ಮುಂಬೈ:ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು (ನ.15) ನಡೆದ ವಿಶ್ವಕಪ್​ ಟೂರ್ನಿಯ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಭಾರತೀಯ ಬ್ಯಾಟರ್​ಗಳ ಅಬ್ಬರ ಮತ್ತು ಮೊಹಮ್ಮದ್​ ಶಮಿ (7/10) ಮಾರಕ ಬೌಲಿಂಗ್​ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ಸೋಲಿನ ಕಹಿ ಅನುಭವಿಸುವುದರೊಂದಿಗೆ ವಿಶ್ವಕಪ್​ ಅಭಿಯಾನವನ್ನು ಮುಗಿಸಿತು. 2019ರ ವಿಶ್ವಕಪ್​ ಸೆಮೀಸ್​​ನಲ್ಲಿ ಕಿವೀಸ್​ ವಿರುದ್ಧ ಸೋತು ಮುಖಭಂಗ ಅನುಭವಿಸಿದ್ದ ಟೀಮ್​ ಇಂಡಿಯಾ, ಅದೇ ತಂಡವನ್ನು ಮಣಿಸಿ ಸೇಡು ತೀರಿಸಿಕೊಳ್ಳುವುದರೊಂದಿಗೆ ಫೈನಲ್​ಗೆ ಲಗ್ಗೆ ಇಟ್ಟಿದೆ. ವಿಶ್ವಕಪ್​ ಟ್ರೋಫಿಯನ್ನು ಎತ್ತಿಹಿಡಿಯಲು ಇನ್ನೂ ಒಂದೇ ಹೆಜ್ಜೆ ಬಾಕಿ ಇದೆ.
ಟೀಮ್​ ಇಂಡಿಯಾ ನೀಡಿದ್ದ 397 ರನ್​ಗಳ ಬೃಹತ್​ ಗುರಿ ಬೆನ್ನತ್ತಿದ ಕಿವೀಸ್​ ಪಡೆ 48.5 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 327ರನ್​ ಗಳಿಸುವ ಮೂಲಕ 70 ರನ್​ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಡೆವನ್​ ಕಾನ್ವೇ (13) ಮತ್ತು ರಚಿನ್​ ರವೀಂದ್ರ (13)ಗೆ ಮೊಹಮ್ಮದ್​ ಶಮಿ ಶಾಕ್​ ನೀಡಿದರು. ಇಬ್ಬರು ಆರಂಭಿಕರು ಬಹುಬೇಗನೇ ಔಟಾಗಿದ್ದು ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಕೇವಲ 39 ರನ್​ಗೆ ಎರಡು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನಾಯಕ ಕೇನ್​ ವಿಲಿಯಮ್ಸನ್​ ಮತ್ತು ಡರೈಲ್​ ಮಿಚೆಲ್ ಬೂಸ್ಟರ್​ ಡೋಸ್​ ನೀಡಿದರು.
ಇದನ್ನೂ ಓದಿ:ಒಂದೇ ಇನ್ನಿಂಗ್ಸ್​ನಲ್ಲಿ ‘ಕ್ರಿಕೆಟ್ ದೇವರ’ 2 ದಾಖಲೆ ಮುರಿದ ಕೊಹ್ಲಿ!; ಜತೆಗೆ ಇನ್ನೊಂದು ಹೆಗ್ಗಳಿಕೆಗೂ ಪಾತ್ರರಾದ ವಿರಾಟ್
ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮವಾಗಿ ಬ್ಯಾಟ್​ ಬೀಸಿದ ವಿಲಿಯಮ್ಸನ್​ ಮತ್ತು ಮಿಚೆಲ್​ 181 ರನ್​ಗಳ ಜತೆಯಾಟವಾಡುವ ಮೂಲಕ ಗೆಲವುದನ್ನು ತಮ್ಮ ಕಡೆ ವಾಲಿಸಿಕೊಂಡಿದ್ದರು. ಆದರೆ, ಈ ಜೋಡಿಗೂ ಮೊಹಮ್ಮದ್​ ಶಮಿ ಮುಳ್ಳಾದರು. 73 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್​ ಸಿಡಿಸಿ ತಾಳ್ಮೆಯ ಆಟವಾಡುತ್ತಿದ್ದ ವಿಲಿಯಮ್ಸನ್​ ಅವರನ್ನು ಮೊಹಮ್ಮದ್​ ಶಮಿ ಔಟ್ ಮಾಡಿದರು. ಆದರೆ, ಮಿಚೆಲ್​ ಮಾತ್ರ ತಮ್ಮ ಬ್ಯಾಟಿಂಗ್​ ಆರ್ಭಟವನ್ನು ಮುಂದುರಿಸಿದರು. ವಿಲಿಯಮ್ಸನ್​ ಔಟ್​ ಆದ ಬಳಿಕ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಟಾಮ್​ ಲಾಥಮ್​ (0) ಅವರನ್ನು ಶಮಿ, ಬಂದಷ್ಟೇ ವೇಗವಾಗಿ ಪೆವಲಿಯನ್​ ಕಳುಹಿಸಿದರು.
ಇದನ್ನೂ ಓದಿ:ಗಗನಸಖಿಯ ಹತ್ಯೆ ಮಾಡಲು ಹೋಗಿ ಒಟ್ಟು ನಾಲ್ವರ ಕೊಂದ; ಕೊಲೆಗಿದ್ದ ಆ ಮೂರು ಉದ್ದೇಶಗಳು ಯಾವುವು?
ಲಾಥಮ್​ ಔಟಾದ ಬಳಿಕ ಕ್ರೀಸ್​ಗೆ ಆಗಮಿಸಿದ ಗ್ಲೆನ್​ ಫಿಲಿಪ್ಸ್​, ಡರೈಲ್​ ಮಿಚೆಲ್​ಗೆ ಸಾಥ್​ ನೀಡಿದರು. ಮತ್ತೆ ಮಧ್ಯಮ ಕ್ರಮಾಂಕದಲ್ಲಿ ಈ ಜೋಡಿ 75 ರನ್​ಗಳ ಜತೆಯಾಟ ಆಡಿ ಗೆಲುವನ್ನು ಮತ್ತೆ ತಮ್ಮತ್ತ ವಾಲಿಸಿಕೊಂಡಿದ್ದರು. ಆದರೆ, ಈ ಸಂದರ್ಭದಲ್ಲಿ ಬೌಲಿಂಗ್​ಗೆ ಇಳಿದ ಜಸ್ಪ್ರಿತ್​ ಬೂಮ್ರಾ ಕೇವಲ 33 ಎಸೆತಗಳಲ್ಲಿ 41 ರನ್​ ಗಳಿಸಿದ್ದ ಗ್ಲೇನ್​ ಫಿಲಿಪ್ಸ್​ ಅವರ ವಿಕೆಟ್​ ಉರುಳಿಸುವ ಮೂಲಕ ಜತೆಯಾಟವನ್ನು ಮುರಿದರು. ಇದರ ಬೆನ್ನಲ್ಲೇ ಮಾರ್ಕ್​ ಛಪ್​ಮನ್​ (2) ಗೆ ಕುಲದೀಪ್​ ಯಾದವ್​ ಪೆವಿಲಿಯನ್​ ದಾರಿ ತೋರಿದರು.
ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದು ಭಾರತದ ಬೌಲರ್​ಗಳನ್ನು ಕಾಡಿದ ಡರೈಲ್​ ಮಿಚೆಲ್ ಭಾರತ ಪಾಲಿಗೆ ಸವಾಲಾಗಿ ಪರಿಣಮಿಸಿದರು. ಎರಡು ಬಾರಿ ಗೆಲುವನ್ನು ತಮ್ಮ ಕಡೆ ವಾಲಿಸಿಕೊಂಡಿದ್ದರು. ಕೇವಲ 119 ಎಸೆತಗಳಲ್ಲಿ 9 ಬೌಂಡರಿ ಹಾಗೂ 7 ಸಿಕ್ಸರ್​ನೊಂದಿಗೆ 134 ರನ್​ ಗಳಿಸಿದ್ದ ಡರೈಲ್​ ಮಿಚೆಲ್​ ಓಟಕ್ಕೆ ಮೊಹಮ್ಮದ್​ ಶಮಿ ಬ್ರೇಕ್​ ಹಾಕಿದರು. ಅಲ್ಲಿಗೆ ಭಾರತದ ಗೆಲುವು ನಿಶ್ಚಯವಾಯಿತು. ಉಳಿದಂತೆ ಮಿಚೆಲ್​ ಸ್ಯಾಂಟ್ನರ್​ (9), ಟಿಮ್​ ಸೌಥಿ (9), ಲುಕಿ ಫರ್ಗ್ಯೂಸನ್​ (6) ರನ್ ಗಳಿಸಿ ಔಟಾದರೆ, ಟ್ರೆಂಟ್​ ಬೌಲ್ಟ್​ (2) ರನ್ ಗಳಿಸಿ ಅಜೇಯರಾಗಿ ಉಳಿದರು.
ಟೀಮ್​ ಇಂಡಿಯಾ ಪರ ಮಾರಕ ಬೌಲಿಂಗ್​ ದಾಳಿ ಮಾಡಿದ ಮೊಹಮ್ಮದ್​ ಶಮಿ 7 ವಿಕೆಟ್​ಗಳನ್ನು ಕಬಳಿಸುವ ಮೂಲಕ ನ್ಯೂಜಿಲೆಂಡ್​ ಪಾಲಿಗೆ ಅಕ್ಷರಶಃ ಮುಳ್ಳಾದರು. ಉಳಿದಂತೆ ಜಸ್​ಪ್ರಿತ್​ ಬೂಮ್ರಾ, ಕುಲದೀಪ್​​ ಯಾದವ್​ ಮತ್ತು ಮೊಹಮ್ಮದ್​ ಸಿರಾಜ್ ತಲಾ ಒಂದೊಂದು ವಿಕೆಟ್​ ಪಡೆದರು.​
ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಟೀಮ್​ ಇಂಡಿಯಾ ನಿಗದಿತ 50 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 397 ರನ್ ಕಲೆಹಾಕಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್​ ಶರ್ಮ ಮತ್ತು ಶುಭಮಾನ್​ ಗಿಲ್​ 71 ರನ್​ಗಳ ಉತ್ತಮ ಆರಂಭ ಒದಗಿಸಿಕೊಟ್ಟರು. ಕೇವಲ 29 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್​ ಸಿಡಿಸಿ ಬಿರುಸಿನ ಆಟವಾಡುತ್ತಾ ಕಿವೀಸ್​ ಬೌಲರ್​​ಗಳಲ್ಲಿ ನಡುಕು ಹುಟ್ಟಿಸಿದ ಹಿಟ್​ ಮ್ಯಾನ್​ ರೋಹಿತ್ (47)​ ಅರ್ಧಶತಕಕ್ಕೆ ಇನ್ನೂ 3 ರನ್​ ಬಾಕಿ ಇರುವಾಗ ಟಿಮ್​ ಸೌಥಿ ಬೌಲಿಂಗ್​ನಲ್ಲಿ ವಿಲಿಯಮ್ಶನ್​ಗೆ ಕ್ಯಾಚಿತ್ತು ನಿರ್ಗಮಿಸಿದರು.
ಇದನ್ನೂ ಓದಿ:‘ಕ್ರಿಕೆಟ್​ ದೇವರು ನುಡಿದ ಮಾತು ಇಂದು ಸತ್ಯವಾಯಿತು’!; ಥೇಟ್​ ಸಚಿನ್​ರಂತೆ ಕಾಣುವ ವ್ಯಕ್ತಿ ಹೇಳಿದ್ದೇನು?
ಬಳಿಕ ಶುಭಮಾನ್​ ಗಿಲ್​ ಜತೆಯಾದ ವಿರಾಟ್​ ಕೊಹ್ಲಿ ತಾಳ್ಮೆಯ ಆಟದೊಂದಿಗೆ ಇನಿಂಗ್ಸ್​ ಕಟ್ಟಿದರು. ರೋಹಿತ್​ಗಿಂತ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಬ್ಯಾಟ್​ ಬೀಸುತ್ತಿದ್ದ ಗಿಲ್​ 65 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ನೆರವಿನೊಂದಿಗೆ ನಿರ್ಣಾಯಕ ಪಂದ್ಯದಲ್ಲಿ 79 ರನ್​ ಗಳಿಸಿ ಭರ್ಜರಿ ಆಟವಾಡುತ್ತಿದ್ದಾಗ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಹಠಾತ್‌ ಪೆವಿಲಿಯನ್‌ಗೆ ಮರಳಿದರು. ಬಳಿಕ ಕೊಹ್ಲಿ ಜತೆಗೂಡಿದ ಶ್ರೇಯಸ್​ ಅಯ್ಯರ್​ ಬ್ಯಾಟಿಂಗ್​ನಲ್ಲಿ ಉತ್ತಮ ಸಾಥ್​ ನೀಡಿದರು.
ತಾಳ್ಮೆಯ ಆಟದೊಂದಿಗೆ ವಿಶ್ವಕಪ್​ ಟೂರ್ನಿಯ ಮಹತ್ವದ ಪಂದ್ಯದಲ್ಲಿ ವೃತ್ತಿಜೀವನದ ಅಮೋಘ ಇನಿಂಗ್ಸ್​ ಆಡಿದ ಚೇಸ್‌ ಮಾಸ್ಟರ್‌, ಸ್ಟಾರ್‌ ಕ್ರಿಕೆಟಿಗ ಮತ್ತು ಕ್ರಿಕೆಟ್‌ ಲೋಕದ ಕಿಂಗ್‌ ಕೊಹ್ಲಿ 117 ರನ್​ಗಳನ್ನು ಸಿಡಿಸಿದರು. ಇತ್ತೀಚೆಗೆ ಅಂದರೆ, ನ.5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿಯೂ ಅಬ್ಬರಿಸಿದ್ದ ಕೊಹ್ಲಿ, 35ನೇ ವರ್ಷದ ಹುಟ್ಟುಹಬ್ಬದ ದಿನದಂದೇ ಶತಕ ಸಿಡಿಸಿ ಸಚಿನ್‌ ತೆಂಡೂಲ್ಕರ್‌ ಅವರ 49 ಶತಕಗಳ ದಾಖಲೆಯನ್ನ ಸರಿಗಟ್ಟಿದ್ದರು ಎಂಬುದನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಲೇಬೇಕು.
ನ.12ರಂದು ನೆದರ್ಲೆಂಡ್ಸ್​ ವಿರುದ್ಧ ನಡೆದ ವಿಶ್ವಕಪ್ ಟೂರ್ನಿಯ​ ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ ಅಬ್ಬರಿಸಿದ್ದ ಶ್ರೇಯಸ್​ ಅಯ್ಯರ್ 128 ರನ್​ ಗಳಿಸಿದ್ದರು. ಇಂದಿನ ನಿರ್ಣಾಯಕ ಪಂದ್ಯದಲ್ಲಿಯೂ ಶತಕ ಸಿಡಿಸಿ ಭಾರತಕ್ಕಿದ್ದ ಅತಿದೊಡ್ಡ ಚಿಂತೆಯಾದ ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್​ ಕೊರತೆಯನ್ನು ಹೋಗಲಾಡಿಸಿದರು. ಕೇವಲ 70 ಎಸೆತಗಳನ್ನು ಎದುರಿಸಿದ ಅಯ್ಯರ್​ 4 ಬೌಂಡರಿ, 8 ಸಿಕ್ಸರ್​ಗಳ ನೆರವಿನಿಂದ 105 ರನ್​ ಕಲೆಹಾಕಿದರು. ಈ ಮೂಲಕ ಪ್ರಸಕ್ತ ವಿಶ್ವಕಪ್​ನಲ್ಲಿ ಎರಡನೇ ಶತಕವನ್ನು ಸಂಭ್ರಮಿಸಿದರು.
ಇದನ್ನೂ ಓದಿ:ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?
ಉಳಿದಂತೆ ಸೂರ್ಯಕುಮಾರ್​ ಯಾದವ್​ 1 ರನ್​ ಗಳಿಸಿ ಔಟಾದರೆ, ಕೊನೆಯಲ್ಲಿ ಅಬ್ಬರಿಸಿದ ಕನ್ನಡಿಗ ಕೆ.ಎಲ್​ ರಾಹುಲ್​ 20 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್​ ನೆರವಿನಿಂದ 39 ರನ್​ ಗಳಿಸಿ ಅಜೇಯರಾಗಿ ಉಳಿದರು.
ಇದನ್ನೂ ಓದಿ:ವಿರಾಟ್ ಕೊಹ್ಲಿಯ ರೆಕಾರ್ಡ್ ಬ್ರೇಕಿಂಗ್​ ಆಟಕ್ಕೆ ಮೆಚ್ಚುಗೆಯ ಮಹಾಪೂರ; ಯಾರ್ಯಾರು, ಏನಂದ್ರು?
ನ್ಯೂಜಿಲೆಂಡ್​ ಪರ ಟಿಮ್​ ಸೌಥಿ​ 2 ವಿಕೆಟ್​ ಪಡೆದರೆ, ಟ್ರೆಂಟ್​ ಬೋಲ್ಸ್​ 1 ವಿಕೆಟ್​ಗೆ ತೃಪ್ತಿಪಟ್ಟುಕೊಂಡರು. ಆದರೂ ಯಾವೊಬ್ಬ ಬೌಲರ್​ಗಳು ಕೂಡ ರನ್​​ ಎಂಬ ಟೀಮ್​ ಇಂಡಿಯಾ ಅಶ್ವಮೇಧವನ್ನು ತಡೆಯಲು ಸಾಧ್ಯವಾಗಲಿಲ್ಲ. ಪಂದ್ಯದ ಮೊದಲ ಓವರ್​ನಿಂದಲೇ ಕಿವೀಸ್​ ಬೌಲರ್​ಗಳನ್ನು ಮನಸೋ ಇಚ್ಛೆ ಬೆಂಡೆತ್ತಿದ ಭಾರತ 397 ರನ್​ಗಳ ಬೃಹತ್​ ರನ್​ ಗಳಿಸುವಲ್ಲಿ ಯಶಸ್ವಿಯಾಯಿತು. ಗುರಿ ಬೆನ್ನತ್ತಲಾಗದೇ ಟೀಮ್​ ಇಂಡಿಯಾ ಎದುರು ಕಿವೀಸ್ ಸೋಲೊಪ್ಪಿಕೊಂಡಿದ್ದು, ವಿಶ್ವಕಪ್​ ಪ್ರಯಾಣವನ್ನು ಮುಗಿಸಿದೆ. ಅಮೋಘ ಗೆಲುವು ದಾಖಲಿಸಿ ಭಾರತ ಫೈನಲ್​ಗೆ ಲಗ್ಗೆ ಇಟ್ಟಿದೆ. ನಾಳೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಯಾರು ಗೆಲುವು ಸಾಧಿಸುತ್ತಾರೋ ಅವರು ಭಾರತದ ವಿರುದ್ಧ ಫೈನಲ್​ಲ್ಲಿ ಟ್ರೋಫಿಗಾಗಿ ಕಾದಾಡಲಿದ್ದಾರೆ.
‘ದೇವ್ರು’ ಮೆಚ್ಚೋ ಆಟ ಆಡಿದ ವಿರಾಟ್​: ‘ಆ ದಿನ ನನಗೆ ನಗು ತಡೆಯಲು ಆಗಲಿಲ್ಲ’ ಎಂದ ಸಚಿನ್

ತಕ್ಷಣದಿಂದಲೇ ಜಾರಿಗೆ ಬರುವಂತೆ ಆರ್​ಬಿಐನಿಂದ ಮಹತ್ವದ ಸೂಚನೆ: ಸಾಲ ನೀಡದಂತೆ ನಿರ್ದೇಶನ; ಯಾರಿಗೆ, ಯಾಕೆ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seven − two =
Remember me
