸುವಾಗ ತಮಗೆ ವಿತರಣೆಯಾಗಿರುವ ಡಿಎಲ್​ನಲ್ಲಿ ಡಿಜಿಟಲ್ ಚಿಪ್ ಇಲ್ಲದ ಕಾರಣ ಕರ್ನಾಟಕದಲ್ಲಿ ಮಾನ್ಯ ಮಾಡುತ್ತಿಲ್ಲ. ಇದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಇ ದಾಖಲಾತಿ ತೋರಿಸಿದರೂ ಮಾನ್ಯ ಮಾಡುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಎಂ-ಪರಿವಾಹನ್/ಡಿಜಿ ಲಾಕರ್ ಅಪ್ಲಿಕೇಶನ್​ನಲ್ಲಿ ತೋರಿಸುವ ದಾಖಲೆಗಳನ್ನು ಪರಿಗಣಿಸಲು ಪೊಲೀಸರು ಹಾಗೂ ಆರ್​ಟಿಒ ಅಧಿಕಾರಿಗಳಿಗೆ ಅನುಮತಿ ಕೊಟ್ಟಿದೆ.
1. ಎಂ-ಪರಿವಾಹನ್ ಮತ್ತು ಡಿಜಿ ಲಾಕರ್ ಆಪ್ ಕೇಂದ್ರ ಸರ್ಕಾರ ಅನುಮೋದಿತ
2. ಮೊಬೈಲ್ ಆಪ್​ನಲ್ಲಿ ಡಿಎಲ್, ವಾಹನದ ಸಂಖ್ಯೆ ಹಾಕಿದರೆ ವಿವರ ತೋರಿಸುತ್ತದೆ
3. ಭೌತಿಕ ಸ್ವರೂಪದಲ್ಲಿ ಇಲ್ಲದ ದಾಖಲೆಗಳನ್ನು ಆಪ್​ನಲ್ಲಿ ತೋರಿಸಬಹುದು
ಎಂ- ಪರಿವಾಹನ್ ಮತ್ತು ಡಿಜಿ ಲಾಕರ್ ಆಪ್​ಗಳ ಮೂಲಕ ತೋರಿಸುವ ದಾಖಲೆಗಳನ್ನು ಮಾನ್ಯ ಮಾಡಲಾಗುತ್ತದೆ. ಈ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಆದರೆ, ಮೊಬೈಲ್ ಫೋನ್​ನಲ್ಲಿ ಇಟ್ಟುಕೊಂಡಿರುವ ದಾಖಲೆ ಮತ್ತು ವ್ಯಾಟ್ಸ್ ಆಪ್​ನಲ್ಲಿ ತೋರಿಸುವ ದಾಖಲೆ ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲ.
| ಎಂ.ಎನ್.ಅನುಚೇತ್ ಜಂಟಿ ಪೊಲೀಸ್ ಆಯುಕ್ತ (ಬೆಂಗಳೂರು ಸಂಚಾರ ವಿಭಾಗ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − 1 =
Remember me
